ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇದೇ ತಿಂಗಳ 14ರಂದು ‘ನಮಸ್ತೇ ಗೋಷ್ಟ್’ (Namaste Ghost) ಸಿನಿಮಾ ರಾಜ್ಯದಾದ್ಯಂತ ಬಿಡುಗಡೆ ಆಗಲಿದ್ದು, ಚಿತ್ರತಂಡವು ನಗರದ ಮಥುರಾ ಪ್ಯಾರಡೈಸ್’ನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡರು.
READ | ಶಿವಮೊಗ್ಗದಲ್ಲಿ ಸಂಪೂರ್ಣ ತಗ್ಗಿದ ಮಳೆ, ಯಾವ ತಾಲೂಕಿನಲ್ಲಿ ಎಷ್ಟು ಮಳೆ, ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ?
ಸಹಾಯಕ ನಿರ್ದೇಶಕಿ ರೂಪಾ ಮಾತನಾಡಿ, ಶಿವಮೊಗ್ಗ ಕಲಾತಂಡದವರೇ ನಿರ್ಮಿಸಿ ನಿರ್ದೇಶಿಸಿರುವ ಬಹುನಿರೀಕ್ಷಿತ ‘ನಮಸ್ತೇ ಗೋಷ್ಟ್’ ಸಿನಿಮಾ ನಗರದ ಭಾರತ್ ಚಿತ್ರಮಂದಿರ ಸೇರಿದಂತೆ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಭಾರತ್ ಚಿತ್ರಮಂದಿರದಲ್ಲಿ ಪ್ರದರ್ಶನವಿರುತ್ತದೆ ಎಂದು ಹೇಳಿದರು.
ವಿಭಿನ್ನ ಚಿತ್ರ, ಕಾಲೇಜುಗಳಲ್ಲೂ ಮೆಚ್ಚುಗೆ
ಚಿತ್ರವು ವಿಭಿನ್ನ ರೀತಿಯಲ್ಲಿದ್ದು, ಈಗಾಗಲೇ ಹಲವು ಕಾಲೇಜುಗಳಲ್ಲಿ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋ ನಡೆಸಿ ಚಿತ್ರ ತೋರಿಸಿದ್ದೇವೆ. ಸುಮಾರು 30 ಕಾಲೇಜುಗಳ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿನಿಮಾ ಮೆಚ್ಚಿಕೊಂಡಿದ್ದಾರೆ ಎಂದರು.
ಇಯರ್ ಫೋನ್ ಬಳಕೆಯ ವಿಚಾರವೂ ಇದೆ ಸಿನಿಮಾದಲ್ಲಿ!
ಶಿವಮೊಗ್ಗದವರೇ ಆದ ನಟ ಹರೀಶ್ ಮಾತನಾಡಿ, ಇದು ಭಯಾನಕ ಮತ್ತು ಹಾಸ್ಯಮಿಶ್ರಿತ ಚಿತ್ರವಾಗಿದೆ. “ಇಯರ್ ಫೋನ್ ಬಳಕೆಯಿಂದ ಏನಾಗಬಹುದು?” ಎಂಬ ಸಂದೇಶ ಕೂಡ ಇದರಲ್ಲಿದೆ. ಯುವಕರನ್ನು ಹೆಚ್ಚಾಗಿ ಇದು ಆಕರ್ಷಿಸುತ್ತದೆ. ಮುಖ್ಯ ಪಾತ್ರದಲ್ಲಿ ನಿರ್ದೇಶಕ ಭರತ್ ನಂದಾ, ನಾಯಕಿಯಾಗಿ ವಿದ್ಯಾರಾಜ್ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ನಾನೂ ಸೇರಿದಂತೆ ಬಾಲರಾಜ್ ವಾಡಿ, ಶಿವಕುಮಾರ್ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ ಎಂದರು.
ತಂತ್ರಜ್ಞಾನದಲ್ಲೂ ಕೂಡ ಶಿವಮೊಗ್ಗದವರೇ ಹೆಚ್ಚಾಗಿದ್ದು, ರೂಪಾ ಹರೀಶ್ ಪ್ರಸಾದನ ಕೆಲಸ ಮಾಡಿದ್ದಾರೆ ಮಧುಸೂದನ್ ಅವರ ಛಾಯಾಗ್ರಹಣವಿದೆ. ಒಟ್ಟಾರೆ ಸಿನಿಮಾದಲ್ಲಿ ಶೇ.80ರಷ್ಟು ಶಿವಮೊಗ್ಗದವರೇ ಇದ್ದಾರೆ. ಶಿವಮೊಗ್ಗದ ಜನತೆ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ಮಧುಸೂದನ್, ಅಖಿಲೇಶ್, ಶಶಿ, ಹೊಂಗಿರಣ ಚಂದ್ರಶೇಖರ್ ಇದ್ದರು.