ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ ಎಂಟು ತಿಂಗಳಿಂದ ಕಾಡುತ್ತಿರುವ ಮಹಾಮಾರಿ ಕೋವಿಡ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವು ಶೀಘ್ರದಲ್ಲಿ ಔಷಧವನ್ನು ರವಾನಿಸುವ ಸಂಭವವಿದೆ. ಮೊದಲ ಹಂತವಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು 20,549 ಜನರಿಗೆ ಈ ಲಸಿಕೆಯನ್ನು ವಿತರಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಡಿ.ಎಚ್.ಒ ರಾಜೇಶ್ ಸುರಗೀಹಳ್ಳಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಈ ಔಷಧ ಸಾಮರ್ಥ್ಯಕ್ಕೆ ತಕ್ಕಂತೆ ವ್ಯವಸ್ಥಿತ ದಾಸ್ತಾನು ಮಾಡಲು ಶೀತಲೀಕರಣ ಘಟಕಗಳನ್ನು ಕಾಯ್ದಿರಿಸಬೇಕಾದ ಅಗತ್ಯವಿದೆ. 114 ಕಡೆಗಳಲ್ಲಿ 140 ಲೀ. ಸಾಮರ್ಥ್ಯದ ಸರ್ಕಾರಿ ಘಟಕಗಳು, 11 ಕಡೆಗಳಲ್ಲಿ 300 ಲೀ. ಸಾಮರ್ಥ್ಯದ, 18 ಕಡೆಗಳಲ್ಲಿ 140 ಲೀ. ಸಾಮರ್ಥ್ಯ ಹೊಂದಿರುವ ಪಶುಪಾಲನಾ ಇಲಾಖೆಯ ಘಟಕಗಳು ಹಾಗೂ 4 ಕಡೆಗಳಲ್ಲಿ 60,000 ಲೀ. ಭಾರೀ ಸಾಮರ್ಥ್ಯದ ವಾಕ್ ಇನ್ ಕೂಲರ್ಗಳು ಲಭ್ಯ ಇವೆ ಎಂದು ಮಾಹಿತಿ ನೀಡಿದರು.
ಎರಡನೇ ಅಲೆಯ ಬಗ್ಗೆ ಇರಲಿ ಎಚ್ಚರ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಆದರೂ ಮುಂದಿನ ದಿನಗಳಲಿ ಎರಡನೇ ಅಲೆ ಬರುವ ಸಂಭವವಿರುವ ಬಗ್ಗೆ ಜಿಲ್ಲೆಯ ಸಾರ್ವಜನಿಕರು ಎಚ್ಚರದಿಂದ ಇರಬೇಕಾದ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಯೋಜನಾ ನಿರ್ದೇಶಕ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಆರ್.ಸಿ.ಎಚ್. ಅಧಿಕಾರಿ ಡಾ. ನಾಗರಾಜ್ ನಾಯ್ಕ್ ಸೇರಿದಂತೆ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.