ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಬಳಿಕ ಖರ್ಚಿಗೂ ಕಾಸಿಲ್ಲದೇ ಬೈಕ್ ಕಳ್ಳತನ ದಂಧೆ ಮಾಡುತ್ತಿದ್ದ ಗ್ಯಾಂಗ್’ವೊಂದನ್ನು ತುಂಗಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾದ್ಯಂತ ಬೈಕ್ ಕಳವು ಮಾಡಿ ಸಾರ್ವಜನಿಕರ ಪಾಲಿಗೆ ತಲೆನೋವಾಗಿದ್ದ ಈ ಗ್ಯಾಂಗ್ ಅನ್ನು ಬಂಧಿಸಿ, ಜೈಲಿಗೆ ಅಟ್ಟಲಾಗಿದೆ. ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂಧ ತನಿಖೆ ನಡೆಸಿದ ತುಂಗಾ ನಗರ ಪೊಲೀಸರು ಬುಧವಾರ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಅಂದಾಜು 3.44 ಲಕ್ಷ ರೂ. ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರು: ಕೆಳಗಿನ ತುಂಗಾನಗರದ ತಬಾರಕ್ (19), ರಾಗಿಗುಡ್ಡದ ಸೈಯದ್ ಸುಭಾನ್ (20), ಟಿಪ್ಪುನಗರದ ಜುನೈದ್ (19) ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಯಾವ ಠಾಣೆಯಲ್ಲಿ ಎಷ್ಟು ಕೇಸ್: ತುಂಗಾನಗರ ಪೊಲೀಸ್ ಠಾಣೆಯಲ್ಲಿ 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ, ದೊಡ್ಡಪೇಟೆ ಠಾಣೆಯಲ್ಲಿ 4 ದ್ವಿ ಚಕ್ರ ವಾಹನ ಕಳವು ಪ್ರಕರಣ, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 1 ದ್ವಿ ಚಕ್ರ ವಾಹನ ಕಳವು, ವಿನೋಬನಗರ ಠಾಣೆ 1 ದ್ವಿ ಚಕ್ರ ವಾಹನ ಕಳವು, ಕೋಟೆ ಠಾಣೆಯಲ್ಲಿ 1 ದ್ವಿ ಚಕ್ರ ವಾಹನ, ಕುಂಸಿ ಠಾಣೆಯಲ್ಲಿ 1 ದ್ವಿ ಚಕ್ರ ವಾಹನ ಕಳವು ಮತ್ತು ಭದ್ರಾವತಿ ಹಳೆನಗರ ಠಾಣೆಯಲ್ಲಿ 1 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 11 ದ್ವಿ ಚಕ್ರ ವಾಹನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ.
ಕಾರ್ಯಾಚರಣೆ ನಡೆಸಿದ ತಂಡ: ಡಿವೈಎಸ್.ಪಿ ಉಮೇಶ್ ಈಶ್ವರ್ ನಾಯ್ಕ, ಮಾರ್ಗದರ್ಶನದಲ್ಲಿ ಶಿವಮೊಗ್ಗ ಗ್ರಾಮಾಂತರ ಸಿಪಿಐ ಸಂಜೀವ್ ಕುಮಾರ್ ನೇತೃತ್ವದಲ್ಲಿ
ತುಂಗಾನಗರ ಠಾಣೆಯ ಪಿಎಸ್.ಐ ತಿರುಮಲೇಶ್, ಎಎಸ್.ಐ ಜಿ.ಆರ್. ನಾರಾಯಣ್, ಸಿಬ್ಬಂದಿ ಸೈಯ್ಯದ್ ಇಮ್ರಾನ್, ಕೆ.ಆರ್. ರಾಜು, ಆರ್.ಗುರುನಾಯ್ಕ, ಲಂಕೇಶ್ ಕುಮಾರ್ ತಂಡ ಕಾರ್ಯಾಚರಣೆ ನಡೆಸಿದೆ.