ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಯಾರಿಗೇ ಹಣವನ್ನು ನೀಡಬೇಕಾದರೆ ಹುಷಾರ್! ಕಾರಣ, ನೀವೂ ಮೋಸ ಹೋಗಬಹುದು. ಇಂತಹದ್ದೊಂದು ಪ್ರಕರಣ ಕೋಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
₹3.70 ಲಕ್ಷ ಪಡೆದಿದ್ದ ಸಹಪಾಠಿ
ಟ್ರಸ್ಟ್ ನೆಪದಲ್ಲಿ ವಿದ್ಯಾರ್ಥಿನಿಯೊಬ್ಬರು ತಮ್ಮ ಸಹಪಾಠಿಗೆ 2020ರಲ್ಲಿ ₹3.70 ಲಕ್ಷ ಹಣ ನೀಡಿದ್ದಾರೆ. ಅದನ್ನು ವಾಪಸ್ ಕೇಳಿದ್ದಕ್ಕೆ ಡೆತ್ ನೋಟ್ ನಲ್ಲಿ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ದೂರಲಾಗಿದೆ.
READ | ಜಿಲ್ಲೆಯ 7 ಕೇಂದ್ರಗಳಲ್ಲಿ ನಡೆಯಲಿದೆ, ಪಿಜಿ ಸಿಇಟಿ, ಡಿಸಿಇಟಿ ಪರೀಕ್ಷೆ
ಆರಂಭದಲ್ಲಿ ಬಡ್ಡಿ ಹಣ ಸಂದಾಯ
ಶಿವಮೊಗ್ಗದ ನಯನಾ ಅವರು ಬಿಕಾಂ ದ್ವಿತೀಯ ವರ್ಷದಲ್ಲಿ ಓದುತ್ತಿದ್ದು, ಉಂಬ್ಳೆಬೈಲು ಬಳಿಯ ಅಂಜಲಿ ಎಂಬಾಕೆ ಪರಿಚಯವಾಗಿದ್ದಾಳೆ. ತಂದೆಯೊಂದಿಗೆ ಸಾಯಿಬಾಬಾ ಟ್ರಸ್ಟ್ ಆರಂಭಿಸುತ್ತಿದ್ದು ಆ ಮೂಲಕ ಬಡವರು, ನಿರ್ಗತಿಕರಿಗೆ ಸಹಾಯ ಮಾಡುವ ಉದ್ದೇಶವಿದೆ. ಒಂದುವೇಳೆ, ಟ್ರಸ್ಟಿಗೆ ಹಣ ನೀಡಿದ್ದಲ್ಲಿ 10-15 ದಿನಗಳಲ್ಲಿ ಹೆಚ್ಚಿನ ಬಡ್ಡಿಯೊಂದಿಗೆ ಹಣ ಮರಳಿಸುವುದಾಗಿ ತಿಳಿಸಿದ್ದಾಳೆ. ಅದನ್ನು ನಂಬಿದ ನಯನಾ ಹಣವನ್ನು ನೀಡಿದ್ದಾಳೆ. ಆರಂಭದಲ್ಲಿ ಮಾತಿನಂತೆ ಬಡ್ಡಿಯನ್ನೂ ಮರಳಿಸಲಾಗಿದೆ. ಇದರಿಂದ ನಂಬಿಕೆ ಬಂದಿದ್ದು, ನೆರೆಯವರಿಂದ ಹಣ ಸಂಗ್ರಹಿಸಿ ₹3.70 ಲಕ್ಷ ಹಣವನ್ನು ನೀಡಲಾಗಿದೆ. ಹಣವೇನೋ ಸಂದಾಯ ಮಾಡಲಾಗಿದೆ. ಆದರೆ, ಬಡ್ಡಿ ಮಾತ್ರ ನೀಡುತ್ತಿರಲಿಲ್ಲ. ಅದನ್ನು ಕೇಳಿದ್ದಕ್ಕೆ ಬೆದರಿಕೆಯೊಡ್ಡಲಾಗುತ್ತಿದೆ. ಹಣ ನೀಡುವಂತೆ ಕೇಳಿದರೆ ಹೆಸರು ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.