ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಸೈನ್ಸ್ ಮೈದಾನದಲ್ಲಿ ಜನವರಿ 22ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರಿ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ (Sathyajith Surathkal ) ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಈಡಿಗ ಭವನದಿಂದ ಮೆರವಣಿಗೆ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಭಾಂದವರು ಸೈನ್ಸ್ ಮೈದಾನ ತಲುಪಲಿದ್ದಾರೆ. ಅಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದರು.
ಈಡಿಗ, ಬಿಲ್ಲವ, ನಾಮಧಾರಿ, ಪೂಜಾರಿ, ನಾಡರ್, ಗಾಣಿಗ ಮೊದಲಾದ 26 ಪಂಗಡಗಳು ಸೇರಿದಂತೆ ಹಿಂದುಳಿದ ಜಾತಿಗಳ ಸಮುದಾಯದ 100ಕ್ಕೂ ಮೇಲ್ಪಟ್ಟ ಪಂಗಡಗಳ 2-ಎ ಮೀಸಲಾತಿಯು ಇಂದು ಸರ್ಕಾರದ ಪ್ರಬಲ ರಾಜಕೀಯ ಸಮುದಾಯಗಳ ಓಲೈಕೆ ನೀತಿಯಿಂದಾಗಿ ಕೈತಪ್ಪುವ ಸಾಧ್ಯತೆ ಇದೆ. ಹೀಗಾಗಿ, ಎಲ್ಲರೂ ಜಾಗೃತರಾಗಬೇಕು. ಅದಕ್ಕೋಸ್ಕರ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ.
– ಸತ್ಯಜಿತ್ ಸುರತ್ಕಲ್, ರಾಜ್ಯಾಧ್ಯಕ್ಷ, ಶ್ರಿ ನಾರಾಯಣ ಗುರು ವಿಚಾರ ವೇದಿಕೆ
ಶ್ರೀ ನಾರಾಯಣ ಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಸ್ವಾಮಿರಾವ್, ಜಿ.ಡಿ.ನಾರಾಯಣಪ್ಪ, ಸಿಗಂಧೂರು ದೇವಸ್ಥಾನದ ಧರ್ಮದರ್ಶಿ ಡಾ.ಎಸ್.ರಾಮಪ್ಪ ಇತರರು ಅತಿಥಿಗಳಾಗಿ ಭಾಗವಹಿಸಿದ್ದಾರೆ ಎಂದರು.
READ | ಎಂಟು ಮನೆಗಳ್ಳತನಗಳನ್ನು ಬೇಧಿಸಿದ ಪೊಲೀಸ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೀಜ್
ಬೇಡಿಕೆಗಳೇನು?
- ಹಿಂದುಳಿದ ಜಾತಿಗಳ 2 ಎ ಮೀಸಲಾತಿ ನೀಡಬೇಕು.
- ರಕ್ಷಣೆ ಮತ್ತು ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು.
- ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಬೇಕು.
- ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್ ಬಂಗರಪ್ಪ ಅವರ ಹೆಸರಿಡಬೇಕು
- ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಸಿಗಂದೂರು ಚೌಡೇಶ್ವರಿ ದೇವಾಲಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು.
ನಮ್ಮ ಸಮುದಾಯಕ್ಕೇಕೆ ನಿರ್ಲಕ್ಷ್ಯ?
ಪ್ರಬಲ ವೀರಶೈವ ಸಮಾಜಕ್ಕೆ ₹500 ಕೋಟಿ, ಒಕ್ಕಲಿಗ ಸಮಾಜಕ್ಕೆ ₹300 ಕೋಟಿ, ಮರಾಠ ಸಮಾಜಕ್ಕೆ ₹100 ಕೋಟಿ, ಬ್ರಾಹ್ಮಣ ಸಮಾಜಕ್ಕೆ ₹150 ಕೋಟಿ ನೀಡಲಾಗಿದೆ. ನಿಗಮ ಮಂಡಳಿಯನ್ನೂ ಸ್ಥಾಪನೆ ಮಾಡಲಾಗಿದೆ. ಆದರೆ ರಾಜ್ಯದ ಶೇ.10ರಷ್ಟು ಜನಸಂಖ್ಯೆ ಇರುವ ಈಡಿಗ ಸಮಾಜಕ್ಕೆ ಮತ್ತು ಉಪ ಪಂಗಡಗಳಿಗೆ ನಿಗಮ ಮಾಡುವ ಬದಲು ಕೋಶ ರಚಿಸಿ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿ ₹10 ಕೋಟಿ ಕಾಯ್ದಿರಿಸಿದೆ. ಇದು ಸಮುದಾಯಕ್ಕೆ ಆಗಿರುವ ಅವಮಾನವೆಂದು ದೂರಿದರು.
ಜಿಲ್ಲಾ ಈಡಿಗ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಗೌರವಾಧ್ಯಕ್ಷ ಜಿ.ಡಿ.ನಾರಾಯಣಪ್ಪ, ಯೋಗೇಶ್, ಮುಡುಬ ರಾಘವೇಂದ್ರ, ಕಲಗೋಡು ರತ್ನಾಕರ್, ಗೀತಾಂಜಲಿ, ಪುಷ್ಪಮೂರ್ತಿ, ಡಾ.ಕಲ್ಲಣ್ಣ ಉಪಸ್ಥಿತರಿದ್ದರು.
https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/