ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಧಿ ನಗರ ಪಕ್ಕದಲ್ಲಿರುವ ಪಾಲಿಕೆಯ ಕಟ್ಟಡ ಸುಭದ್ರವಾಗಿಲ್ಲ. ಹೀಗಾಗಿ, ವ್ಯಾಪಾರಿಗಳು ಅಂಗಡಿ ಖಾಲಿ ಮಾಡುವಂತೆ ಮಹಾನಗರ ಪಾಲಿಕೆ ಸೂಚನೆ ನೀಡಿದೆ.
ಇದು ಹಳೆಯ ವಾಣಿಜ್ಯ ಕಟ್ಟಡವಾಗಿದ್ದು, ಚಾವಣಿ ಸೋರುತ್ತಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಈ ಸಂರ್ಕೀಣದಲ್ಲಿ ವ್ಯಾಪಾರ ಮಾಡುವುದು ಸೂಕ್ತವಲ್ಲ ಎಂಬ ಉದ್ದೇಶದಿಂದ ಏಳು ದಿನಗಳಲ್ಲಿ ತೆರವುಗೊಳ್ಳಲು ತಿಳಿಸಲಾಗಿದೆ. ಪಾಲಿಕೆ ಮತ್ತು ಪಿಡಬ್ಲ್ಯುಡಿ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿದ್ದು, ಕಟ್ಟಡ ಸುಭದ್ರವಾಗಿಲ್ಲ ಎಂಬ ಬಗ್ಗೆ ವರದಿ ನೀಡಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಖಾಲಿ ಮಾಡಲು ಡಿಸೆಂಬರ್ 18ರಂದು ನಿರ್ದೇಶನ ನೀಡಲಾಗಿದೆ. ಇದಾದ ಬಳಿಕ ಡಿಸೆಂಬರ್ 23ರಂದು ಕಚೇರಿಗೆ ಕಾಲಾವಕಾಶ ಕೋರಿ ಪತ್ರ ಬರೆಯಲಾಗಿದೆ. ಆದರೆ, ಕಟ್ಟಡದ ಸ್ಥಿತಿ ಮನಗಂಡು ಕಾಲಾಶವಕಾಶ ನೀಡಲಾಗದು ಎಂದು ತಿಳಿಸಲಾಗಿದೆ.
ವ್ಯಾಪಾರಿಗಳಿಗೆ ಏಕಾಏಕಿ ತೆರವುಗೊಳ್ಳುವಂತೆ ಸೂಚನೆ ನೀಡಿದ್ದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸ ವ್ಯಾಪಾರ ಮಳಿಗೆ ಹುಡುಕುವುದಕ್ಕಾದರೂ ಸಮಯ ಬೇಕು ಎಂದು ವ್ಯಾಪಾರಸ್ಥರು ಅಲವತ್ತುಕೊಂಡಿದ್ದಾರೆ.