ಸುದ್ದಿ ಕಣಜ.ಕಾಂ
ಶಿವಮೊಗ್ಗ/ಬೆoಗಳೂರು: ಶಿರಾ, ಆರ್.ಆರ್.ನಗರ ಮತ್ತು ಬಿಹಾರದಲ್ಲಿ ಕಮಲ ಅರಳುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆಗೆ ಬಿಜೆಪಿ ಪಾಳಯದಲ್ಲಿ ಇನ್ನಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಒಂದೆಡೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು `ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರು ಎನ್ನುವುದನ್ನೇ ಮರೆತಿದ್ದಾರೆ. ಸಾಮಾನ್ಯ ಜನರು ಸಹ ಈ ರೀತಿಯ ಸುಳ್ಳುಗಳನ್ನು ಹೇಳುವುದಿಲ್ಲ. ಅವರು ತಾನು ಸುಳ್ಳು ಹೇಳಿದ್ದೇನೆ ಎಂದು ಒಪ್ಪಿಕೊಂಡು ರಾಜ್ಯದ ಜನರ ಮುಂದೆ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಗುಡುಗಿರುವ ಸಚಿವ ಆರ್.ಅಶೋಕ್, `ಚುನಾವಣೆ ಫಲಿತಾಂಶದಿAದ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಸಂಚಕಾರ ಬರಲಿದೆ’ ಎಂದು ಕಿಚಾಯಿಸಿದ್ದಾರೆ.
ಉಪ ಚುನಾವಣೆಯ ಫಲಿತಾಂಶ ಬಿ.ಎಸ್.ಯಡಿಯೂರಪ್ಪ ಅವರ ಸ್ಥಾನಕ್ಕೆ ಕಸುವು ತುಂಬಿದೆ. ಹೀಗಾಗಿ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಏನು: `ಬಿಹಾರ ಚುನಾವಣೆಯ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ’ ಎಂದು ಹೇಳಿದ್ದರು.