ಸುದ್ದಿ ಕಣಜ.ಕಾಂ
ಶಿವಮೊಗ್ಗ: ಬಸವೇಶ್ವರರ ಪುತ್ಥಳಿಯನ್ನು ನಗರದ ಗಾಂಧಿ ಪಾರ್ಕ್ ಎದುರು ಸ್ಥಾಪಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಅವರು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಲಂಡನ್ ಲ್ಯಾಂಬೆತ್ ನ ಮಾಜಿ ಮೇಯರ್ ಹಾಗೂ ಅನಿವಾಸಿ ಭಾರತೀಯರಾದ ನೀರಜ್ ಪಾಟೀಲ್ ಅವರು ಎರಡು ವರ್ಷಗಳ ಹಿಂದೆ ಶಿವಮೊಗ್ಗಕ್ಕೆ ನೀಡಿದ್ದ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಆರೋಪಿಸಿದ್ದಾರೆ.
ಗಾಂಧಿ ಪಾರ್ಕ್ ಮುಂದೆ ಪ್ರತಿಷ್ಠಾಪಿಸಲು ಕೊಡುಗೆಯಾಗಿ ನೀಡಿದ್ದ ಪುತ್ಥಳಿ ಪಾಲಿಕೆಗೆ ಎರಡು ವರ್ಷಗಳ ಹಿಂದೆ ಹಸ್ತಾಂತರಿಸಲಾಗಿದೆ. ಆದರೆ, ಇದುವರೆಗೆ ಅದಕ್ಕೆ ಕಾಲ ಕೂಡಿ ಬಂದಿಲ್ಲ. ಈ ಬಗ್ಗೆ ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಉಸ್ತುವರಿ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪುತ್ಥಳಿ ಪ್ರತಿಷ್ಠಾಪನೆಗೆಂದೇ 25 ಲಕ್ಷ ರೂ. ಮೀಸಲು ಇಡಲಾಗಿದೆ. ಇದುವರೆಗೆ ಸ್ಥಾಪನೆಗೆ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದ್ದಾರೆ.