ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿಜೆಪಿ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರರ ವಿರುದ್ಧ ರೆಬೆಲ್ ಆಗಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಮಠಗಳಿಗೆ ಭೇಟಿ ನೀಡಿದ್ದಾರೆ.
ಇನ್ನೂ ವಿಶೇಷವೆಂದರೆ, ಸೋಮವಾರ ಶಿವಮೊಗ್ಗ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ವಿಚಾರ ತಿಳಿದಿದ್ದರೂ ಅಂದು ಬೆಳಗ್ಗೆಯಿಂದಲೇ ವಿವಿಧ ಮಠಗಳಿಗೆ ಭೇಟಿ ನೀಡುವ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ತಾನು ಯಾವುದಕ್ಕೂ ಬಗ್ಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ಹೈಕಮಾಂಡ್’ಗೂ ನೀಡಿದ್ದಾರೆ.
VIDEO REPORT
READ | ಶಿವಮೊಗ್ಗಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಂದರೂ ಬಿಜೆಪಿಯ ಕಟ್ಟಾಳುಗಳು ಗೈರು, ಯಾರೆಲ್ಲ ಬಂದಿಲ್ಲ?
ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಈಶ್ವರಪ್ಪ ಗೈರಾಗಿದ್ದು, ಯಾರೂ ತಪ್ಪಿಯೂ ವೇದಿಕೆಯ ಮೇಲೆ ಅವರ ಹೆಸರನ್ನು ಹೇಳದಿರುವುದು ಅಸಮಾಧಾನದ ಹೊಗೆ ಇನ್ನೂ ಉಪಶಮನ ಆಗಿಲ್ಲ ಎನ್ನುವಂತಿತ್ತು.
ಇತ್ತೀಚೆಗೆ ಬಿಜೆಪಿಯ ಪ್ರಮುಖರು ಈಶ್ವರಪ್ಪ ಅವರಿಗೆ ಆಹ್ವಾನಿಸಿದ್ದು, ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಹೇಳಿಕೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್ ಅವರು ಖುದ್ದು ಮನೆಗೆ ತೆರಳಿದ್ದರು. ಅವರೊಂದಿಗೆ ಶಾಸಕರಾದ ಡಿ.ಎಸ್.ಅರುಣ್, ಆರಗ ಜ್ಞಾನೇಂದ್ರ ಅವರೂ ಇದ್ದರು. ಅಂದೂ ಈಶ್ವರಪ್ಪ ಭೇಟಿ ಆಗಿರಲಿಲ್ಲ. ಮನೆಯಲ್ಲಿಯೇ ಕಾಯ್ದು ಮುಖಭಂಗ ಹೊಂದಬೇಕಾಯಿತು.
ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಈಶ್ವರಪ್ಪ ಘೋಷಿಸಿಕೊಂಡಿದ್ದು, ಅದನ್ನು ಪದೇ ಪದೇ ರುಜುವಾತುಪಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜಿ ಪ್ರಶ್ನೆಯೇ ಇಲ್ಲ ಎಂಬಂತೆ ಅವರ ನಡೆ ಇದೆ.
ಈಶ್ವರಪ್ಪ ಎಲ್ಲೆಲ್ಲಿ ಭೇಟಿ?
ಈಶ್ವರಪ್ಪ ಅವರು ಭದ್ರಾವತಿ ತಾಲೂಕು ಬೆಳಕಿ ಮಠಕ್ಕೆ ಭೇಟಿ ನೀಡಿದರು. ಮಠದ ಕರ್ತೃ ಗದ್ದುಗೆ ದರ್ಶನ ಪಡೆದು ಮಠಾಧೀಶರನ್ನು ಭೇಟಿ ಮಾಡಿದರು.
ಭದ್ರಾವತಿಯ ಭದ್ರಾಗಿರಿ ಮಠ, ಗೋಣಿಬಿಡು ಮಠ, ಶಿಂಶ ಮಠ, ಶಿಕಾರಿಪುರದ ತೂಗರ್ಸಿ ಮಠ, ಸೊರಬದ ಜಡೆ ಮಠ, ಮಚ್ಚಿ ಮಠ, ಶಾಂತಪುರ ಮಠ, ಹೊಸನಗರದ ಮೂಲೆಗದ್ದೆ ಮಠಗಳಿಗೆ ಭೇಟಿ ನೀಡಿದರು. ಎಲ್ಲ ಶ್ರೀಗಳ ಆಶೀರ್ವಾದ ಪಡೆದರು.