ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ವಿನೋಬನಗರದ ತಮ್ಮ ನಿವಾಸದಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಹುಬ್ಬಳ್ಳಿಯಲ್ಲಿ ನಡೆದ ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ.
ರಾಘವೇಂದ್ರ ಮಾಡಿದ ಆರೋಪಗಳಿವು
1. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣ, ಸರ್ಕಾರವೇ ಸಮಾಜ ವಿರೋಧಿ ಶಕ್ತಿಗಳಿಗೆ ರಕ್ಷಣೆ ನೀಡುತ್ತಿರುವುದು.
2. ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಹೋದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಹತ್ಯೆ ಮಾಡಿದ ಆರೋಪಿಯ ಮನೆಗೆ ಸರ್ಕಾರ ರಕ್ಷಣೆ ನೀಡುತ್ತಿರುವುದು ಸೋಜಿಗ.
3. ಚನ್ನಗಿರಿ ಭಾಗದಲ್ಲಿ ರಾಮನವಮಿಯಂದು ಕೆಲವು ಹಿಂದೂಗಳ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ.
4. ಅಹಿತರ ಘಟನೆಗಳು ನಡೆದಾಗ್ಯೂ ಸರ್ಕಾರ ಸೂಕ್ತ ಗಮನಹರಿಸದೇ ಇರುವುದು ನೋಡಿದರೆ ಸರ್ಕಾರ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದೆ ಎಂಬ ಅನುಮಾನ ಮೂಡುವುದು ಸಹಜ.
ಆರೋಪಿ ವಿರುದ್ಧ ಕ್ರಮಕೈಗೊಳ್ಳಿ
ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಕಾನೂನಿನ ಚೌಕಟ್ಟಿನಲ್ಲಿ ಆದಷ್ಟು ಬೇಗ ಶಿಕ್ಷೆ ಆಗಬೇಕು ಎಂದು ರಾಘವೇಂದ್ರ ಆಗ್ರಹಿಸಿದರು.
ಗ್ಯಾರಂಟಿಗಳೇ ಅವರಿಗೆ ತಿರುಗುಬಾಣ
ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು 284-285 ಸೀಟುಗಳಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಆದರೆ, ಕಾಂಗ್ರೆಸ್ ದೇಶದಲ್ಲಿ ಸ್ಪರ್ಧಿಸಿರುವುದೇ 200 ಚಿಲ್ಲರೆ ಕ್ಷೇತ್ರಗಳಲ್ಲಿ. ಹೇಗೆ ಬಹುಮತ ಗಳಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗ್ಯಾರಂಟಿಗಳೇ ಅವರಿಗೆ ತಿರುಗುಬಾಣ ಆಗಲಿವೆ. ಚುನಾವಣೆ ಪೂರ್ವದಲ್ಲಿ ಹೇಳಿದ ಗ್ಯಾರಂಟಿಗಳೇ ಬೇರ. ಅನುಷ್ಠಾನವೇ ಬೇರೆಯಾಗಿದೆ. ಈಗ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ನೀಡುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಅದರ ಒಟ್ಟು ಮೊತ್ತ ನಮ್ಮ ಬಜೆಟ್ ಗಿಂತಲೂ ಅಧಿಕವಾಗಲಿದೆ. ಈ ಗ್ಯಾರಂಟಿಗಳು ಪ್ರಾಯೋಗಿಕವಾಗಿ ಇಲ್ಲ ಎಂದು ಅಭಿಪ್ರಾಯಪಟ್ಟರು.