ಸುದ್ದಿ ಕಣಜ.ಕಾಂ | DISTRICT | 13 OCT 2022
ಶಿವಮೊಗ್ಗ: ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗುತ್ತಿರುವ 11ನೇ ಕೃಷಿ ಗಣತಿ ಕಾರ್ಯವನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚಿಸಿದರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೃಷಿ ಗಣತಿ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಕೃಷಿ ಗಣತಿ ಕಾರ್ಯಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಮೂಲ ಕ್ಷೇತ್ರ ಕಾರ್ಯಕರ್ತರಾಗಿದ್ದು, ಕಂದಾಯ ನಿರೀಕ್ಷಕರನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ. ಇವರು ಗಣತಿ ಕಾರ್ಯವನ್ನು ನಿಖರವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
READ | ನೀವುಗೃಹ ರಕ್ಷಕ ದಳ ಸೇರಬೇಕೆ? ಏನಿದರ ಪ್ರಯೋಜನ?
ಐದು ವರ್ಷಕ್ಕೊಮ್ಮೆ ಸಮೀಕ್ಷೆ
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಮಹೇಶ್ವರಪ್ಪ ಮಾತನಾಡಿ, ದೇಶದಲ್ಲಿ ಕೃಷಿಗೆ ಸಂಬಂಧಿಸಿದ ಬಹುತೇಕ ಮಾಹಿತಿಯನ್ನು ಕೃಷಿ ಗಣತಿಯಿಂದಲೇ ಸಂಗ್ರಹಿಸಲಾಗುತ್ತದೆ. ಪ್ರತಿ 5 ವರ್ಷಗಳಿಗೊಮ್ಮೆ ಕೇಂದ್ರ ಸರ್ಕಾರವು ದೇಶದಾದ್ಯಂತ ಕೃಷಿ ಗಣತಿಯನ್ನು ಕೈಗೊಳ್ಳುತ್ತದೆ. ಕೃಷಿ ಗಣತಿಯಿಂದ ರಾಜ್ಯ ಮತ್ತು ರಾಷ್ಟ್ರದಲ್ಲಿ ವಿವಿಧ ಹಿಡುವಳಿದಾರರ ಪ್ರಮಾಣ ತಿಳಿದುಬರುತ್ತದೆ. ಇದು 3 ಹಂತಗಳಲ್ಲಿ ನಡೆಯುತ್ತದೆ.
- ಮೊದಲನೇ ಹಂತದಲ್ಲಿ ಕೃಷಿ ಗಣತಿಯ ಮೂಲಕ ಗ್ರಾಮವಾರು ಹಿಡುವಳಿದಾರರ ಮಾಹಿತಿ, ವಿವಿಧ ಸಾಮಾಜಿಕ ಗುಂಪುವಾರು, ಲಿಂಗವಾರು, ಹಿಡುವಳಿ ವರ್ಗಗಳವಾರು ಮಾಹಿತಿ ಧಾಖಲಿಸಲಾಗುತ್ತದೆ.
- ಎರಡನೇ ಹಂತದಲ್ಲಿ ಸಕಾಲಿಕ ಗ್ರಾಮಗಳಲ್ಲಿ ಹಿಡುವಳಿದಾರರ ಬೆಳೆವಾರು, ನೀರಾವರಿ ಮೂಲವಾರು ಅಂಕಿ-ಅಂಶಗಳನ್ನು ದಾಖಲಿಸಲಾಗುತ್ತದೆ.
- ಮೂರನೇ ಹಂತದಲ್ಲಿ ಇನ್ ಪುಟ್ ಸಮೀಕ್ಷೆಯನ್ನು ಆಯ್ದ ಹಿಡುವಳಿದಾರರು ಬಳಸುವ ಕೃಷಿ ಉಪಕರಣ/ ಕೃಷಿ ಪರಿಕರಗಳು, ಉಪಯೋಗಿಸಿದ ಗೊಬ್ಬರ, ಜಾನುವಾರು, ಕೃಷಿ ಸಾಲ, ಹಿಡುವಳಿದಾರರ ವಿದ್ಯಾಭ್ಯಾಸ ಮಟ್ಟ ಇತ್ಯಾದಿಗಳನ್ನು ಸಂಗ್ರಹಿಸಲಾಗುತ್ತದೆ.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ನೀಡಿದ ಸೂಚನೆಗಳಿವು
- ಬೆಳೆ ಕಟಾವು ಸಮೀಕ್ಷೆ | ಬೆಳೆ ಕಟಾವು ಸಮೀಕ್ಷೆ ಕಾರ್ಯದ ಪ್ರಗತಿಯನ್ನು ತಾಲೂಕು ಮಟ್ಟದಲ್ಲಿ ಪರಿಶೀಲಿಸಬೇಕು. ಅಸಮರ್ಪಕ ಸಮೀಕ್ಷೆಯಿಂದ ರೈತರಿಗೆ ನಷ್ಟ ಉಂಟಾದರೆ ಸಂಬಂಧಪಟ್ಟವರು ಜವಾಬ್ದಾರರಾಗಿರುತ್ತಾರೆ. ಸಮೀಕ್ಷೆ ಕಾರ್ಯಕ್ಕೆ ಯಾವುದೇ ಸಬೂಬು ಹೇಳದೆ ಆದಷ್ಟು ಬೇಗ ಸಮೀಕ್ಷೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
- ಜನನ-ಮರಣ ನೋಂದಣಿ | ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರಬೇಕು. ಸಕಾಲದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಯಾವುದೇ ಲೋಪ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
- ನೋಂದಣಿಯನ್ನು ತ್ವರಿತವಾಗಿ ಮಾಡಲು ಅನುಕೂಲವಾಗುವಂತೆ ನೋಂದಣಧಿಕಾರಿಗೆ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಲು ಅಂಗನವಾಡಿ, ಆಶಾ ಕಾರ್ಯಕರ್ತರು, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳು, ಎ.ಎನ್.ಎಂ, ಪಿಡಿಒ, ನಗರ ಸಭೆ/ಪುರಸಭೆ ವಾರ್ಡಗಳ ಕಂದಾಯ ಸಿಬ್ಬಂದಿ, ಆರೋಗ್ಯ ಸಿಬ್ಬಂದಿಯನ್ನು ಒಳಗೊಂಡ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸುವಂತೆ ಅವರು ತಿಳಿಸಿದರು.
- ನಗರದ ಕೆಲವು ಆಸ್ಪತ್ರೆಗಳು ಮರಣ ಕಾರಣ ಪ್ರಮಾಣ ಪತ್ರವನ್ನು ಇ-ಜನ್ಮ ತಂತ್ರಾಂಶದಲ್ಲಿ ಸಮರ್ಪಕವಾಗಿ ಅಪ್ ಲೋಡ್ ಮಾಡದಿರುವ ಬಗ್ಗೆ ದೂರುಗಳು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಅವರಿಗೆ ಸೂಚನೆ ನೀಡಿದರು.
https://suddikanaja.com/2022/02/10/tiger-census-in-shimoga-district-started-on-february-10-and-will-continue-necessary-preparations-have-already-been-made-and-the-trap-cameras-have-been-installed/