ಸುದ್ದಿ ಕಣಜ.ಕಾಂ ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್ನ ಕೆಲವೆಡೆ ತ್ಯಾಜ್ಯ ವಿಲೇವಾರಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ದೀಪಾವಳಿ ಬಳಿಕ ಕಸ ವಿಂಗಡಣೆ ಕಡ್ಡಾಯವೆಂದು ಪಾಲಿಕೆ ತಿಳಿಸಿತ್ತು. ಆದರೆ, ಪ್ರಾಯೋಗಿಕವಾಗಿ ಆಚರಣೆಗೆ ಬಂದಿರಲಿಲ್ಲ. ಎಲ್ಲ ವಾರ್ಡ್ಗಳಲ್ಲಿ ಮನಸೋ ಇಚ್ಛೆ ಕಸ ಸಂಗ್ರಹಿಸಲಾಗುತ್ತಿತ್ತು. ಶಿಸ್ತನ್ನು ರೂಢಿಸಿಕೊಂಡಿರಲಿಲ್ಲ.
ಡಿಸೆಂಬರ್ 8ರಂದು ಕಸದ ಬುಟ್ಟಿ ಸೇರಿದ ಹಸಿ ಒಣ ಕಸ ವಿಲೇ ಆದೇಶ, ಪಾಲಿಕೆ ಎಡವಿದ್ದೆಲ್ಲಿ, ಮಾಡಬೇಕಿರುವುದೇನು? ಶೀರ್ಷಿಕೆ ಅಡಿ ಸುದ್ದಿ ಕಣಜ.ಕಾಂ ವರದಿ ಪ್ರಕಟಿಸಿತ್ತು. ಇದಾದ ಬಳಿಕ ಕಳೆದ ಒಂದು ವಾರದಿಂದ ಎಲ್ಲ ಬಡಾವಣೆಗಳಲ್ಲಿ ಪಾಲಿಕೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಹೆಲ್ತ್ ಇನ್ಸ್ಪೆಕ್ಟರ್ಗೆ ಟಾರ್ಗೆಟ್: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ಬಡಾವಣೆಗಳಲ್ಲಿರುವ ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ ಪಾಲಿಕೆಯಿಂದ ಟಾರ್ಗೆಟ್ ನೀಡಲಾಗಿದೆ. ಯಾವ ಪ್ರದೇಶಗಳಲ್ಲಿ ಕಸ ವಿಂಗಡಣೆ ಆಗುತ್ತಿಲ್ಲವೋ ಅಂತಹ ಕಡೆ ಕನಿಷ್ಠ ಇನ್ನೂರು ಮನೆಯನ್ನಾದರೂ ಒಂದು ವಾರದಲ್ಲಿ ಅವರು ತ್ಯಾಜ್ಯ ವಿಂಗಡಣೆ ಮಾಡಿಸಬೇಕು. ಪ್ರತ್ಯೇಕ ಬಕೆಟ್ನಲ್ಲಿ ಕಸ ಸಂಗ್ರಹಿಸಬೇಕು. ಈ ಟಾರ್ಗೆಟ್ ಪ್ರತಿ ವಾರ ದುಪ್ಪಟ್ಟು ಮಾಡಲಾಗುತ್ತಿದೆ. ಒಂದುವೇಳೆ, ಇದನ್ನು ಪಾಲಿಸದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.