ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸುದೀರ್ಘ ಆರೇಳು ತಿಂಗಳು ರಂಗ ಚಟುವಟಿಕೆ ಸ್ತಬ್ಧವಾಗಿತ್ತು. ಕಲಾವಿದರಿಗೆ ರಂಗಸಜ್ಜಿಕೆಯ ಪ್ರದರ್ಶನ ನೀಡಬೇಕಾದರೆ ಕೋವಿಡ್ ಅಡ್ಡಿಯಾಗಿತ್ತು. ಆದರೆ, ಬಹುತೇಕ ನಿಯಮಗಳು ಸಡಿಲಗೊಂಡು ಪ್ರಕರಣಗಳ ಸಂಖ್ಯೆಯಲ್ಲಿ ಕಂಡುಬಂದಿದೆ. ಹೀಗಾಗಿ, ರಂಗಭೂಮಿ ಮತ್ತೆ ಗರಿಗೆದರಲು ಆರಂಭಿಸಿದೆ.
ಶಿವಮೊಗ್ಗ ರಂಗಾಯಣವು ಭಾನುವಾರ ಸಂಜೆ ಆಯೋಜಿಸಿದ್ದ ‘ಚಾಣಕ್ಯ ಪ್ರಪಂಚ’ ನಾಟಕ ವೀಕ್ಷಕರ ಮನಸೂರೆಗೊಂಡಿತ್ತು. ರಂಗಾಯಣ ರೆಪ್ರೆರ್ಟರಿ ಕಲಾವಿದರೇ ಅಭಿನಯಿಸಿರುವ ನಾಟಕ ಮನಸ್ಸಿಗೆ ಮುದ ನೀಡಿತು.
500 ಆಸನದ ಸಾಮರ್ಥ್ಯ ಇರುವ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಕೋವಿಡ್’ನಿಂದಾಗಿ 250 ಜನ ಮಾತ್ರ ಪಾಲ್ಗೊಳ್ಳಲು ಸೂಚಿಸಲಾಗಿತ್ತು. ಆದರೆ, ಅವಕಾಶ ನೀಡಿದ್ದಕ್ಕಿಂತಲೂ ಹೆಚ್ಚು ಕಲಾಸಕ್ತರು ಆಗಮಿಸಿದ್ದರಿಂದ ಎಲ್ಲ ಆಸನಗಳು ಭರ್ತಿಯಾಗಿದ್ದವು.
ಕೋವಿಡ್ ಪೂರ್ವದಲ್ಲಿ ಇದೇ ಜಾಗದಲ್ಲಿ ಹಲವು ನಾಟಕ, ನೃತ್ಯ ಸೇರಿದಂತೆ ಹಲವು ಪ್ರಕಾರಗಳ ಪ್ರದರ್ಶನ ಕಂಡಿವೆ. ಆದರೆ, ಹೆಚ್ಚು ಜನ ಆಗಮಿಸಿದ್ದು ಅಪರೂಪ. ಆದರೆ, ಕೋವಿಡ್ ನಂತರದ ಮೊದಲ ನಾಟಕಕ್ಕೆ ಭಾರಿ ಜನಸ್ಪಂದನೆ ಸಿಕ್ಕಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿದವರಿಗೆ ಮಾತ್ರ ಅವಕಾಶ ನೀಡಲಾಗಿತ್ತು.