ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರುವಂತೆ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ಪುನರ್ ಪರಿಶೀಲಿಸಿ ಗಳಿಕೆ ರಜೆ ನಗದೀಕರಣ ಅವಕಾಶವನ್ನು ಕಲ್ಪಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಅಡಿಕೆಯಲ್ಲಿ ಹಿಂಗಾರ ತಿನ್ನುವ ಹುಳು, ಲಕ್ಷಣಗಳೇನು, ಪರಿಹಾರಗಳೇನು?
ಈ ಸಂಬಂಧ ಷಡಕ್ಷರಿ ಅವರು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದರ ಜೊತೆಗೆ 2 ಕಂತುಗಳ ತುಟ್ಟಿಭತ್ಯೆ ಹಾಗೂ 2020ನೇ ಸಾಲಿನ ಗಳಿಕೆ ರಜೆ ನಗದೀಕರಣ ಬಾಬ್ತನ್ನು ಸಹ ಬಿಟ್ಟು ಕೊಟ್ಟಿರುತ್ತಾರೆ.
ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಮಿಕ ರೋಗ ನಿಯಂತ್ರಣಕ್ಕೆ ಬರುತ್ತಿದ್ದು, ಸರ್ಕಾರವು ಸಹ ಆರ್ಥಿಕವಾಗಿ ಸದೃಢತೆ ಕಡೆಗೆ ಸಾಗುತ್ತಿದೆ. ಹೀಗಿರುವಾಗ, ರಾಜ್ಯ ಸರ್ಕಾರಿ ನೌಕರರ 2021ನೇ ಸಾಲಿನ ಅವಧಿಯ ಗಳಿಕೆ ರಜೆಯನ್ನು ಅಧ್ಯರ್ಪಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಪಡಿಸಿರುವುದು ರಾಜ್ಯ ಸರ್ಕಾರಿ ನೌಕರರಲ್ಲಿ ತೀವ್ರ ಅಸಮಾಧಾನವನ್ನು ಮೂಡಿಸಿರುತ್ತದೆ ಎಂದು ಷಡಕ್ಷರಿ ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಿ: ಸಿ.ಎಸ್.ಷಡಕ್ಷರಿ
ಪ್ರಸ್ತುತ ರಾಜ್ಯದಲ್ಲಿ ಖಾಲಿಯಿರುವ 2.25 ಲಕ್ಷ ಹುದ್ದೆಗಳ ಕಾರ್ಯಭಾರದ ಒತ್ತಡವನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಂಕಷ್ಟದಲ್ಲಿ ಸಿ, ಡಿ ದರ್ಜೆ ನೌಕರರು: ವಾಸ್ತವವಾಗಿ ರಾಜ್ಯ ಸರ್ಕಾರಿ ನೌಕರರು ಅದರಲ್ಲೂ ‘ಸಿ’ ಮತ್ತು ‘ಡಿ’ ದರ್ಜೆ ನೌಕರರು ತಮ್ಮ ಮಕ್ಕಳ ರಜೆ ನಗದೀಕರಣವನ್ನೇ ವಿದ್ಯಾಭ್ಯಾಸದ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಲಂಬಿಸಿದ್ದಾರೆ. ಜತೆಗೆ, ಕೋವಿಡ್-19 ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವಾಗ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ರದ್ದುಪಡಿಸಿರುವುದು ರಾಜ್ಯ ಸರ್ಕಾರಿ ನೌಕರರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಪಡಿಸಿದಂತಾಗಿರುತ್ತದೆ ಎಂದು ತಿಳಿಸಿದ್ದಾರೆ.