ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕರ್ನಾಟಕದಲ್ಲಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಕಾಂಕ್ಷಿ, ಸೂಪರ್ ಸಿಎಂ ಮತ್ತು ಶ್ಯಾಡೋ ಸಿಎಂ ಹೀಗೆ ನಾಲ್ಕು ಜನ ಮುಖ್ಯಮಂತ್ರಿಗಳಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.
READ | ಶಿವಮೊಗ್ಗದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಪ್ರಧಾನಿ ನರೇಂದ್ರ ಮೋದಿ, ಏನದು?
ನಗರದ ಅಲ್ಲಮಪ್ರಭು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ವಿಕಸಿತ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ನಾಲ್ಕು ಜನ ಸಿಎಂಗಳಲ್ಲದೇ ದೆಹಲಿಯಲ್ಲಿ ಒಬ್ಬ ಕಲೆಕ್ಷನ್ ಮಿನಿಸ್ಟರ್ ಇದ್ದಾರೆ. ಕರ್ನಾಟಕವನ್ನು ಎಟಿಎಂ ಆಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.
ಜೂನ್ 4ಕ್ಕೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಅಂದು ದೇಶದಲ್ಲಿ 400 ಮತ್ತು ಕರ್ನಾಟಕದಲ್ಲಿ 28 ಸೀಟ್ಗಳು ಎನ್ಡಿಎಗೆ ಬರಲಿವೆ. ರಾಜ್ಯ, ದೇಶದ ವಿಕಾಸಕ್ಕಾಗಿ, ಭ್ರಷ್ಟಾಚಾರ ವಿರುದ್ಧ, ರೈತರು ಮತ್ತು ಮಹಿಳೆಯರ ಅಭಿವೃದ್ಧಿಗಾಗಿ ಎನ್.ಡಿಎ ಗೆಲ್ಲಬೇಕಿದೆ.
– ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಮೋದಿ ಪ್ರಖರ ವಾಗ್ದಾಳಿ, ಏನೆಲ್ಲ ಆರೋಪಿಸಿದರು?
- ಕಾಂಗ್ರೆಸ್ ಪ್ರಮುಖ ಅಜೆಂಡಾವೇ ಲೂಟಿ ಮಾಡುವುದು. ಅದಕ್ಕಾಗಿ ಅವರು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಬ್ರಿಟಿಷರು ಭಾರತ ಬಿಟ್ಟು ತೊಲಗಿದರೂ ಕಾಂಗ್ರೆಸ್ ನವರು ಬ್ರಿಟಿಷರ ಮಾನಸಿಕತೆ ಅನುಸರಿಸುತ್ತಿದ್ದಾರೆ.
- ಕಾಂಗ್ರೆಸ್ ಬಳಿ ದೇಶ ಮತ್ತು ರಾಜ್ಯದ ವಿಕಾಸಕ್ಕೆ ಗುರಿಯೇ ಇಲ್ಲ. ಅದಕ್ಕಾಗಿ ಅವರು ಮೊದಲು ಸುಳ್ಳು ಹೇಳುತ್ತಾರೆ. ಅದನ್ನೇ ಸಮರ್ಥಿಸಿಕೊಳ್ಳಲು ಮತ್ತೊಂದು ಸುಳ್ಳು ಹೇಳುತ್ತಾರೆ. ಇದು ಅವರ ಎರಡನೇ ಅಜೆಂಡಾ. ತಮ್ಮ ಸುಳ್ಳನ್ನು ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪಗಳನ್ನು ಎತ್ತಿ ಹಾಕುತ್ತಿದೆ.
- ದೆಹಲಿ ನಾಯಕರ ಪಾಲಿಗೆ ಕರ್ನಾಟಕ ಎಟಿಎಂ ಯಂತ್ರದಂತಾಗಿದೆ. ಮನಸು ಬಂದಾಗ ಲೂಟಿ ಮಾಡಲಾಗುತ್ತಿದೆ. ಇದರಿಂದ ಕರ್ನಾಟಕ ಆರ್ಥಿಕವಾಗಿ ಜರ್ಜರಿತವಾಗಿದೆ. ಸುಳ್ಳುಗಳಿಂದಾಗಿ ರಾಜ್ಯ ಸರ್ಕಾರದ ಬಳಿ ಹಣವೇ ಇಲ್ಲ.
- ಹಿಂದೂ ಶಕ್ತಿಯ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ಮುಂಬೈನಲ್ಲಿ ಹೇಳಿದೆ. ಇದರಿಂದ ಬಾಳ್ ಠಾಕ್ರೆ ಎಷ್ಟು ದುಃಖವಾಗಿರಬಹುದು? ಆಕ್ತಿ ದೇವತೆಯಾದ ತುಳಜಾ ಭವಾನಿಯ ಉಪಾಸನೆ ಮಾಡುವ ಸ್ಥಳದಲ್ಲಿ ಶಕ್ತಿ ನಿರ್ಮೂಲನೆ ಬಗ್ಗೆ ಕಾಂಗ್ರೆಸ್ ಕರೆ ನೀಡಿದೆ. ಆದರೆ, ಬಿಜೆಪಿ ಈ ಶಕ್ತಿ ಉಪಾಸನೆಗೆ ಕರೆ ನೀಡುತ್ತದೆ. ನನಗೆ ಸದಾ ಶಕ್ತಿ ನೀಡಿದ್ದು, ಇದೇ ಶಕ್ತಿ ದೇವತೆಗಳು. ಅವುಗಳೇ ನನ್ನ ಪ್ರಭಾವಳಿಗೆ ಕಾರಣ. ನನ್ನ ದೊಡ್ಡ ರಕ್ಷಾ ಕವಚ.
- ಶಕ್ತಿ ದೇವತೆಯ ವಿನಾಶಕ್ಕೆ ಕರೆ ನೀಡುವ ಮೂಲಕ ಕಾಂಗ್ರೆಸ್ ನಾರಿ ಶಕ್ತಿಗೆ ಅವಮಾನ ಮಾಡಿದೆ. ಭಾರತ ಮಾತೆಯ ಶಕ್ತಿಯ ಸರ್ವನಾಶಕ್ಕೆ ಕಾಂಗ್ರೆಸ್ ಹೆಜ್ಜೆ ಇಟ್ಟಿದೆ. ಭಾರತದ ಮಹಿಳೆಯರಿಗೆ ಇದರಿಂದ ಅವಮಾನವಾಗಿದೆ.
- ಮಂತ್ರ ಕಣ, ಶಕ್ತಿ ಕಣ, ತಾಯಿ ಕಣ, ದೇವಿ ಕಣ ಎಂದು ಕುವೆಂಪು ಅವರ ಕವಿತೆಯನ್ನು ಮೋದಿ ಉಲ್ಲೇಖಿಸಿದರು. ಕರ್ನಾಟಕದ ದೊಡ್ಡ ಶಕ್ತಿ ಕುವೆಂಪು. ಅವರೂ ಸಹ ಮಹಿಳಾ ಶಕ್ತಿಯನ್ನು ವರ್ಣಿಸಿದ್ದಾರೆ.
ಐದು ಅಭ್ಯರ್ಥಿಗಳ ಮತ ಯಾಚಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಐದು ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ, ದಕ್ಷಿಣ ಕನ್ನಡ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್, ಶಿವಮೊಗ್ಗ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ಮತಯಾಚಿಸಿದರು. ದಾವಣಗೆರೆ, ಶಿವಮೊಗ್ಗ ಅಭ್ಯರ್ಥಿಗಳು ಮೋದಿ ಅವರೊಂದಿಗೆ ತೆರೆದ ವಾಹನದಲ್ಲಿ ಸಾರ್ವಜನಿಕರ ನಡುವೆ ವೇದಿಕೆ ಪ್ರವೇಶಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ, ದಕ್ಷಿಣ ಕನ್ನಡ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್, ಶಿವಮೊಗ್ಗ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ದಾವಣಗೆರೆ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಪ್ರಮುಖರಾದ ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಶಾರದಾ ಪೂರ್ಯನಾಯ್ಕ, ಚನ್ನಬಸಪ್ಪ, ಟಿ.ಡಿ.ಮೇಘರಾಜ, ಕೆ.ಬಿ.ಅಶೋಕನಾಯ್ಕ, ಹರತಾಲು ಹಾಲಪ್ಪ, ಭಾರತಿಶೆಟ್ಟಿ, ಜಿ.ಎನ್.ಸಿದ್ದೇಶ್, ಸಿ.ಟಿ.ರವಿ, ಸುನೀಲ್ ಕುಮಾರ್, ಕುಮಾರ ಬಂಗಾರಪ್ಪ, ಭಾನುಪ್ರಕಾಶ್ ಮತ್ತಿತರರಿದ್ದರು.