ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುದೊಡ್ಡ ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಯಾಗಿದೆ. ರಾಜಕೀಯ ಪಕ್ಷಗಳೂ ಎಲ್ಲ ರೀತಿಯ ತಯಾರಿಗಳನ್ನು ನಡೆಸಿವೆ. ಆಯೋಗವು ಹಲವು ಷರತ್ತುಗಳನ್ನು ವಿಧಿಸಿದ್ದು, ಇದರೆಡೆಗೆ ಜನರೂ ಗಮನಹರಿಸಬೇಕಾದ ಅವಶ್ಯಕತೆ ಇದೆ.
ಈ ಕುರಿತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾಧ್ಯಮದವರೊಂದಿಗೆ ಮಾತನಾಡಿ, “ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯು ₹25,000 ಭದ್ರತಾ ಠೇವಣಿಯನ್ನು ಪರಿಶಿಷ್ಟ ಅಭ್ಯರ್ಥಿಗಳಾಗಿದ್ದಲ್ಲಿ ₹12,500 ಇರಿಸಬೇಕಾಗುವುದು. ಅಭ್ಯರ್ಥಿಯು ಚುನಾವಣಾ ವೆಚ್ಚ ₹95,000 ವರೆಗೆ ವೆಚ್ಚ ಮಾಡಲು ಹಾಗೂ ಅಭ್ಯರ್ಥಿಯು 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
READ | ಶಿವಮೊಗ್ಗದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಪ್ರಧಾನಿ ನರೇಂದ್ರ ಮೋದಿ, ಏನದು?
ಶಿವಮೊಗ್ಗದಲ್ಲಿ ಎಷ್ಟು ಮತದಾರರಿದ್ದಾರೆ?
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8,52,107 ಪುರುಷ ಮತ್ತು 8,77,761 ಮಹಿಳಾ ಮತದಾರರು ಹಾಗೂ 33 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 17,29,901 ಮತದಾರರು ಇರಲಿದ್ದಾರೆ. ಇವರಲ್ಲಿ 18-19 ವರ್ಷದೊಳಗಿನ ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಸುಮಾರು 29,788 ಯುವ ಮತದಾರರಿದ್ದಾರೆ. 85+ ವಯಸ್ಸಿನ 15,315 ಮತ್ತು ವಿಕಲಚೇತನ 18,888 ಮತದಾರರು ಈ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ ಎಂದರು. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಣೆಗಾಗಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.
ಬೈಂದೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಒಟ್ಟು 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 8600 ಸಿಬ್ಬಂದಿ ಸೇವೆಯನ್ನು ಚುನಾವಣೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೇ ಚುನಾವಣಾ ಕಾರ್ಯಕ್ಕೆ ನಿಯೋಜಿಸುವ ಅಧಿಕಾರಿ-ಸಿಬ್ಬಂಧಿಗಳಿಗೆ ಈಗಾಗಲೇ ವಿವಿಧ ಹಂತದಲ್ಲಿ ತರಬೇತಿ ನೀಡಲಾಗಿದೆ ಎಂದರು.
ಲೋಕ ಸಮರಕ್ಕೆ ಏನೆಲ್ಲ ಕಂಡಿಷನ್ಸ್?
- ಮಾಧ್ಯಮಗಳಲ್ಲಿ ಪ್ರಕಟಗೊಳಿಸುವ ಯಾವುದೇ ಜಾಹೀರಾತು, ಪಾವತಿಸುವ ಸುದ್ದಿ ಮುಂತಾದವುಗಳನ್ನು ಪ್ರಕಟಿಸುವ ಮುನ್ನ ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು.
- ಊರಿಂದೂರಿಗೆ ಪ್ರಯಾಣಿಸುವ ಸಂದರ್ಭದಲ್ಲಿ ₹50,000ಕ್ಕಿಂತ ಹೆಚ್ಚಿನ ಹಣ ಇಟ್ಟುಕೊಂಡಿದ್ದಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ಒಂದು ಲಕ್ಷಕ್ಕೂ ಹೆಚ್ಚಿನ ಹಣ ದೊರೆತಲ್ಲಿ ಆದಾಯ ತೆರಿಗೆ ಇಲಾಖಾಧಿಕಾರಿಗಳ ತನಿಖೆಗೆ ಶಿಫಾರಸ್ಸು ಮಾಡಲಾಗುವುದು.
- ಸಾರ್ವಜನಿಕರು ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳ ಮುಖಂಡರು ಬಹಿರಂಗ ಸಭೆ, ಸಮಾರಂಭಗಳನ್ನು ಆಯೋಜಿಸುವವರ ಅನುಕೂಲಕ್ಕಾಗಿ ಕೋರಿಕೆಗೆ ಅನುಮತಿ ನೀಡಲು ಏಕಗವಾಕ್ಷಿ ಪದ್ದತಿಯಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು.
- ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿ ಪಡಸಿಕೊಳ್ಳುವಂತೆ ಹಾಗೂ ಈವರೆಗೆ ಹೆಸರು ಸೇರ್ಪಡೆಗೊಳಿಸಿಕೊಳ್ಳದಿರುವವರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಳ್ಳಲು ಏಪ್ರಿಲ್ 14ರವರೆಗೆ ಅವಕಾಶ ನೀಡಲಾಗಿದೆ.
1500 ರೌಡಿಗಳ ಮೇಲೆ ಮುಂಜಾಗ್ರತಾ ಕ್ರಮ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್ ಅವರು ಮಾತನಾಡಿ, ಚುನಾವಣಾ ಕಾರ್ಯಕ್ಕೆ ಸುಮಾರು 3000ಕ್ಕೂ ಹೆಚ್ಚಿನ ಹೆಚ್ಚಿನ ಪೊಲೀಸ್ ಹಾಗೂ ಗೃಹರಕ್ಷಕ ಸೇವೆಯನ್ನು ಹಾಗೂ ಪ್ಯಾರಾ ಮಿಲಿಟರಿ ತುಕಡಿಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈಗಾಗಲೇ 1500 ರೌಡಿ ಶೀಟರ್ ಗಳ, ಗೂಂಡಾಗಳ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈಲ್ಲೆಯಲ್ಲಿ ಸಾರ್ವಜನಿಕರು ಹೊಂದಿರುವ ಶಸ್ತ್ರಾಸ್ತ್ರಗಳನ್ನು ಡಿಪಾಜಿಟ್ ಮಾಡುವಂತೆಯೂ ಸೂಚಿಸಲಾಗಿದೆ ಎಂದರು.