ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣೆಯಲ್ಲಿನ ಕರ್ಫ್ಯೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಡಳಿತ ಗುರುವಾರದಿಂದ ಕರ್ಫ್ಯೂ ಮುಂದುವರಿಸಲಾಗುತ್ತಿದೆ. ಆದರೆ, ವಹಿವಾಟಿಗೆ ಹೆಚ್ಚಿನ ಕಾಲಾವಧಿ ನೀಡಲಾಗಿದೆ.
ಡಿಸೆಂಬರ್ 10ರಿಂದ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕರ್ಫ್ಯೂ ಪ್ರದೇಶದಲ್ಲಿ ವ್ಯಾಪಾರಕ್ಕೆ ಕಾಲಾವಕಾಶ ನೀಡಲು ಜಿಲ್ಲಾಡಳಿತ ತೀರ್ಮಾನ ಮಾಡಿರುವುದಾಗಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಶಾಂತಿ ಸಭೆಯಲ್ಲಿ 144 ಬಗ್ಗೆ ಜಿಲ್ಲಾಧಿಕಾರಿ, ಎಸ್.ಪಿ. ಹೇಳಿದ್ದೇನು, ಜನರದ್ದೇನು ಆರೋಪ?
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 28 ವಿವಿಧ ವ್ಯಾಪಾರಸ್ಥರ ಸಂಘಟನೆಗಳು 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬದಲು ಸಂಜೆ ಆರರವರೆಗೆ ಕಾಲಾವಧಿ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದರು.
ನಾಳೆ ಬೆಳಗ್ಗೆ 7 ಗಂಟೆಗೆ ನಿರ್ಣಯವಾಗಲಿದೆ ವಹಿವಾಟಿನ ಕಾಲಾವಧಿ: ಭದ್ರತೆ ದೃಷ್ಟಿಯಿಂದ ರಾತ್ರಿ ಕರ್ಫ್ಯೂ ಮುಂದುವರಿಸಬಹುದು. ನೀಡಿರುವ ಅಲ್ಪ ಅವಧಿಯಲ್ಲಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಮಧ್ಯೆ ಪೊಲೀಸರು ಬಂದು ಬಂದ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ, ವಹಿವಾಟಿಗೆ ಅನುಮತಿ ಮಾಡಿಕೊಡಬೇಕೆಂದು ಆಗ್ರಹಿಸಿದರು. ಇದಕ್ಕೆ, ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಗಳು, ಇದರ ಬಗ್ಗೆ ಡಿಐಜಿ ಅವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ನಿರ್ಧಾರವನ್ನು ಗುರುವಾರ ಬೆಳಗ್ಗೆ 7 ಗಂಟೆಗೆ ಪ್ರಕಟಿಸಲಾಗುವುದು. ಅಲ್ಲಿಯವರೆಗೆ ಸಹಕಾರ ನೀಡುವಂತೆ ಕೋರಿದರು.
ಕಸದ ಬುಟ್ಟಿ ಸೇರಿದ ಹಸಿ ಒಣ ಕಸ ವಿಲೇ ಆದೇಶ, ಪಾಲಿಕೆ ಎಡವಿದ್ದೆಲ್ಲಿ? ಮಾಡಬೇಕಿರುವುದೇನು?
ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಆರ್. ವಾಸುದೇವ್, ಬಿ.ಗೋಪಿನಾಥ್, ಅಶ್ವಥ್ ನಾರಾಯಣ ಶೆಟ್ಟಿ, ಎಸ್.ಎಸ್. ಉದಯ್ ಕುಮಾರ್, ಡಾ. ಭರತ್, ಶಂಕರಪ್ಪ, ವಸಂತ್ ಕುಮಾರ್ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ವ್ಯಾಪಾರಸ್ಥರು ಕೊರೊನಾ ಸಂದರ್ಭದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅದರ ಮಧ್ಯೆ ಕರ್ಫ್ಯೂದಿಂದಾಗಿ ಆರ್ಥಿಕ ಹೊರ ಹೆಚ್ಚಾಗಿದೆ. ಏಳು ದಿನಗಳಿಂದ ವ್ಯಾಪಾರ ಮಾಡಲಾಗುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ವಹಿವಾಟಿಗೆ ಕಾಲಾವಕಾಶ ಮಾಡಿಕೊಡಿ.
– ನೊಂದ ವ್ಯಾಪಾರಸ್ಥರು, ಶಿವಮೊಗ್ಗನಿಷೇಧಾಜ್ಞೆ ಅನ್ವಯ ಎಲ್ಲರೂ ನಿಯಮಗಳನ್ನು ಪಾಲಿಸಲೇಬೇಕು. ನಗರ ಸಹಜ ಸ್ಥಿತಿಗೆ ಬರುವವರೆಗೆ ಎಲ್ಲರೂ ಸಹಕಾರ ನೀಡಿ. ಪೊಲೀಸ್ ಇಲಾಖೆ ಕೂಡ ಅವಿರತ ಶ್ರಮ ಪಡುತ್ತಿದೆ.
– ಕೆ.ಬಿ.ಶಿವಕುಮಾರ್, ಡಿಸಿ, ಶಿವಮೊಗ್ಗನಗರದಲ್ಲಿ ಸಂಭವಿಸಿದ ಅಶಾಂತಿಯಿಂದಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ವ್ಯಾಪಾರಸ್ಥರಿಗೆ ತೊಂದರೆ ನೀಡುವ ಉದ್ದೇಶ ನಮ್ಮದಿಲ್ಲ. ಹೀಗಾಗಿ, ಎಲ್ಲರೂ ಸಹಕಾರ ನೀಡಿ. ಪ್ರತಿಯೊಬ್ಬ ವ್ಯಾಪಾರಸ್ಥ ತಮ್ಮ ಅಂಗಡಿಯ ಮುಂದೆ ರಸ್ತೆಗೆ ಅಭಿಮುಖವಾಗಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ.
– ಕೆ.ಎಂ.ಶಾಂತರಾಜು, ಎಸ್.ಪಿ, ಶಿವಮೊಗ್ಗ