ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗಾಂಧಿ ಬಜಾರ್ ಅಕ್ಕಪಕ್ಕ ಗುರುವಾರ ನಡೆದ ಗಲಭೆಯಿಂದಾಗಿ ನಗರ ಸಂಪೂರ್ಣ ಸ್ತಬ್ಧವಾಗಿದೆ. ಹಳೇ ಶಿವಮೊಗ್ಗ ಅಷ್ಟೇ ಅಲ್ಲದೇ ಬೇರೆಯ ಬಡಾವಣೆಗಳಲ್ಲೂ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ, ಜನಸಂಚಾರ ವಿರಳವಾಗಿದೆ.
ಗಾಂಧಿ ಬಜಾರ್, ಅಮೀರ್ ಅಹ್ಮದ್ ವೃತ್ತ, ಬಿ.ಎಚ್.ರಸ್ತೆ, ಒಟಿ ರಸ್ತೆ, ನೆಹರೂ ರಸ್ತೆಗಳಲ್ಲಿ ಬ್ಯಾರಿಕ್ಯಾಡ್ ಹಾಕಿ ಮಾರ್ಗಗಳನ್ನೇ ಬಂದ್ ಮಾಡಲಾಗಿದೆ. ಕೇಂದ್ರ ಬಸ್ ನಿಲ್ದಾಣದಿಂದ ಬರುವ ವಾಹನಗಳನ್ನು ಮಾತ್ರ ಬಿ.ಎಚ್.ರಸ್ತೆಯಲ್ಲಿ ಸಂಚರಿಸಲು ಅವಕಾಶ ನೀಡಲಾಗುತ್ತಿದೆ. ಇನ್ನುಳಿದಂತೆ, ಗಾಂಧಿ ಬಜಾರ್ ಒಳಗೆ ಪ್ರವೇಶಿಸುವುದನ್ನೇ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಂದಿನಿ ಪಾರ್ಲರ್, ಮೆಡಿಕಲ್, ಆಸ್ಪತ್ರೆಗಳು ಎಂದಿನಂತೆ ತೆರೆದಿವೆ. ಆದರೆ, ತರಕಾರಿ ಮಾರಾಟ ಮಾಡುವ ಅಂಗಡಿಗಳು ಬಹುತೇಕ ಬಂದ್ ಇವೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ವಸ್ತುಗಳ ಮಾರಾಟದ ಮೇಲೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೂ ಅಂಗಡಿ ಮಾಲಿಕರೇ ಸ್ವಯಂ ಪ್ರೇರಣೆಯಿಂದಲೇ ಅಂಗಡಿಗಳನ್ನು ಬೆಳಗ್ಗೆಯಿಂದ ತೆರೆದಿಲ್ಲ.
ಪೆಟ್ರೋಲ್ ಬಂಕ್ ಬಂದ್: ನಗರದಲ್ಲಿರುವ ಬಹುತೇಕ ಎಲ್ಲ ಪೆಟ್ರೋಲ್ ಬಂಕ್ ಗಳು ಬಂದ್ ಇವೆ. ಹೀಗಾಗಿ, ಹಲವು ವಾಹನ ಸವಾರರು ಪೆಟ್ರೋಲ್ ಹಾಕಿಸಿಕೊಳ್ಳುವುದಕ್ಕಾಗಿ ಬಂದ್ ವಾಪಸ್ ಹೋದ ಘಟನೆಗಳು ನಗರದಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿವೆ.
ಬಿಕೋ ಎನ್ನುತ್ತಿರುವ ರೋಡ್: ಜೈಲು ರಸ್ತೆ, ನೆಹರೂ ರಸ್ತೆ, ಕುವೆಂಪು ರಸ್ತೆ, ಒ.ಟಿ ಮತ್ತು ಎನ್.ಟಿ.ರಸ್ತೆ, ಸಾಗರ ರಸ್ತೆ, ಬಿ.ಎಚ್. ರಸ್ತೆಗಳು ಸದಾ ಜನಸಂಚಾರದಿಂದ ಕೂಡಿರುತ್ತಿದ್ದವು. ಆದರೆ, ನಿನ್ನೆಯ ಘಟನೆಯಿಂದಾಗಿ ಜನ ಭೀತಿಯಲ್ಲಿದ್ದು ತಾವಾಗೇ ಹೊರಗಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ರಸ್ತೆಗಳು ಬಿಕೋ ಎನ್ನುತ್ತಿವೆ.
ಗಲಭೆ ಕುರಿತ ಸಮಗ್ರ ಸುದ್ದಿಗಾಗಿ ಕ್ಲಿಕ್ ಮಾಡಿ