ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇಂದಿರಾಗಾಂಧಿ, ಸೋನಿಯಾ ಗಾಂಧಿ ಅವರನ್ನೇ ನೋಡಿದ್ದರಿಂದ ಸಿದ್ದರಾಮಯ್ಯ ಅವರು ಅದನ್ನೇ ಕಾಂಗ್ರೆಸ್ ಅಂದುಕೊಂಡಿದ್ದಾರೆ. ಹೀಗಾಗಿಯೇ ಕ್ರಾಸ್ ಬ್ರೀಡ್ ಎನ್ನುವಂತಹ ಕೆಟ್ಟ ಪದ ಬಳಕೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ತಿಳಿದುಕೊಂಡಂತೆ ಕಾಂಗ್ರೆಸ್ ಅದಲ್ಲ. ಸ್ವಾತಂತ್ರ್ಯ ಪೂರ್ವಕ್ಕಾಗಿ ಹೋರಾಟ ಮಾಡಿದ್ದು ಕಾಂಗ್ರೆಸ್. ಅಂತಹ ಪಕ್ಷಕ್ಕೆ ಇಂತಹವರು ಬಂದು ನಾಯಕತ್ವ ವಹಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ನನಗೆ ನೋವಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ತರಲು ಇನ್ನೂ ಚಿಂತನೆ ನಡೆಯುತ್ತಿದೆ. ಅದು ಚರ್ಚೆಯ ಹಂತದಲ್ಲಿದೆ. ಈ ವಿಚಾರವನ್ನು ಇದುವರೆಗೆ ಕ್ಯಾಬಿನೆಟ್ ಗೆ ತಂದಿಲ್ಲ. ಅಷ್ಟಕ್ಕೆ ಸಿದ್ದರಾಮಯ್ಯ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ವಾಸ್ತವದಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಇರುವುದಕ್ಕೇ ಅಯೋಗ್ಯರು ಎಂದು ಟೀಕಿಸಿದರು.
ಕ್ರಾಸ್ ಬ್ರೀಡ್ ಎನ್ನುವ ಪದ ಪ್ರಾಣಿಗಳಿಗೆ ಬಳಕೆ ಮಾಡಲಾಗುತ್ತದೆ. ಲವ್ ಜಿಹಾದ್ ವಿಚಾರದಲ್ಲಿ ಈ ರೀತಿಯ ಪದ ಬಳಕೆ ಮಾಡುವ ಮೂಲಕ ರಾಜ್ಯದ ಹೆಣ್ಣುಮಕ್ಕಳಿಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ. ಹೀಗಾಗಿ, ಕೂಡಲೇ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಇದರ ಪ್ರತಿಫಲವನ್ನೂ ಅವರೇ ಅನುಭವಿಸುತ್ತಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ಸುದ್ದಿಗಾಗಿ ಕ್ಲಿಕ್ ಮಾಡಿ