ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕಚೇರಿ ವೇಳೆಯನ್ನು ಹೆಚ್ಚಿಸಿ ವಾರದ ಕರ್ತವ್ಯದ ದಿನಗಳನ್ನು ಕಡಿಮೆ ಮಾಡುವಂತೆ ಏಳನೇ ವೇತನ ಆಯೋಗಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ (karnataka government employee association) ಮನವಿ ಮಾಡಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ಅವರ ನೇತೃತ್ವದಲ್ಲಿ ಆಯೋಗದ ಹಲವು ಪ್ರಶ್ನೆಗಳಿಗೆ ಅಗತ್ಯ ಮಾಹಿತಿಗಳೊಂದಿಗೆ ಲಿಖಿತ ಉತ್ತರವನ್ನು ಶುಕ್ರವಾರ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಲಾಗಿದೆ.
VIDEO REPORT | ರಾಜ್ಯದ ಅತೀ ಉದ್ದದ ಎರಡನೇ ರನ್ ವೇ ಖ್ಯಾತಿಯ ಶಿವಮೊಗ್ಗ ವಿಮಾನ ನಿಲ್ದಾಣದ ಡ್ರೋಣ್ ನೋಟ
ಕಚೇರಿ ವೇಳೆ ಹೆಚ್ಚಳ, ಮೊದಲ, ಮೂರನೇ ಶನಿವಾರವೂ ರಜೆ
ಸರ್ಕಾರಕ್ಕೆ ಸಾರಿಗೆ, ವಿದ್ಯುತ್, ನೀರು, ಟ್ರಾಫಿಕ್, ಸರ್ಕಾರಿ ವಾಹನಗಳ ಇಂಧನ ಹಾಗೂ ನಿರ್ವಹಣೆ, ವೆಚ್ಚದಲ್ಲಿ ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಿ ನೌಕರರಿಗಿರುವಂತೆ ಬೆಳಗ್ಗೆ 10ಕ್ಕೆ ಬದಲಾಗಿ ಬೆಳಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00ರವರೆಗೆ ಬದಲಾಯಿಸುವುದು. ತಿಂಗಳ ಮೊದಲ ಮತ್ತು ಮೂರನೆ ಶನಿವಾರ ಸಾರ್ವತ್ರಿಕ ರಜೆ ನೀಡುವುದು, ವೇತನ ಹೆಚ್ಚಳ ಹೊರೆ ಸರಿದೂಗಿಸುವ ನಿಟ್ಟಿನಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವುದು, ಆಡಳಿತದಲ್ಲಿ ತಂತ್ರಜ್ಞಾನವನ್ನು ಹೆಚ್ಚಿಸುವುದು, ನೌಕರರಲ್ಲಿ ದಕ್ಷತೆ ಮತ್ತು ನೈಪುಣ್ಯತೆ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸಲು ಎಟಿಐ ಮಾದರಿ ತರಬೇತಿ ನೀಡುವ ಬಗ್ಗೆಯೂ ಗಮನಹರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜ.17ರಂದು ಪ್ರಶ್ನಾವಳಿ ಬಿಡುಗಡೆ
ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರವು ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚಿಸಿತ್ತು. ನೌಕರರ ವೇತನ, ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವೇತನ ಆಯೋಗವು ಜನವರಿ 17ರಂದು ಪ್ರಶ್ನಾವಳಿಗಳನ್ನು ಬಿಡುಗಡೆಗೊಳಿಸಿ, ನೌಕರರ ಸಂಘದಿಂದ ಉತ್ತರ, ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸಂಘದ ಪದಾಧಿಕಾರಿಗಳ ನಿಯೋಗವು ಅಧ್ಯಕ್ಷರನ್ನು ಭೇಟಿ ಮಾಡಿ ಮಾಹಿತಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಆಯೋಗಕ್ಕೆ ವಿಸ್ತೃತ ವರದಿ ಸಲ್ಲಿಕೆ
ಈ ಉತ್ತರ ಸಲ್ಲಿಸುವುದಕ್ಕೆ ಮುನ್ನ ರಾಜ್ಯದಾದ್ಯಂತ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರಿಂದ ಮಾಹಿತಿಗಳನ್ನು ಸಂಗ್ರಹಿಸಿ, ಸಂಘದ ಹಿರಿಯ ಪದಾಧಿಕಾರಿಗಳು ಮತ್ತು ವೃಂದ ಸಂಘಗಳ ಅಧ್ಯಕ್ಷರು ಸುದೀರ್ಘವಾಗಿ ಸಮಾಲೋಚನೆಯ ನಂತರ ವಿಸ್ತೃತ ವರದಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿದೆ. ಸಂಘವು ಪ್ರಸ್ತಾಪಿಸಿರುವ ಅಂಶಗಳು ಸಕಾರಾತ್ಮಕವಾಗಿದ್ದು, ಸರ್ಕಾರದ ಹಿತ ಹಾಗೂ ರಾಜ್ಯ ಸರ್ಕಾರದ ಅಧಿಕಾರಿ ನೌಕರರ ಅಭ್ಯುದಯವನ್ನು ಪರಿಗಣಿಸಿದೆ ಎಂದು ತಿಳಿಸಲಾಗಿದೆ.
READ | ಶಿಮುಲ್ ನಲ್ಲಿ ಭರ್ಜರಿ ಉದ್ಯೋಗ ಅವಕಾಶ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ವರದಿಯಲ್ಲಿನ ಮುಖ್ಯಾಂಶಗಳು
- ಸಮಾನ ಕೆಲಸಕ್ಕೆ ಸಮಾನ ವೇತನ, ವಿದ್ಯಾರ್ಹತೆ, ಜವಾಬ್ದಾರಿಯ ಗುಣಮಟ್ಟ, ಕಾರ್ಯಕ್ಷಮತೆ, ಕಾರ್ಯಕ್ಷೇತ್ರದ ವ್ಯಾಪ್ತಿ, ಜೊತೆಗೆ ನೆರೆ ರಾಜ್ಯ ಮತ್ತು ಕೇಂದ್ರ ವೇತನ ಮತ್ತು ಭತ್ಯೆಗಳ ಹೋಲಿಕೆಗಳನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ.
- ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ-ಭತ್ಯೆಗಳನ್ನು ಪರಿಗಣಿಸಬೇಕು. 6ನೇ ವೇತನ ಆಯೋಗದಲ್ಲಿ ಪ್ರಸ್ತುತ ಮೂಲ ವೇತನಕ್ಕೆ ಹಾಲಿ ಇರುವ ಶೇ.31ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ಶೇ.40ರಷ್ಟು ಫಿಟ್ಮೆಂಟ್ ಸೌಲಭ್ಯವನ್ನು 2022ರ ಜುಲೈ 1ರಿಂದ ಜಾರಿಗೆ ತರುವ ಬಗ್ಗೆಯೂ ಆಯೋಗದ ಗಮನಸೆಳೆಯಲಾಗಿದೆ
- 2026ರಲ್ಲಿ ಪರಿಷ್ಕರಣೆಯಾಗಲಿರುವ ಕೇಂದ್ರ ವೇತನ ಮತ್ತು ಭತ್ಯೆಗಳನ್ನು ರಾಜ್ಯ ಸರ್ಕಾರಿ ನೌಕರರಿಗೂ ಈಗಾಗಲೇ 26 ರಾಜ್ಯಗಳಲ್ಲಿರುವಂತೆ ಯಥಾವತ್ತಾಗಿ ಅನ್ವಯಗೊಳಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಬೇಕು.
- ಹಾಲಿ ಇರುವ 25 ಮಾಸ್ಟರ್ ವೇತನ ಶ್ರೇಣಿ ಹಾಗೂ 92 ವೇತನ ಹಂತಗಳನ್ನು ಮುಂದುವರಿಸಬೇಕು.
- ಹೊಸ ವೇತನ ಶ್ರೇಣಿಗಳನ್ನು 2022ನೇ ಸಾಲಿನ ಬೆಲೆ ಸೂಚ್ಯಾಂಕದÀ 12 ತಿಂಗಳ ಸರಾಸರಿಯ ಆಧಾರದ ಮೇಲೆ ವೇತನ ಶ್ರೇಣಿಗಳ ದರಗಳನ್ನು ನಿಗದಿಪಡಿಸಬೇಕು. ಕನಿಷ್ಠ ಶೇ.40 ಫಿಟ್ಮೆಂಟ್ನೊಂದಿಗೆ ಹಾಗೂ ಜೀವನ ನಿರ್ವಹಣೆ ಆಧರಿಸಿ ಗ್ರೂಪ್ ‘ಡಿ’ ನೌಕರನ ಕನಿಷ್ಠ ಮೂಲ ವೇತನ 31,000 ರೂ.ಗೆ ನಿಗದಿಗೊಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
- ಪರಿಷ್ಕರಿಸಲಿರುವ ವೇತನ ಶ್ರೇಣಿಗಳಲ್ಲಿನ ಕನಿಷ್ಠ ಹಾಗೂ ಗರಿಷ್ಠ ವೇತನದ ನಡುವಿನ ಈಗಿರುವ ಅನುಪಾತ 1:5.20ರ ಬದಲಾಗಿ 1:8.86ಕ್ಕೆ ನಿಗದಿಪಡಿಸಿ ಶಿಫಾರಸು ಮಾಡಬೇಕು. ವೇತನ ಶ್ರೇಣಿಗಳ ನಡುವಿನ ಸಾಪೇಕ್ಷೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಹಾಗೆಯೇ ಮುಂದುವರಿಸಬೇಕು.
- ಒಬ್ಬ ಸರ್ಕಾರಿ ನೌಕರನಿಗೆ ಸೇವಾವಧಿಯಲ್ಲಿ ಕನಿಷ್ಠ 3-4 ಮುಂಬಡ್ತಿ ಅವಕಾಶಗಳು ಲಭ್ಯವಾಗುವಂತೆ ಶಿಫಾರಸು ಮಾಡಬೇಕು.
- ವಾರ್ಷಿಕ ವೇತನ ಬಡ್ತಿಯ ದರವನ್ನು ಕೇರಳ ರಾಜ್ಯದ ಮಾದರಿಯಲ್ಲಿ ಮೂಲ ವೇತನಕ್ಕೆ ಶೇ.3.04ರಷ್ಟು ನಿಗದಿಪಡಿಸಬೇಕು. ಸ್ಥಗಿತ ವೇತನ ಬಡ್ತಿಯನ್ನು ಹಾಲಿ ಇರುವ 8 ರಿಂದ 12 ಕ್ಕೆ ಹೆಚ್ಚಿಸುವುದು ಹಾಗೂ ಕಚೇರಿ ಮುಖ್ಯಸ್ಥರು ಮಂಜೂರು ಮಾಡುವಂತೆಯೂ ಮನವಿಯಲ್ಲಿ ತಿಳಿಸಲಾಗಿದೆ.
- ಸಚಿವಾಲಯ, ಸಚಿವಾಲಯೇತರ ಸಮಾನ ಹುದ್ದೆಗಳ ವೇತನ ಸಮಾನಾಂತರಗೊಳಿಸಬೇಕು. ಸಚಿವಾಲಯ ಸಿಬ್ಬಂದಿಗೆ ಕೇಂದ್ರ ಸಚಿವಾಲಯದ ಮಾದರಿಯಲ್ಲಿ ಹಾಗೂ ವಿಧಾನಸಭೆ/ ವಿಧಾನ ಪರಿಷತ್ ಸಚಿವಾಲಯಗಳ ನೌಕರರಿಗೆ ಲೋಕಸಭೆ/ ರಾಜ್ಯಸಭೆ ಸಚಿವಾಲಯ ಮಾದರಿಯಲ್ಲಿ ಪ್ರತ್ಯೇಕ ವೇತನ ಶ್ರೇಣಿ ಮತ್ತು ಭತ್ಯೆಗಳನ್ನು ಮಂಜೂರು ಮಾಡಲು ಶಿಫಾರಸು ಮಾಡಬೇಕು.
- ಅತ್ಯಂತ ವಿಶೇಷ, ಕ್ಲಿಷ್ಟಕರ, ಅನಾರೋಗ್ಯಕರ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಪ್ರಸ್ತುತ ನೀಡುತ್ತಿರುವ ವಿಶೇಷ ಭತ್ಯೆಯನ್ನು ದ್ವಿಗುಣಗೊಳಿಸಬೇಕು. ಪ್ರತಿ 6 ತಿಂಗಳಿಗೆ ನೀಡಲಾಗುವ ತುಟ್ಟಿಭತ್ಯೆಯನ್ನು ಪರಿಷ್ಕøತ ವೇತನದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ರಾಜ್ಯ ಸರ್ಕಾರಿ ನೌಕರರಿಗೆ ವಿಳಂಬವಿಲ್ಲದೆ ನೀಡಬೇಕು.
- ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಲಭ್ಯವಿರುವ 2021ರ ಜನಸಂಖ್ಯೆಯ ಮಾಹಿತಿಯನ್ನಾಧರಿಸಿ ನಗರ ಹಾಗೂ ಪಟ್ಟಣ ಪ್ರದೇಶಗಳನ್ನು ಪುನರ್ ವರ್ಗೀಕರಿಸಬೇಕು. ಬಿಬಿಎಂಪಿ ವ್ಯಾಪ್ತಿಯನ್ನು ಬೆಂಗಳೂರು ನಗರ ಜಿಲ್ಲೆ ಗಡಿವ್ಯಾಪ್ತಿಗೆ ವಿಸ್ತರಿಸುವುದು.
- ಪ್ರಸ್ತುತ ಜೀವನ ನಿರ್ವಹಣೆ ಆಧಾರದ ಮೇಲೆ ಈ ಕೆಳಕಂಡ ದರದಲ್ಲಿ ಮನೆ ಬಾಡಿಗೆ ಭತ್ಯೆ ನೀಡಬೇಕು. ‘ಎ’ ವರ್ಗಕ್ಕೆ ಶೇ.24ರಿಂದ ಶೇ.30, ‘ಬಿ’ ವರ್ಗಕ್ಕೆ ಶೇ.16ರಿಂದ ಶೇ.20, ‘ಸಿ’ ವರ್ಗಕ್ಕೆ ಶೇ.8ರಿಂದ ಶೇ.15 ಇರುವಂತೆ ಕೋರಿಕೆ ಸಲ್ಲಿಸಲಾಗಿದೆ.
- ಕೇಂದ್ರ ಮಾದರಿಯಲ್ಲಿ ತುಟ್ಟಿಭತ್ಯೆಯು ಶೇ.25 ಮತ್ತು ಶೇ.50ರ ಹಂತವನ್ನು ತಲುಪಿದಾಗ ಮನೆ ಬಾಡಿಗೆ ಭತ್ಯೆಗಳನ್ನು ಸ್ವಯಂಚಾಲಿತವಾಗಿ ಶೇ.3ರಷ್ಟು ಹೆಚ್ಚಿಸುವುದು.
- ರಜಾ ಪ್ರಯಾಣ ರಿಯಾಯಿತಿ ನಮ್ಮ ರಾಜ್ಯದಲ್ಲಿ ಸೇವಾವಧಿಯಲ್ಲಿ 2 ಬಾರಿ ಇದ್ದು, ಕೇಂದ್ರ ಸರ್ಕಾರದಲ್ಲಿ ಸೌಲಭ್ಯವು ಪ್ರತಿ 4 ವರ್ಷಕ್ಕೊಮ್ಮೆ ನೀಡುತ್ತಿದ್ದು, ಆದರಂತೆ ನೀಡುವುದು ಹಾಗೂ ದಿನಭತ್ಯೆಯನ್ನು ಸಹ ನೀಡುವಂತೆ ಕೋರಲಾಗಿದೆ.
- ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯೋನ್ಮುಖವಾಗಿದೆ. ಸರ್ಕಾರಿ ನೌಕರರು ವಂತಿಗೆ ನೀಡುವುದರಿಂದ ಅವಲಂಬಿತರ ಆದಾಯದ ಮಿತಿಯನ್ನು ತೆಗೆದುಹಾಕುವುದು. ವಿವಾಹಿತ ಮಹಿಳಾ ಸರ್ಕಾರಿ ನೌಕರರ ತಂದೆ-ತಾಯಿಯವರನ್ನು ಈ ಯೋಜನೆಯ ವ್ಯಾಪ್ತಿಗೆ ತರುವುದು. ಎಲ್ಲ ವೈದ್ಯಕೀಯ ಸೇವೆಗಳು ವಿಳಂಬವಿಲ್ಲದೇ ಸರಳವಾಗಿ ಹಾಗೂ ತ್ವರಿತಗತಿಯಲ್ಲಿ ಲಭ್ಯವಾಗಬೇಕು.
- ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ಈಗಿರುವ ಸೌಲಭ್ಯಗಳ ಜೊತೆಗೆ ಮಕ್ಕಳಿಗೆ ದಿನಕ್ಕೆ 2 ಬಾರಿ ಸ್ತನ್ಯಪಾನಕ್ಕಾಗಿ ಅವಕಾಶ ನೀಡುವುದು. ನಿಗದಿತ ವೇಳೆಯ ನಂತರ ಕೆಲಸ ಮಾಡಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಮನೆಗೆ ಬಿಡುವುದು.
- ತಮ್ಮ ಕಾರ್ಯವ್ಯಾಪ್ತಿಯಲ್ಲಿ ಶುಚಿತ್ವವಾದ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸುವುದು. ಬಾಡಿಗೆ ತಾಯ್ತನದ ಮಹಿಳಾ ನೌಕರರಿಗೆ ಶಿಶುಪಾಲನಾ, ಹೆರಿಗೆ ರಜೆ ಮಂಜೂರು ಮಾಡುವುದು ಹಾಗೂ ಹಾಲಿ ಇರುವ ಶಿಶುಪಾಲನಾ ರಜೆಯ ಮಂಜೂರಾತಿಯನ್ನು ಕನಿಷ್ಠ 15 ದಿನಗಳ ಬದಲಾಗಿ 7 ದಿನಗಳಿಗೆ ನಿಗದಿಪಡಿಸಬೇಕು.
- ಬೆಟ್ಟಗುಡ್ಡಗಳಿರುವ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ನೌಕರರಿಗೆ ಗಿರಿಭತ್ಯೆಯನ್ನು ಮಂಜೂರು ಮಾಡುವುದು. ಪ್ರಸ್ತುತ ನೀಡುತ್ತಿರುವ ವಾಹನ ಭತ್ಯೆ, ಸಮವಸ್ತ್ರ ಭತ್ಯೆ, ಅನ್ಯಸೇವೆ ಭತ್ಯೆ, ವಿಶೇಷ ಭತ್ಯೆಗಳನ್ನು ದ್ವಿಗುಣಗೊಳಿಸುವುದು. ನಿಗದಿತ ಪ್ರಯಾಣ ಭತ್ಯೆ, ಅನ್ಯಸೇವೆ ಭತ್ಯೆ ಹಾಗೂ ಪ್ರಭಾರ ಭತ್ಯೆ ದರವನ್ನು ಹೆಚ್ಚಿಸಬೇಕೆಂದು ಪ್ರಶ್ನೋತ್ತರದಲ್ಲಿ ಕೋರಲಾಗಿದೆ.
- ಕೇಂದ್ರ ಮಾದರಿಯಂತೆ ವರ್ಗಾವಣೆಗೊಂಡ/ ವಯೋನಿವೃತ್ತಿ ಹೊಂದುವ ರಾಜ್ಯ ಸರ್ಕಾರಿ ನೌಕರರಿಗೆ ಕೊನೆ ತಿಂಗಳ ಮೂಲ ವೇತನದ ಶೇ.80ರಷ್ಟು ವರ್ಗಾವಣೆ ಅನುದಾನ ಮತ್ತು ಸಾಮಾನು ಸರಂಜಾಮು ಸಾಗಣೆ ಭತ್ಯೆಯನ್ನು ನೀಡುವಂತೆ ಶಿಫಾರಸು ಮಾಡುವುದು.
- ಇಂಧನ ಬೆಲೆ, ಪ್ರಯಾಣ- ಸಾರಿಗೆ ವೆಚ್ಚ, ವಸತಿ ಹಾಗೂ ಊಟ- ಉಪಹಾರಗಳು ದುಬಾರಿಯಾಗಿರುವುದರಿಂದ ಪ್ರಯಾಣ ಭತ್ಯೆ, ದಿನಭತ್ಯೆ ವಿಮಾನ, ರೈಲು ಮತ್ತು ಬಸ್ಸಿನ ದರಗಳನ್ನು ಹೆಚ್ಚಿಸುವಂತೆಯೂ ಬೇಡಿಕೆ ಸಲ್ಲಿಸಲಾಗಿದೆ.
- ರಜೆ ಸೌಲಭ್ಯವನ್ನು ಪಡೆಯುವ ಉದ್ದೇಶಕ್ಕಾಗಿ ಮಾತ್ರ ಗಳಿಕೆ ರಜೆಯ ಮಿತಿಯನ್ನು ತೆಗೆದು ಹಾಕುವುದು.
- ನಿವೃತ್ತಿ ನಂತರ 300 ಗಳಿಕೆ ರಜಾ ದಿನಗಳ ನಗದೀಕರಣ ಸೌಲಭ್ಯದ ಗರಿಷ್ಠ ಮಿತಿಯನ್ನು 330ಕ್ಕೆ ಹೆಚ್ಚಿಸುವುದು. ರೂ. 25,000ಗಳ ಬಡ್ಡಿರಹಿತ ಹಬ್ಬದ ಮುಂಗಡವನ್ನು ಯಾವುದೇ ಷರತ್ತುಗಳನ್ನು ವಿಧಿಸದೆ ಎಲ್ಲ ನೌಕರರಿಗೂ ಮಂಜೂರು ಮಾಡುವುದು.
- ಎಲ್ಲ ಮುಂಗಡಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವುದು. ಮುಂಗಡದ ಮೊತ್ತವನ್ನು ಮಾರುಕಟ್ಟೆಗಳಿಗೆ ಅನುಗುಣವಾಗಿ ಹೆಚ್ಚಿಸುವುದು. ಕನಿಷ್ಠ ವೇತನದ ಮಿತಿಯನ್ನು ಶೇ.60ರಿಂದ ಶೇ.40ಕ್ಕೆ ನಿಗದಿಗೊಳಿಸುವುದು.
- ಅಂಧ ಮತ್ತು ಅಂಗವಿಕಲ ನೌಕರರ ವಾಹನ ಭತ್ಯೆಯನ್ನು ಮೂಲ ವೇತನದ ಶೇ.6 ರಿಂದ ಶೇ.10ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡುವುದು.
- ಒಂದು ಯುನಿಟ್ ದರ ರೂ. 120ರಿಂದ 1200ಕ್ಕೆ ಹೆಚ್ಚಿಸುವ ಮೂಲಕ ಸಾಮೂಹಿಕ ವಿಮಾ ಮೊತ್ತವನ್ನು ಹೆಚ್ಚಿಸುವುದು.
- ಉಳಿತಾಯ ನಿಧಿ ಮತ್ತು ವಿಮಾ ನಿಧಿ ಸದ್ಯದ 70:30ರ ಅನುಪಾತವನ್ನು 75:25 ಕ್ಕೆ ಮಾರ್ಪಡಿಸುವುದು.
- ಉಳಿತಾಯ ನಿಧಿ ಮೇಲಿನ ಬಡ್ಡಿ ದರವನ್ನು ಶೇ.2ರಷ್ಟು ಹೆಚ್ಚಿಸುವುದು.
- ಸ್ವಇಚ್ಛಾ ನಿವೃತ್ತಿಗೆ 15 ವರ್ಷ ಕನಿಷ್ಠ ಸೇವೆ ಅಥವಾ 50 ವರ್ಷ ವಯಸ್ಸು ಎನ್ನುವ ಬದಲಾಗಿ 12ವರ್ಷಗಳ ಸೇವಾವಧಿ ಅಥವಾ 45ವರ್ಷಗಳ ವಯಸ್ಸಾಗಿರಬೇಕೆಂದು ತಿದ್ದುಪಡಿ ಮಾಡುವುದು.
- ನಿವೃತ್ತಿ ಪಿಂಚಣಿಗಾಗಿ ಕನಿಷ್ಠ ಸೇವೆ 30 ರಿಂದ 25 ಕ್ಕೆ ಇಳಿಸುವುದು.
- ಕುಟುಂಬ/ ವಿಶ್ರಾಂತಿ ಪಿಂಚಣಿ- ಕನಿಷ್ಠ ಕುಟುಂಬ ರೂ. 16,500ಕ್ಕೆ ಮತ್ತು ಗರಿಷ್ಠ ರೂ. 1,50,000ಕ್ಕೆ ಹೆಚ್ಚಿಸುವುದು.
- ಮರಣ-ನಿವೃತ್ತಿ ಉಪದಾನ-ಗರಿಷ್ಠ ಮಿತಿಯನ್ನು 20ಲಕ್ಷಗಳಿಂದ 25 ಲಕ್ಷಗಳಿಗೆ ಹೆಚ್ಚಿಸುವುದು. ಪರಿವರ್ತಿತ ಹಣವನ್ನು 15 ವರ್ಷಗಳ ಕಾಲ ಪ್ರತಿ ತಿಂಗಳ ಪಿಂಚಣಿಯಲ್ಲಿ ಕಟಾಯಿಸುವ ಪದ್ಧತಿಯನ್ನು ಕೈಬಿಟ್ಟು 12 ವರ್ಷಗಳ ಕಾಲ ಮಾತ್ರ ಪಿಂಚಣಿಯಲ್ಲಿ ಕಟಾಯಿಸಬೇಕು.
- ಎಲೆಕ್ಟ್ರಾನಿಕ್ ರ್ವೀಸ್ ರಿಜಿಸ್ಟರ್ ವ್ಯವಸ್ಥೆಯನ್ನು ಶೀಘ್ರ ಜಾರಿಗೊಳಿಸಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸವಲತ್ತುಗಳನ್ನು ಎಚ್.ಆರ್.ಎಂ.ಎಸ್. ತಂತ್ರಾಂಶದ ಮೂಲಕವೇ ಪಡೆಯುವ ಅವಕಾಶ ಕಲ್ಪಿಸಿ ಪಿಂಚಣಿ ಪಾವತಿ ನಿಯಮ ಸರಳೀಕರಣಗೊಳಿಸಬೇಕು.
- ಸೇವಾನಿರತ ನೌಕರರಿಗೆ ನೀಡುವ ವಾರ್ಷಿಕ ವೇತನ ಬಡ್ತಿ ದರದಲ್ಲಿಯೇ ನಿವೃತ್ತ ನೌಕರರಿಗೂ ಸಹ ಸಮನಾಂತರ ತುಟ್ಟಿಭತ್ಯೆಯನ್ನು ನೀಡಲು ಶಿಫಾರಸು ಮಾಡುವುದು.
- 80 ವರ್ಷ ಮೇಲ್ಪಟ್ಟವರಿಗೆ ಪಿಂಚಣಿದಾರರಿಗೆ ವಯೋಮಾನವನ್ನಾಧರಿಸಿ ಹೆಚ್ಚುವರಿ ಪಿಂಚಣಿಯನ್ನು ಮಂಜೂರು ಮಾಡಲು ರ್ಕಾರಕ್ಕೆ ಶಿಫಾರಸು ಮಾಡುವುದು. ಹಾಲಿ ಇರುವ ಶೇ.30 ಕುಟುಂಬ ಪಿಂಚಣಿಯ ಪ್ರಮಾಣವನ್ನು ಮೂಲ ವೇತನದ ಶೇ.40ಕ್ಕೆ ಹೆಚ್ಚಳ ಮಾಡಬೇಕು.
- ರಾಷ್ಟ್ರದ ಕೆಲವು ರಾಜ್ಯಗಳು ಈಗಾಗಲೇ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿರುವ ಮಾದರಿಯಂತೆ ರಾಜ್ಯದಲ್ಲೂ ಸಹ ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸಿ 2006ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು.
- ಸೇವೆಯಲ್ಲಿರುವ ಎನ್.ಪಿ.ಎಸ್. ಯೋಜನೆಗೆ ಒಳಪಡುವ ನೌಕರನಿಂದ ಇದುವರೆಗೂ ಕಟಾವಣೆಗೊಂಡಿರುವ ಯೋಜನೆಯ ಒಟ್ಟು ಮೊತ್ತವನ್ನು ನೌಕರನಿಗೆ ಹಿಂದಿರುಗಿಸುವುದು ಅಥವಾ ಸಾಮಾನ್ಯ ಭವಿಷ್ಯನಿಧಿ ಖಾತೆ (ಜಿ.ಪಿ.ಎಫ್) ತೆರೆದು ವರ್ಗಾಯಿಸುವುದು.
- ವಯೋನಿವೃತ್ತಿ/ ಮೃತಪಟ್ಟಿರುವ ನೌಕರನ ಸೇವಾವಧಿಯಲ್ಲಿ ಕಟಾವಣೆಗೊಂಡ ಎನ್.ಪಿ.ಎಸ್. ಮೊತ್ತವನ್ನು ಅವಲಂಬಿತ ಕುಟುಂಬ ಸದಸ್ಯರಿಗೆ ಮರುಪಾವತಿಸುವುದು.
- ಈಗಾಗಲೇ ಎನ್.ಪಿ.ಎಸ್. ಯೋಜನೆಗೆ ಒಳಪಟ್ಟು ವಯೋನಿವೃತ್ತಿ/ ಮೃತಪಟ್ಟಿರುವ ನೌಕರರಿಗೆ ಹಳೆ ಪಿಂಚಣಿದಾರರ ಮಾದರಿಯಲ್ಲಿ ನಿವೃತ್ತಿ ವೇತನ ಹಾಗೂ ಸೌಲಭ್ಯಗಳನ್ನು ಜಾರಿಗೊಳಿಸಬೇಕು.
- 2,50,363 ಖಾಲಿ ಹುದ್ದೆಗಳ ಭರ್ತಿ ಮಾಡಿ ನೌಕರರನ್ನು ಒತ್ತಡದಿಂದ ಮುಕ್ತಿಗೊಳಿಸಿ ಸಮುದಾಯಕ್ಕೆ ಗುಣಮಟ್ಟದ ನಾಗರೀಕ ಸೇವೆಗಳನ್ನು ನೀಡಲು ಶಿಫಾರಸ್ಸು ಮಾಡುವುದು.
- ಸರ್ಕಾರಿ ನೌಕರರ ಮಕ್ಕಳು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದಲ್ಲಿ ಪ್ರೋತ್ಸಾಹ ಧನವನ್ನು ನೀಡುವುದು.
- ಶವಸಂಸ್ಕಾರ ಭತ್ಯೆ ರೂ.15000ಗಳನ್ನು ರೂ. 30,000ಗಳಿಗೆ ಹೆಚ್ಚಳ ಮಾಡುವುದು.
- ಕೇಂದ್ರ ಮಾದರಿಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಭತ್ಯೆ ಯೋಜನೆ ಜಾರಿಗೆ ತರುವ ಬಗ್ಗೆಯೂ ಉಲ್ಲೇಖಿಸಲಾಗಿದೆ.
https://suddikanaja.com/2022/12/25/pm-narendra-modi-talk-on-shivamoggas-entrepreneur-in-mann-ki-baat/