ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ವಯಸ್ಸಾಗಿತ್ತು. ಈಗ ಚುನಾವಣೆ ವಿಚಾರದಲ್ಲಿ ಓಡಾಡುವುದಕ್ಕೆ ಅವರಿಗೆ ಯೌವ್ವನ ಇದೆಯೇ? ಬಿಜೆಪಿ ಪಾಪ ಆ ಹಿರಿಜೀವವನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ (Aynuru Manjunath) ಹೇಳಿದರು.
READ |ನೈರುತ್ಯ ರೈಲ್ವೆ ಸಮಯಪ್ರಜ್ಞೆಯಲ್ಲಿ ನಂ.1, ಕಾರಣವೇನು?
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಲೂ ಯಡಿಯೂರಪ್ಪ ಆರೋಗ್ಯವಾಗೇ ಇದ್ದಾರೆ. ನಡಿಗೆಯಲ್ಲಿ ಅವರ ವೇಗಕ್ಕೆ ಹೋಗುವುದಕ್ಕೂ ಆಗುವುದಿಲ್ಲ. ನಾನು ಅವರ ಶಿಷ್ಯನಾಗಿದ್ದವನು. ಅವರ ಬಗ್ಗೆ ಅಪಾರ ಗೌರವವಿದೆ. ಆದರೆ, ಅವರನ್ನು ಸ್ವಪಕ್ಷದಲ್ಲೇ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರದಿಂದ ಸ್ಪಂದನೆಯೇ ಸಿಗುತ್ತಿಲ್ಲ
ರಾಜ್ಯದಲ್ಲಿ ಬರವಿದ್ದು, ಕೇಂದ್ರ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ರಾಜಕೀಯ ಮಾಡುತ್ತಿದೆ. ಈಗ ಬಿಜೆಪಿಯವರೇ ಬರ ಅಧ್ಯಯನ ಮಾಡುವುದರಲ್ಲಿ ರಾಜಕೀಯ ದುರುದ್ದೇಶ ಬಿಟ್ಟರೆ ಮತ್ತೇನೂ ಇಲ್ಲ. ರಾಜ್ಯದಲ್ಲಿ ಬಿಜೆಪಿಯ ಅತಿ ಹೆಚ್ಚು ಸಂಸದರಿದ್ದಾರೆ. ಅವರು ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ನಡೆದಿರುವ ಜಲಜೀವನ್ ಮಿಷನ್ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.