ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ನೌಕರರ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರ ಭಾನುವಾರ ಮುಖಂಡರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿಲ್ಲ. ಹೀಗಾಗಿ, ಸೋಮವಾರ ಬೆಳಗ್ಗೆಯಿಂದಲೇ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.
ಸಂಚರಿಸಿದ ಏಳು ಬಸ್: ಭಾನುವಾರ ಬೆಳಗ್ಗೆಯಿಂದಲೇ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಅಲೆದಾಡಿದರು. ಈ ಕಾರಣದಿಂದಾಗಿಯೇ ಸಾರಿಗೆ ಇಲಾಖೆ ಅಧಿಕಾರಿಗಳು ಕರ್ತವ್ಯಕ್ಕೆ ಆಗಮಿಸಿದ್ದ ಕೆಲವೇ ನೌಕರರ ಮೂಲಕ ಪ್ರಯಾಣಿಕರಿಗೆ ಸೇವೆ ನೀಡಿದರು.
ಮತ್ತೆ ಮುಂದುವರಿಯಲಿದೆ ಸಾರಿಗೆ ನೌಕರರ ಮುಷ್ಕರ, ನಾಳೆಯೂ ಬಸ್ ಸಿಗುವುದು ಡೌಟ್
ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೆ ಒಟ್ಟು ಏಳು ಬಸ್ ವಿವಿಧೆಡೆ ಸಂಚರಿಸಿವೆ. ಶಿವಮೊಗ್ಗದಿಂದ ಭದ್ರಾವತಿಗೆ ಐದು ಬಸ್ ಸಂಚರಿಸಿದವು. ಇದಕ್ಕೆ ಬೆಂಗಾವಲು ವಾಹನ ಕೂಡ ನೀಡಲಾಗಿತ್ತು. ಇತ್ತೀಚೆಗೆ ಮಾಚೇನಹಳ್ಳಿ ಸಮೀಪದ ಅಹಿತಕರ ಘಟನೆ ನಡೆದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿತ್ತು. ಅದೇ ರೀತಿ, ಶಿವಮೊಗ್ಗದಿಂದ ಬೆಂಗಳೂರು ಹಾಗೂ ಹೊನ್ನಾಳಿ, ಹರಿಹರಕ್ಕೆ ತಲಾ ಒಂದು ಬಸ್ ಸಂಚರಿಸಿದವು.
ಸಾರಿಗೆ ನೌಕರರಿಗೆ ಇನ್ನೂ ಸಿಗದ ನವೆಂಬರ್ ವೇತನ
ಖಾಸಗಿ ಬಸ್ ಗಳಿಗೆ ಹಬ್ಬ: ಸಾರಿಗೆ ಸಂಸ್ಥೆಯ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ಬೆಂಗಳೂರು ಸೇರಿದಂತೆ ನಾನಾ ಕಡೆ ಪ್ರಯಾಣಿಸುವವರಿಗೆ ಬಸ್ ಸಿಕ್ಕಿರಲಿಲ್ಲ. ಇದರಿಂದಾಗಿ ಖಾಸಗಿ ಬಸ್ ಗಳನ್ನು ವಿವಿಧೆಡೆ ಓಡಿಸಲಾಯಿತು.
ಮಾಧ್ಯಮಗಳ ವರದಿ ನೋಡಿ ಡಿಪೋದಿಂದ ನಿಲ್ದಾಣಕ್ಕೆ ಬಂದ ಬಸ್: ಸರ್ಕಾರದೊಂದಿಗೆ ನಡೆದ ಸಭೆ ಫಲಪ್ರದವಾಗಿದೆ ಎಂಬ ಅಂಶ ಮಾಧ್ಯಮಗಳಲ್ಲಿ ಬಿತ್ತರವಾಗುತ್ತದ್ದಂತೆಯೇ ಮುಷ್ಕರದ ಮೇಲಿದ್ದ ನೌಕರರು ಕರ್ತವ್ಯ ನಿರ್ವಹಿಸುವುದಕ್ಕೆ ಒಪ್ಪಿ ಮುಂದೆ ಬಂದಿದ್ದರು. ಶಿವಮೊಗ್ಗ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೇ ಅತೀ ಕಡಿಮೆ ಸಂಖ್ಯೆಯಲ್ಲಿ ಬಸ್ ಸಂಚಾರವಿತ್ತು. ಆದರೆ, ಏಕಾಏಕಿ 20 ವಾಹನಗಳು ನಿಲ್ದಾಣಕ್ಕೆ ಆಗಮಿಸಿದ್ದವು. ಇದಾದ ಕೆಲವೇ ಹೊತ್ತಲ್ಲಿ ಸಭೆ ವಿಫಲವಾಗಿದ್ದು ತಿಳಿದಿದ್ದೇ ಎಲ್ಲರೂ ಕರ್ತವ್ಯ ಸಲ್ಲಿಸಲು ಹಿಂದೇಟು ಹಾಕಿದರು. ಇದರಿಂದ ಪರಿಸ್ಥಿತಿ ಯಥಾಸ್ಥಿತಿಗೆ ಮರಳಿತು.