ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಬಂದು ಚುನಾವಣೆಗೆ ಅಧಿಕೃತವಾಗಿ ರಣಕಹಳೆಯನ್ನು ಬಾರಿಸಿದ್ದಾರೆ. ಆದರೆ, ಬಿಜೆಪಿಯ ಕೆಲವು ಕಟ್ಟಾಳುಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದು ಪಕ್ಷದೊಳಗಿರುವ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
READ | 10 ತಿಂಗಳುಗಳ ಬಳಿಕ ಬಿಜೆಪಿ ವೇದಿಕೆ ಕಾರ್ಯಕ್ರಮದಲ್ಲಿ ಕುಮಾರ ಬಂಗಾರಪ್ಪ ಪ್ರತ್ಯಕ್ಷ!
ನರೇಂದ್ರ ಮೋದಿ ಎಂದರೆ ನನಗೆ ಅತೀಮ ಅಭಿಮಾನ ಎಂದೆಲ್ಲ ಮಾತನಾಡಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಮೋದಿ ಅವರು ರಾಘವೇಂದ್ರ ಅವರ ಪರ ಮತಪ್ರಚಾರಕ್ಕೆ ಬರುತ್ತಿರುವುದರಿಂದ ತಾನು ಬರುವುದಿಲ್ಲ ಎಂದು ಮುಂಚೆಯೇ ಹೇಳಿಕೊಂಡಿದ್ದರು. ಅದಕ್ಕೆ ಬದ್ಧವಾಗಿ ನಡೆದುಕೊಂಡಿದ್ದಾರೆ.
ಸೋಮವಾರ ಬೆಳಗ್ಗೆಯಿಂದಲೇ ಈಶ್ವರಪ್ಪ ಅವರು ಹಲವೆಡೆ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ಪಕ್ಷದ ಕಾರ್ಯಕ್ರಮವಾಗಿದ್ದರಿಂದ ಬ್ಯಾನರ್ ನಲ್ಲಿ ಈಶ್ವರಪ್ಪ ಅವರ ಚಿತ್ರವನ್ನು ಸಹ ಹಾಕಲಾಗಿತ್ತು. ಆದರೆ, ಅವರು ಮಾತ್ರ ಬಂದಿರಲಿಲ್ಲ.
ಗಾಯತ್ರಿ ಸಿದ್ದೇಶ್ವರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಪಕ್ಷದ ಹಲವು ಮುಖಂಡರು ಸಿಡಿದೆದ್ದಿದ್ದಾರೆ. ದಾವಣಗೆರೆಯಿಂದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗಮಿಸಿರಲಿಲ್ಲ.
ಈ ಕಾರ್ಯಕ್ರಮವು ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ದಾವಣಗೆರೆ ಕ್ಷೇತ್ರಗಳನ್ನು ಒಳಗೊಂಡ ಕಾರ್ಯಕ್ರಮವಾಗಿತ್ತು. ಈ ಭಾಗದ ಪ್ರಮುಖ ನಾಯಕರು ಆಗಮಿಸಿರಲಿಲ್ಲ.