ಸುದ್ದಿ ಕಣಜ.ಕಾಂ | DISTRICT | RELIGIOUS
ಶಿವಮೊಗ್ಗ: ಏಪ್ರಿಲ್ 10 ರಿಂದ 24 ರ ವರೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರ ಶ್ರೀಮಠದಲ್ಲಿ ಐತಿಹಾಸಿಕ ಮಹಾ ಕುಂಭಾಭಿಷೇಕ ಮಹೋತ್ಸವ ಆಯೋಜಿಸಲಾಗಿದೆ.
ನಗರದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಹರಿಹರಪುರ ಮಹಾ ಕುಂಭಾಭಿಷೇಕ ಸಮಿತಿಯ ಶಿವಮೊಗ್ಗ ಜಿಲ್ಲಾಧ್ಯಕ್ಷ ಕೆ.ವಿ. ವಸಂತಕುಮಾರ್ ಮಾತನಾಡಿದ್ದಾರೆ.
READ | ಯುಗಾದಿ ಬೆನ್ನಲ್ಲೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಸಿಎಂ ಟ್ವೀಟ್ನಲ್ಲೇನಿದೆ?
ಯಾವ ದಿನ ಯಾವ ಕಾರ್ಯಕ್ರಮ?
- 10ರಂದು ಶ್ರೀರಾಮ ನವಮಿಯ ದಿನ ಮಹಾ ಕುಂಭಾಭಿಷೇಕ ಮಹೋತ್ಸವಕ್ಕೆ ಮಹಾಸಂಕಲ್ಪ, ಸಹಸ್ರ ಸಂಖ್ಯೆಯಲ್ಲಿ ಚತುರ್ದ್ರವ್ಯ ಗಣಪತಿ ಹೋಮ, ಭಕ್ತಾದಿಗಳಿಂದ ಹೊರೆ ಕಾಣಿಕ ಸಮರ್ಪಣೆ ಹಾಗೂ ಸಂಜೆ 7 ಗಂಟೆಗೆ ಧಾನ್ಯ ಲಕ್ಷ್ಮಿ ಪೂಜೆ ನಡೆಯಲಿದೆ.
- ಪ್ರತಿ ದಿನ ಮಹಾ ಕುಂಭಾಭಿಷೇಕ ಮಹೋತ್ಸವದ ಪ್ರತಿಷ್ಠಾಂಗ ಪೂರ್ವ ವಿಧಿಗಳು ಜರುಗಲಿದೆ.
- ಏ.11ರಂದು ನವಗ್ರಹ ಮಹಾಯಾಗ, 12ರಂದು ಲಲಿತಾಹೋಮ ಹಾಗೂ ಗಾಯತ್ರಿ ಮಹಾಯಾಗ, 13ರಂದು ಸುದರ್ಶನ ನಾರಸಿಂಹ ಮಹಾಯಾಗ ಹಾಗೂ ಪೂಜ್ಯಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಅಭಿನವ ರಾಮಾನಂದ ಸರಸ್ವತಿ ಸ್ವಾಮಿಗಳವರ ಜನ್ಮ ಜಯಂತಿ ಶತಮಾನೋತ್ಸವದ ಕಾರ್ಯಕ್ರಮಗಳು ನಡೆಯಲಿವೆ.
- ಏ.14ರಂದು ಗುರು ದತ್ತಾತ್ರೇಯ ಮಹಾಯಾಗ, 15 ರಂದು ವೇದ ಪಾರಾಯಣ ಆರಂಭ, ಬೆಳಗ್ಗೆ 8.20ಕ್ಕೆ ಅಗಸ್ತ್ಯ ಮಹರ್ಷಿ ಕರಾರ್ಚಿತ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಗೆ ಮತ್ತು ಜಗದ್ಗುರು ಆದಿಶಂಕರ ಭಗವತ್ಪಾದರು ಪ್ರತಿಷ್ಠಾಪಿಸಿರುವ ಶ್ರೀ ಶಾರದಾ ಪರಮೇಶ್ವರಿ ದೇವಿಗೆ ಪೂಜ್ಯಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳವರಿಂದ ಮಹಾಕುಂಭಾಭಿಷೇಕ ನಡೆಯಲಿದೆ.
- ಏ.16ರಂದು ಶ್ರೀಲಕ್ಷ್ಮಿ ನರಸಿಂಹ ಮಹಾಯಾಗ, 17ರಂದು ಲಕ್ಷ ಮೋದಕ ಗಣಪತಿ ಮಹಾಯಾಗ, ಏ. 18ರಂದು ಮಹಾ ಮೃತ್ಯುಂಜಯ ಯಾಗ, ಏ.19 ರಂದು ಶ್ರೀ ಆಂಜನೇಯ ಮಹಾಯಾಗ, 20ರಂದು ಶ್ರೀ ಲಕ್ಷ್ಮಿ ನಾರಾಯಣ ಹೃದಯ ಹೋಮ, ಏ.21ರಂದು ಸಹಸ್ರ ಚಂಡಿಕಾ ಮಹಾಯಾಗದ ಪಾರಾಯಣ, ಧನ್ವಂತರಿ ಮಹಾಯಾಗ, ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಆರ್.ಎಸ್.ಎಸ್.ನ ದತ್ತಾತ್ರೇಯ ಹೊಸಬಾಳೆ ಉಪಸ್ಥಿತರಿರಲಿದ್ದಾರೆ.
- ಪ್ರತಿ ದಿನ ಮಧ್ಯಾಹ್ನ 11 ಗಂಟೆಗೆ ಧಾರ್ಮಿಕ ಸಭೆ ಹಾಗೂ ಸಂಜೆ 5.30ಕ್ಕೆ ನಾಡಿನ ಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನವೀಕೃತಗೊಂಡ ದೇವಾಲಯಗಳ ಉದ್ಘಾಟನೆ
ಹರಿಹರಪುರ ಕ್ಷೇತ್ರ ಕೊಪ್ಪ ತಾಲ್ಲೂಕಿನಲ್ಲಿದೆ. ಇದು ಐತಿಹಾಸಿಕ ಸ್ಥಳವಾಗಿದ್ದು, ದಕ್ಷ ಯಜ್ಞ ಇಲ್ಲೇ ನಡೆದಿದೆ ಎಂದು ಪುರಾಣದ ಕತೆಯನ್ನೂ ಹೊಂದಿದೆ. ಇಂತಹ ಕ್ಷೇತ್ರದಲ್ಲಿ ನವೀಕೃತಗೊಂಡ ಶ್ರೀ ನರಸಿಂಹಸ್ವಾಮಿ ದೇವಾಲಯದ ಹಾಗೂ ಶಾರದಾ ಪರಮೇಶ್ವರಿ ದೇವಿ ದೇವಾಲಯಗಳ ಉದ್ಘಾಟನೆ ನಡೆಯಲಿದೆ. ಇದು ತಪೋಭೂಮಿ, ಪುಣ್ಯಭೂಮಿ, ಧರ್ಮಪೀಠವೂ ಆಗಿದೆ. ಹಾಗಾಗಿ ಇದೊಂದು ಪುರಾಣ ಪ್ರಸಿದ್ಧವಾದ ಸ್ಥಳವಾಗಿದೆ. ಲಕ್ಷಾಂತರ ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಪ್ರತಿದಿನ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ವಸಂತ್ ಕುಮಾರ್ ತಿಳಿಸಿದ್ದಾರೆ.
ಆಗಮಿಸಲಿದ್ದಾರೆ ಸಿಎಂ ಬೊಮ್ಮಾಯಿ
ಏ.22ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸಹಸ್ರ ಚಂಡಿಕಾ ಮಹಾಯಾಗದ ಪೂರ್ಣಾಹುತಿ ನಡೆಯಲಿದೆ. ಮಠದ ಶ್ರೀಗಳಿಂದ ಆಶೀರ್ವಚನವಿದ್ದು, ಏಪ್ರಿಲ್ 23ರಂದು ರುದ್ರಹೋಮ, ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಕಲ್ಯಾಣೋತ್ಸವ ನಡೆಯಲಿದೆ. ಏ.24 ರಂದು ಬೆಳಗ್ಗೆ 10 ಗಂಟೆಗೆ ಮಹಾರಥೋತ್ಸವ, ಸಂಜೆ 7 ಗಂಟೆಗೆ ತುಂಗಾ ನದಿಯಲ್ಲಿ ದೀಪೋತ್ಸವ ಮತ್ತು ತೆಪ್ಪೋತ್ಸವ ನಡೆಯಲಿದೆ.
ಸಮಿತಿಯ ಪದಾಧಿಕಾರಿಗಳಾದ ಕೆ.ಆರ್. ಭಾಸ್ಕರ್, ಕೇಶವಮೂರ್ತಿ, ಪ್ರಭಾಕರ್, ಯಜ್ಞನಾರಾಯಣ ಭಟ್, ಶ್ರೀನಿವಾಸ್, ಸುರೇಶ್, ಶ್ರೀಪತಿ, ಗುರುರಾಜ್ ಇದ್ದರು.