ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ವಯ ರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಪೂರ್ಣ ಸಹಕಾರ ನೀಡಲಾಗುತ್ತಿದೆ. ಜತೆಗೆ, ಜನವರಿ 15ರಿಂದ ನಿಧಿ ಸಂಗ್ರಹಿಸುವ ಕಾರ್ಯ ಆರಂಭವಾಗಲಿದೆ ಎಂದು ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಿತಿ ಪ್ರಮುಖ ಪಟ್ಟಾಭಿರಾಮ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ 4 ಲಕ್ಷ ಹಳ್ಳಿ, 11 ಕೋಟಿ ಕುಟುಂಬಗಳನ್ನು ನಿಧಿ ಸಂಗ್ರಹಕ್ಕಾಗಿ ಅಭಿಯಾನದ ಮೂಲಕ ತಲುಪಲಾಗುವುದು. ಕರ್ನಾಟಕದಲ್ಲಿ 27,500 ಹಳ್ಳಿ, 90 ಲಕ್ಷಕ್ಕೂ ಅಧಿಕ ರಾಮಭಕ್ತರನ್ನು ಸಂಪರ್ಕಿಸು ಯೋಜನೆಯನ್ನು ವಿಹಿಂಪ ಹಾಕಿಕೊಂಡಿದೆ ಎಂದು ಹೇಳಿದರು.
ನಿಧಿ ಸಮರ್ಪಣೆಗೂ ಮುನ್ನ ಗಮನಿಸಿ
- ಮನೆಗೆ ಭೇಟಿ ನೀಡಿದ ಸದಸ್ಯರ ಕೈಯಲ್ಲೇ ಸಮರ್ಪಣಾ ನಿಧಿ ನೀಡಿ
- ಪಾವತಿಸಿದ ಮೊತ್ತಕ್ಕೆ ರಸೀದಿ, ಕೂಪನ್ ಪಡೆದುಕೊಳ್ಳಿ
- ಆನ್ ಲೈನ್ ಮೂಲಕ ಪಾವತಿಸುವವರು ಟ್ರಸ್ಟ್ ನ ಕೇಂದ್ರ ಘಟಕದ ಅಧಿಕೃತ ಖಾತೆ ಸಂಖ್ಯೆಗೆ ಪಾವತಿಸಬಹುದು
- ರಸೀದಿ, ಕೂಪನ್ ರಹಿತವಾಗಿ ಯಾರಾದರೂ ದುಡ್ಡು ಕೇಳಿದ್ದಲ್ಲಿ ಅಥವಾ ಆನ್ ಲೈನ್ ಮೂಲಕ ಪಾವತಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡಿದರೆ ತಾಲೂಕು ಅಥವಾ ಜಿಲ್ಲಾ ಮಟ್ಟದಲ್ಲಿರುವ ರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಕಾರ್ಯಾಲಯವನ್ನು ಸಂಪರ್ಕಿಸಿ ದೂರು ನೀಡಿ.
ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಸ್ಥರಲ್ಲಿ ಒಬ್ಬರಾಗಿದ್ದಾರೆ ಎಂದು ತಿಳಿಸಿದರು.
10 ರೂ., 100 ಮತ್ತು 1000 ರೂಪಾಯಿಯ ಮುದ್ರಿತ ಕೂಪನ್ ಸಹಾಯದಿಂದ ಧನ ಸಂಗ್ರಹ ನಡೆಯಲಿದೆ. ಇನ್ನೂ 2000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದ ಭಕ್ತರಿಗೆ ರಸೀದಿ ನೀಡಲಾಗುವುದು. ಈ ಭಕ್ತರು ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲಿದ್ದಾರೆ ಎಂದರು.
5 ಕಾರ್ಯಕರ್ತರನ್ನು ಒಳಗೊಂಡ ತಂಡ ಈ ನಿಧಿ ಸಮರ್ಪಣಾ ಅಭಿಯಾನದಲ್ಲಿರುತ್ತದೆ. ಸಂಗ್ರಹವಾದ ಹಣವನ್ನು 48 ಗಂಟೆಯೊಳಗೆ ತೀರ್ಥಕ್ಷೇತ್ರ ಟ್ರಸ್ಟ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಿದ್ದಾರೆ. ತಂಡದಲ್ಲಿ ಸಂಗ್ರಹವಾದ ಹಣವನ್ನು ಜಮಾ ಮಾಡುವ ಪ್ರತಿ ಕಾರ್ಯಕತರಿಗೆ ಹತ್ತಿರದ ಎಸ್ಬಿಐ ಬ್ಯಾಂಕಿನಲ್ಲಿ ನೋಂದಣಿ ಸಂಖ್ಯೆ ನೀಡಲಾಗಿರುತ್ತದೆ. ಒಟ್ಟಾರೆ ಹಣ ಸಂಗ್ರಹ, ಖಾತೆಗೆ ಪಾವತಿಸುವ ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿರಲಿದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ವಾಸುದೇವ್, ಆರ್.ಎಸ್.ಎಸ್.ಶಿವಮೊಗ್ಗ ವಿಭಾಗದ ಪ್ರಚಾರ ಪ್ರಮುಖ ಮಧುಕರ್ ಉಪಸ್ಥಿತರಿದ್ದರು.
ಕಾರ್ಯಕರ್ತರು, ಮಹಿಳೆಯರು, ಸಂತರು ಮತ್ತು ಸೆಲೆಬ್ರಿಟಿಗಳನ್ನೂ ಶ್ರೀ ರಾಮ ಮಂದಿ ನಿಧಿ ಸಮರ್ಪಣಾ ಅಭಿಯಾನದಲ್ಲಿ ಉಪಯೋಗಿಸಲಾಗುವುದು. ಸಾಮಾಜಿಕ ಜಾಲತಾಣದ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈಗಾಗಲೇ ಶಿವಮೊಗ್ಗದಲ್ಲಿ ಹಲವು ಸಾಧು, ಸಂತರು ಇದಕ್ಕೆ ಬೆಂಬಲ ನೀಡಿದ್ದಾರೆ.
– ಪಟ್ಟಾಭಿರಾಮ, ಪ್ರಮುಖರು, ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಸಮಿತಿ
ಬ್ಯಾಂಕ್ ಖಾತೆ ವಿವರ
ಖಾತೆ ಹೆಸರು | ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ
ಬ್ಯಾಂಕ್ ಹೆಸರು | ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಶಾಖೆ | ಅಯೋಧ್ಯೆ
ಸೇವಿಂಗ್ ಅಕೌಂಟ್ | 39161495808
ಕರೆಂಟ್ ಅಕೌಂಟ್ | 39161498809
ಐಎಫ್ಎಸ್ಸಿ ಕೋಡ್ | ಎಸ್.ಬಿ.ಐ.ಎನ್.0002510
ಪ್ಯಾನ್ ಸಂಖ್ಯೆ | ಎ.ಎ.ಝಡ್.ಟಿ.ಎಸ್.6197ಬಿ