ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ನಗರದ ಪ್ರತಿಷ್ಠಿತ ಮೂರು ಆಸ್ಪತ್ರೆಗಳು ಉಚಿತ ಸೇವೆಗೆ ರೋಗಿಗಳ ಕಡೆಯವರಿಂದ ಬಿಲ್ ಕಟ್ಟಿಸಿಕೊಂಡ ಬಗ್ಗೆ ವರದಿ ಪಡೆದುಕೊಂಡು ಅವರು ಬಿಲ್ ಕಟ್ಟಿಸಿಕೊಂಡವರಿಗೆ ಸದರಿ ಮೊತ್ತವನ್ನು ಶೀಘ್ರದಲ್ಲಿ ಮರು ಪಾವತಿ ಮಾಡುವಂತೆ ಆಸ್ಪತ್ರೆಯ ನೌಕರರಿಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೂಚನೆ ನೀಡಿದರು.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ(ಎಬಿಎಆರ್.ಕೆ) ಯೋಜನೆಯಡಿ ಉಚಿತ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಕುಂದುಕೊರತೆ ಪರಿಹಾರ ಸಮಿತಿ ಮುಂದೆ ಹಾಜರುಪಡಿಸಲಾದ 15 ಪ್ರಕರಣಗಳ ಕುರಿತು ವೈದ್ಯರು, ಆಸ್ಪತ್ರೆಯ ನೌಕರರು, ರೋಗಿಗಳ ಕಡೆಯವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ಮಾತನಾಡಿದರು.
READ | ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್, ತೀರ್ಥಹಳ್ಳಿ ಯುವಕ ಅರೆಸ್ಟ್, ಏನೆಲ್ಲ ಆರೋಪಗಳಿವೆ?
ಈ ಯೋಜನೆಯಡಿ ಆಸ್ಪತ್ರೆಗಳಿಗೆ ಬಿಲ್ ಕಟ್ಟಿದ ರೋಗಿ ಕಡೆಯವರು ಆಸ್ಪತ್ರೆಗಳಲ್ಲಿ ಔಷಧಿಗೆ ಸಂಬಂಧಿಸಿದಂತೆ ಸಮರ್ಪಕವಾದ ಬಿಲ್ ನೀಡುವುದಿಲ್ಲವೆಂದು ದೂರಿದರು. ಈ ಬಗ್ಗೆ ಮಾತನಾಡಿದ ಡಿಸಿ, ಬಿಲ್ ಕಟ್ಟಿಸಿಕೊಂಡ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಿ, ಬಿಲ್ ಕಟ್ಟಿಸಿಕೊಂಡ ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಡಿ.ಎಚ್.ಓಗೆ ಸೂಚಿಸಿದರು.
5 ತಿಂಗಳಲ್ಲಿ 9 ಮರಣ
ತಾಯಿ ಮರಣ ಆಡಿಟ್ ನಡೆಸಿದ ಜಿಲ್ಲಾಧಿಕಾರಿ, 2023 ರ ಮಾರ್ಚ್ ನಿಂದ ಆಗಸ್ಟ್ ವರೆಗೆ ಒಟ್ಟು 9 ತಾಯಿ ಮರಣ (mother mortality) ಪ್ರಕರಣ ದಾಖಲಾಗಿವೆ. ಜಿಲ್ಲೆಯ 4 ಮತ್ತು ಹೊರ ಜಿಲ್ಲೆಯ 5 ಪ್ರಕರಣಗಳಿವೆ. ಜಿಲ್ಲೆಯ ಪ್ರಕರಣ ಆಗಿರಬಹುದು ಅಥವಾ ಹೊರ ಜಿಲ್ಲೆಯದ್ದಾಗಿರಬಹುದು ಕರ್ತವ್ಯ ನಿರತ ವೈದ್ಯರು, ಸಿಬ್ಬಂದಿ ಹೆರಿಗೆಗೆ ಬಂದಂತಹ ಪ್ರಕರಣಗಳನ್ನು ಆದಷ್ಟು ಶೀಘ್ರವಾಗಿ, ವಿಳಂಬವಿಲ್ಲದಂತೆ, ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ ಚಿಕಿತ್ಸೆ ನೀಡುವ ಮೂಲಕ ತಾಯಿ ಮರಣ ಪ್ರಮಾಣವನ್ನು ಸಂಪೂರ್ಣವಾಗಿ ತಗ್ಗಿಸಬೇಕೆಂದು ಸೂಚನೆ ನೀಡಿದರು. ದಾವಣಗೆರೆಗೆ ಸಂಬಂಧಿಸಿದ 1 ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಿದರು.
ಸಭೆಯಲ್ಲಿ ಡಿಎಚ್.ಓ ಡಾ.ರಾಜೇಶ್ ಸುರಗಿಹಳ್ಳಿ, ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಆರ್.ಸಿಎಚ್.ಓ ಡಾ.ನಾಗರಾಜ ನಾಯ್ಕ, ಡಿಎಲ್.ಓ ಡಾ.ಕಿರಣ್, ಎಆರ್.ಸಿ ಡಾ.ಪೂರ್ಣಿಮ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.