ಸುದ್ದಿಕಣಜ.ಕಾಂ
ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಕಚೇರಿಯಲ್ಲಿ ಎಸ್.ಡಿ.ಸಿ ಆಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬ ನಕಲಿ ದಾಖಲೆ ನೀಡಿ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿದ್ದಾನೆ.
ಎಲೆಕ್ಟ್ರಾನಿಕ್ ಯಂತ್ರೋಪಕರಣಗಳನ್ನು ಮೋಸಮಾಡಿ ತೆಗೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸರು ಯುಟಿಪಿ ಕಾಲೊನಿ ನಿವಾಸಿ ನಾಗೇಶ್ (50) ಬಂಧಿತ ವ್ಯಕ್ತಿ. ಈತನಿಂದ 4.15 ಲಕ್ಷ ರೂ. ಮೌಲ್ಯದ 2 ಜೆರಾಕ್ಸ್ ಯಂತ್ರ, 5 ಪ್ರಿಂಟರ್, 2 ಯುಪಿಎಸ್ ಹಾಗೂ 6 ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.
ದುರ್ಗಿಗುಡಿಯ ಇಮ್ಯಾಜಿನ್ ಟೆಕ್ನಾಲಜೀಸ್ ಮತ್ತು ವೆಂಕಟೇಶ ನಗರದ ಹೈಟೆಕ್ ಸೆಲ್ಯೂಷನ್ ಎಂಬಲ್ಲಿ ನಾಗೇಶ್ ನಕಲಿ ದಾಖಲೆಗಳನ್ನು ನೀಡಿ, ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಿ ಮೋಸ ಮಾಡಿರುವ ಬಗ್ಗೆ ದೂರು ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈ.ಎಸ್.ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ಕೋಟೆ ಠಾಣೆಯ ಸಿಪಿಐ ಚಂದ್ರಶೇಖರ್ ನೇತೃತ್ವದಲ್ಲಿ ಜಯನಗರ ಠಾಣೆ ಪಿಎಸ್ಐ ರಾಹತ್ ಅಲಿ, ಸಿಬ್ಬಂದಿಯಾದ ಜ್ಯೋತಿ, ಸಿ.ಮಹೇಶ್, ಮೋಹನ್ ಕುಮಾರ್, ಚಂದನ್ ನಾಯ್ಕ್, ಪ್ರಕಾಶ್ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.