ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾಗಿದ್ದ ಈಸೂರು ಬಸವರಾಜ್(65) ಅವರು ಶುಕ್ರವಾರ ನಿಧನರಾದರು.
ಕೋವಿಡ್ ಸೋಂಕು ತಗುಲಿ ಕಳೆದ ಒಂದು ತಿಂಗಳಿಂದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಅಸುನೀಗಿದ್ದಾರೆ. ಇವರಿಗೆ ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಈಸೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈಸೂರು ಬಸವರಾಜ್ ನಿಧನರಾಗಿದ್ದು, ಈಸೂರಿನಲ್ಲಿ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿದೆ.
ದೇವಾಂಗ ಸಮಾಜದ ಮುಂಚೂಣಿ ನಾಯಕ | ದೇವಾಂಗ ಸಮಾಜಕ್ಕಾಗಿ ನಿರಂತರ ಶ್ರಮಿಸಿರುವ ಇವರು ಸಮಾಜವನ್ನು ಒಗ್ಗೂಡಿಸುವಲ್ಲಿ ಸಕ್ರಿಯರಾಗಿದ್ದರು. ಮೀಸಲಾತಿ ಪರ ದನಿ ಎತ್ತಿದ್ದರು. ದೇವಾಂಗ ವಿಶೇಷ ಮೀಸಲಾತಿ ಸಮಿತಿ ಕಟ್ಟಿಕೊಂಡು ಅವಿರತವಾಗಿ ಶ್ರಮಿಸಿದ್ದರು.
ಇವರ ಸಾವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ರಾಘವೇಂದ್ರ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.