ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪರೋಕಾಸ್ಟ್ ಸಭಾಂಗಣದಲ್ಲಿ ಉದ್ದಿಮೆದಾರರು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಶುಕ್ರವಾರ ಸಂವಾದ ಕಾರ್ಯಕ್ರಮ ನಡೆಯಿತು. ಈ ವೇಳೆ ಹಲವು ಕೈಗಾರಿಕೋದ್ಯಮಿಗಳು ತಮ್ಮ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಂದೆ ಹಂಚಿಕೊಂಡರು.
ಟೌನ್ ಶಿಪ್ ಗೆ ಕಾನೂನಿನ ತೊಡಕು
ಸಂವಾದದಲ್ಲಿ ಮಾತನಾಡಿದ ಮಾಚೇನಹಳ್ಳಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎಂ.ಎ.ರಮೇಶ್ ಹೆಗ್ಡೆ (Machenahalli Industries Association President M.A.Ramesh Hegde) , ಟೌನ್ಶಿಪ್ ಅಭಿವೃದ್ದಿಗೆ ಕನಿಷ್ಠ 1,250 ಎಕರೆ ಬೇಕೆಂಬ ಕಾನೂನು ತೊಡಕಾಗಿದೆ. ಇಲ್ಲಿ ಅಷ್ಟು ಜಾಗ ಸಿಗುವುದು ಕಷ್ಟ. ಈ ನಿಯಮದಲ್ಲಿ ಬದಲಾವಣೆ ತಂದರೆ ಶಿವಮೊಗ್ಗದಲ್ಲಿ ಕೈಗಾರಿಕೆ ಬೆಳೆಯುವುದು ಹಾಗೂ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಒದಗುವುದು ಎಂದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವಮಧು ಬಂಗಾರಪ್ಪ (Shivamogga district in charge minister Machu Bangarappa) ತಾವು ಈ ಕುರಿತು ಬೃಹತ್ ಕೈಗಾರಿಕೆಗಳ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಕೈಗಾರಿಕೋದ್ಯಮಿಗಳ ಸಹಕಾರಕ್ಕೆ ನಾನು ಸಿದ್ಧ
‘ಶಿವಮೊಗ್ಗದಲ್ಲಿ ಕೈಗಾರಿಕೋದ್ಯಮ ಬೆಳೆಯುವ ಸಾಮರ್ಥ್ಯ ಇದ್ದು, ಇದಕ್ಕೆ ಅಗತ್ಯವಾದ ಸಹಕಾರ ನೀಡಲು ಸಿದ್ದನಿದ್ದೇನೆ. ಬದಲಾವಣೆ ತರಲು ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಯಮಿಗಳಿಗೆ ಸಲಹೆ ನೀಡಿದರು.
ಶಿವಮೊಗ್ಗ ಸಾಕಷ್ಟು ಬೆಳೆದಿದೆ. ಆದರೆ, ಇಚ್ಚಾಶಕ್ತಿ ಅಥವಾ ಇನ್ನಾವುದೋ ಕೊರತೆಯಿಂದ ಕೈಗಾರಿಕೋದ್ಯಮ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ. ಕೈಗಾರಿಕೆಗಳು ಬೆಳೆಯಲು ಅಗತ್ಯವಾದ ಮೂಲಸೌಕರ್ಯಗಳು, ರಸ್ತೆ, ವಿಮಾನ ನಿಲ್ದಾಣ ಸೇರಿದಂತೆ ಎಲ್ಲ ರೀತಿಯ ಸೌಕರ್ಯ ಇದೆ. ಇದರ ಬಳಕೆ ಆಗಬೇಕು. ಕೈಗಾರಿಕೆ ಬೆಳೆದಷ್ಟು ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ದಿ ಆಗುವುದು ಎಂದು ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಪ್ರಾ¸ಸ್ತಾವಿಕವಾಗಿ ಮಾತನಾಡಿದರು.
READ | ಶಿವಮೊಗ್ಗ- ಹೈದ್ರಾಬಾದ್, ಗೋವಾ, ತಿರುಪತಿಗೆ ವಿಮಾನ, ವೇಳಾಪಟ್ಟಿ, ಟಿಕೆಟ್ ದರವೆಷ್ಟು, ಇಲ್ಲಿದೆ ಕಂಪ್ಲೀಟ್ ಮಾಹಿತಿ
ಕೈಗಾರಿಕೋದ್ಯಮಿಗಳ ಬೇಡಿಕೆಗಳೇನು?
ಟ್ರಕ್ ಟರ್ಮಿನಲ್ ಮಾಡಿ
ಕೈಗಾರಿಕೋದ್ಯಮಿ ಪ್ರದೀಪ್ ಮಾತನಾಡಿ, ಶಿವಮೊಗ್ಗದಲ್ಲಿ ಟ್ರಕ್ ಟರ್ಮಿನಲ್ ಇಲ್ಲದ ಕಾರಣ ತೊಂದರೆ ಆಗುತ್ತಿದೆ. ಟ್ರಕ್ಗಳನ್ನು ನಿಲ್ಲಿಸಲು ಜಾಗ ಇಲ್ಲದ ಕಾರಣ ಹೆಚ್ಚು ಬಾಡಿಗೆ ಕೇಳುತ್ತಾರೆ ಎಂದರು.
ರೈಲ್ವೆ ಕೋಚ್ ಕಾಮಗಾರಿಯ ವೇಗ ಹೆಚ್ಚಲಿ
ಉದ್ಯಮಿ ಉದಯಕುಮಾರ್ ಮಾತನಾಡಿ, ಕೋಟೆಗಂಗೂರು ರೈಲ್ವೆ ಕೋಚ್ ಕಾಮಗಾರಿಯ ವೇಗ ಹೆಚ್ಚಿಸಬೇಕು. ಟ್ರೇಡ್ ಲೈಸೆನ್ಸ್ ಪ್ರಕ್ರಿಯೆ ತುಂಬಾ ವಿಳಂಬವಾಗುತ್ತಿದ್ದು ಎಷ್ಟೋ ಜನರು ಲೈಸೆನ್ಸ್ ಪಡೆದಿರುವುದಿಲ್ಲ. ಹಾಗೂ ಸ್ಮಾರ್ಟ್ಸಿಟಿ ಕಾಮಗಾರಿ, ಫುಟ್ಪಾತ್ ನಲ್ಲಿ ಸಾಕಷ್ಟು ಅಂಗಡಿಗಳಿಂದ ತೊಂದರೆಯಾಗುತ್ತಿದೆ ಎಂದರು.
440 ವೋಲ್ಟ್ ಅವಶ್ಯ
ಸಂತೋಷ್ ಮಾತನಾಡಿ, ಉದ್ಯಮಗಳಿಗೆ 440 ವೋಲ್ಟ್ ಅವಶ್ಯಕತೆ ಇದೆ. ಸುಮಾರು 300 ವೋಲ್ಟ್ ನೀಡಲಾಗುತ್ತಿದ್ದು ಇದರಿಂದ ಎಲೆಕ್ಟ್ರಿಫಿಕೇಷನ್ ಇತರೆ ತೊಂದರೆಯಾಗುತ್ತಿದೆ ಎಂದರು.
ಅಂಡರ್ ಪಾಸ್ ಓಪನ್ ಮಾಡಿ
ಪ್ರಕಾಶ್ ಮಾತನಾಡಿ, ಗಾಂಧಿ ಬಜಾರ್ ಬಳಿ ಇರುವ ಅಂಡರ್ ಪಾಸ್ ಬಳಕೆಯಾಗುತ್ತಿಲ್ಲ. ಇದನ್ನು ಉಪಯೋಗಿಸುವುದರಿಂದ ಟಾಫಿಕ್ ಸಮಸ್ಯೆ ಬಗೆಹರಿಸಬಹುದು. ಪಾರ್ಕಿಂಗ್ ಆಗಿ ಹಾಗೂ ಇತರೆ ಉದ್ದೇಶಗಳಿಗೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ರಸ್ತೆ ಸರಿಯಿಲ್ಲದ್ದಕ್ಕೆ ಟ್ರಾನ್ಸ್ ಪೋರ್ಟ್ ಸಮಸ್ಯೆ
ಮೋಹನ್ ಮಾತನಾಡಿ, ರಸ್ತೆ ಸಾರಿಗೆ ಸಮಸ್ಯೆಯಿಂದ, ರಸ್ತೆ ಸರಿ ಇಲ್ಲದ ಕಾರಣ ದಾವಣಗೆರೆ, ಗದಗ ಹೀಗೆ ಬೇರೆ ಜಿಲ್ಲೆಗಳೊಂದಿಗೆ ತಾವು ವ್ಯವಹರಿಸಲು ಕಷ್ಟವಾಗುತ್ತಿದೆ ಎಂದರು.
ಶಾಶ್ವತ ಕೈಗಾರಿಕಾ ಯೋಜನೆ ಬೇಕು
ವಿಶ್ವೇಶ್ವರಯ್ಯ ಮಾತನಾಡಿ, ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿದಂತೆ ಕೈಗಾರಿಕೋದ್ಯಮಿಗಳ ಸಭೆ ಕರೆದು ಸಚಿವರು ವಿನೂತನ ಮತ್ತು ಶಾಶ್ವತ ಕೈಗಾರಿಕಾ ಯೋಜನೆಯನ್ನು ತರಬೇಕು. ಇಲ್ಲಿ ಕೈಗಾರಿಕೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಇದೆ. ನಿರುದ್ಯೊಗ ಸಮಸ್ಯೆ ನಿವಾರಣೆ ಆಗುವುದು ಎಂದರು.
ಇನ್ನೂ ಹಲವಾರು ಕೈಗಾರಿಕೋದ್ಯಮಿಗಳು ವಿವಿಧ ಸಮಸ್ಯೆಗಳು ಮತ್ತು ಸಲಹೆಗಳೊಂದಿಗೆ ಸಚಿವರೊಂದಿಗೆ ಸಂವಾದ ನಡೆಸಿದರು. ಸಚಿವರು ಪ್ರತಿಕ್ರಿಯಿಸಿ, ಕೈಗಾರಿಕೆಗಳು ಬೆಳೆಯಲು ಅಗತ್ಯವಾದ ಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳು ತೆಗೆದುಕೊಳ್ಳಲು ಸೂಚಿಸುತ್ತೇನೆ. ಹೊಸ ಕೈಗಾರಿಕೆ ಮತ್ತು ಇತರೆ ಸಲಹೆ ಕುರಿತು ತಾವು ಸ್ಪಂದಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (shivamogga DC Dr.R.Selvamani) ಪಾಲಿಕೆ ಆಯುಕ್ತ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣಗೌಡ, ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ ವಾಸುದೇವ, ಕಾರ್ಯದರ್ಶಿ ವಸಂತ ಹೋಬಳಿದಾರ್, ಜಂಟಿ ಕಾರ್ಯದರ್ಶಿ ವಿಜಯಕುಮಾರ್, ಅಶ್ವಥ್ ನಾರಾಯಣ, ಸಂಯೋಜಕ ಸಂಘದ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಜರಿದ್ದರು.