ಸುದ್ದಿ ಕಣಜ.ಕಾಂ | KARNATAKA | 30 OCT 2022
ಶಿವಮೊಗ್ಗ: ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಅದರಲ್ಲಿ ಶಿವಮೊಗ್ಗದವರು ಇಬ್ಬರಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಎಚ್.ಎಸ್.ಮೋಹನ್ ಹಾಗೂ ಆಡಳಿತ ಕ್ಷೇತ್ರದಲ್ಲಿ ಡಾ.ಎಚ್.ಎಲ್.ಮಂಜುನಾಥ್ ಅವರು 2022ನೇ ಸಾಲಿನ 67ನೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
READ | ಚೋರಡಿ ಬಳಿ ಬಸ್, ಆಟೋ, ಬೈಕ್ ನಡುವೆ ಸರಣಿ ಅಪಘಾತ, ಸಹಾಯಕ್ಕೆ ಧಾವಿಸಿದ 112
ನೇತ್ರ ತಜ್ಞರಿಗೆ ಸಂದ ಗೌರವ
ಸೊರಬ ತಾಲೂಕಿನ ಹೊಸಬಾಳೆ ಗ್ರಾಮದ ಡಾ.ಎಚ್.ಎಸ್.ಮೋಹನ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶಸ್ತಿ ಸಂದಿದೆ. ಇವರು ಮೈಸೂರು ಮತ್ತು ಮಣಿಪಾಲದಲ್ಲಿ ವೈದ್ಯಕೀಯ ಪದವಿಯನ್ನು ಪಡೆದಿದ್ದು, ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಪ್ರಸ್ತುತ ಸಾಗರದಲ್ಲಿ ನೇತ್ರ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
17ಕ್ಕೂ ಹೆಚ್ಚು ಪುಸ್ತಕಗಳ ಬರಹ
ಮೋಹನ್ ಅವರು ಬರೀ ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೇ ತಮ್ಮ ಬರಹಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ. ವೈದ್ಯಕೀಯ ಬರಹಗಳನ್ನು ಬರೆದಿದ್ದಾರೆ. ಕನ್ನಡ, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಯಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಇವರ ಲೇಖನಗಳು ಅಂತರರಾಷ್ಟ್ರೀಯ ಜರ್ನಲ್ಗಳಲ್ಲೂ ಪ್ರಕಟಗೊಂಡಿವೆ.
‘ಕಣ್ಣು 106 ಪ್ರಶ್ನೆಗಳು’, ‘ಕಣ್ಣು ಮತ್ತು ದೃಷ್ಟಿ’ ಸೇರಿದಂತೆ ಕನ್ನಡದಲ್ಲಿ 17 ಹಾಗೂ ಇಂಗ್ಲಿಷ್ ನಲ್ಲಿ ಒಂದು ಪುಸ್ತಕ ಬರೆದಿದ್ದಾರೆ.
ವೃತ್ತಿಯಿಂದ ಪಶುವೈದ್ಯರು, ಆಡಳಿತದಲ್ಲಿ ಅಗಾಧ ಸೇವೆ ಸಲ್ಲಿಸಿದ ಡಾ.ಎಚ್.ಎಲ್.ಮಂಜುನಾಥ್
ವೃತ್ತಿಯಿಂದ ಪಶುವೈದ್ಯರಾಗಿರುವ ಡಾ.ಎಚ್.ಎಲ್.ಮಂಜುನಾಥ್ ಅವರಿಗೆ ಆಡಳಿತ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಇವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತೀರ್ಥಹಳ್ಳಿ ಮೂಲದ ಮಂಜುನಾಥ್ ಅವರು ಪಶು ವೈದ್ಯಕೀಯದಲ್ಲಿ ಪಿಜಿ ಮುಗಿಸಿದರು. ಇವರ ಪಶುವೈದ್ಯದ ಬದುಕು ಆರಂಭವಾಗುವುದು 1978ರಲ್ಲಿ ರಾಯಚೂರು ಜಿಲ್ಲೆಯ ಕುಕ್ಕನೂರಿನಿಂದ. ಅಲ್ಲಿಂದ 1980ರಲ್ಲಿ ಕೆನರಾ ಮಿಲ್ಕ್ ಯೂನಿಯನ್ ಮಣಿಪಾಲನಲ್ಲಿ ಪಶುವೈದ್ಯರಾಗಿ ಸೇರಿಕೊಂಡರು. ತದನಂತರ, ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿಕೊಂಡರು. ಬಳಿಕ ಸಿಂಡಿಕೇಟ್ ಬ್ಯಾಂಕಿನ ಅಧಿಕಾರಿಯಾಗಿ ದೇಶದೆಲ್ಲೆಡೆ ತಮ್ಮ ಸೇವೆ ಸಲ್ಲಿಸಿದದರು. 2001ರಲ್ಲಿ ಬ್ಯಾಂಕಿಂಗ್ ವಲಯದಿಂದ ಸ್ವಯಂ ನಿವೃತ್ತಿ ಪಡೆದರು.
ಬೆಳ್ತಂಗಡಿ ಟು ರಾಜ್ಯದಾದ್ಯಂತ ಸ್ವಸಹಾಯ ಸೇವೆ
ಬ್ಯಾಂಕಿಂಗ್ ವಲಯಕ್ಕೆ ಗುಡ್ ಬೈ ಹೇಳಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಆರಂಭಭಿಸಿದರು. ಬೆಳ್ತಂಗಡಿ ತಾಲೂಕಿಗೆ ಸೀಮಿತವಾಗಿದ್ದ ಯೋಜನೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಸ್ತರಿಸಿದರು. ಸುಮಾರು 6,05,096 ಸ್ವಸಹಾಯ ಸಂಘಗಳನ್ನು ರಚಿಸಿದರು. ಈ ಮೂಲಕ 50 ಲಕ್ಷ ಕುಟುಂಬಗಳು ಆರ್ಥಿಕವಾಗಿ ಸಬಲವಾಗುವಂತೆ ಮಾಡಿದರು. ಇವರು ಐದು ಪುಸ್ತಕಗಳನ್ನು ಬರೆದಿದ್ದು, ಇವರ 100ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.
READ | ಸಾವಿನಲ್ಲೂ ಸಾರ್ಥಕತೆ ಮೆರೆದ ಏಳು ವರ್ಷದ ಬಾಲಕ
ಒಲಿದ ಪ್ರಶಸ್ತಿಗಳು
ಡಾ.ಮಂಜುನಾಥ್ ಕೇಂದ್ರ ಸರ್ಕಾರದ ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ, ಮುಂಬೈಯ ಆಲ್ ಇಂಡಿಯಾ ಲೈಫ್ ಇನ್ಶೂರೆನ್ಸ್ ಕೌನ್ಸಿಲ್, ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯದ ನಿಯೋಗದ ಸಲಹಾ ಸಮಿತಿ ನೀತಿ ಆಯೋಗದ ಸ್ವಯಂ ಸೇವಾ ಸಂಸ್ಥೆಗಳ ಸಲಹಾ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಸೇವೆಯನ್ನು ಮನಗಂಡು ಹಲವು ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಪಶುವೈದ್ಯ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರೋಟರಿಯಿಂದ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ, ಸಮಾಜ ಸೇವೆ ಮತ್ತು ಪಶು ವೈದ್ಯಕೀಯ ವಲಯದಲ್ಲಿ ಜೀವಮಾನ ಸಾಧನೆ ಪ್ರಶಸ್ತಿಗಳು ಲಭಿಸಿವೆ.
https://suddikanaja.com/2022/10/30/karhfw-recruitment-for-cphc-posts/