ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯದ ಸರ್ಕಾರಿ ನೌಕರರು ಒಳ ಹೊರ ರೋಗಿಯಾಗಿ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲ ಆಗುವಂತೆ ಆರೋಗ್ಯಸಿರಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಪ್ರಕಟಿಸಿದರು.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯೋಜನೆ ಅಡಿ ಎಲ್ಲ ವಿಧದ ಔಷಧಿಗಳು, ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್, ಲ್ಯಾಬೊರೇಟರಿ ಪರೀಕ್ಷೆಗಳು, ವಾಹನ ಸೌಲಭ್ಯ ವ್ಯವಸ್ಥೆ ಉಚಿತವಾಗಿ ದೊರೆಯಲಿವೆ ಎಂದರು.
ಇದನ್ನೂ ಓದಿ । ಇದು ರಾಜ್ಯದಲ್ಲೇ ಮೊದಲು, ಕ್ರೀಡಾಕೂಟಕ್ಕೆ ಆನ್ಲೈನ್ ನೋಂದಣಿ
ಕ್ಯಾನ್ಸರ್ ಕಾಯಿಲೆ ಪೀಡಿತ ಸರ್ಕಾರಿ ನೌಕರರಿಗೆ ರೇಡಿಯೇಷನ್, ಕಿಮೋಥೆರಪಿ ಮಾಡಿಸಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಆದೇಶ ಶೀಘ್ರ ಹೊರಬೀಳಲಿದೆ ಎಂದರು.
ಸಿ.ಎಸ್.ಷಡಕ್ಷರಿ ಹೇಳಿದ್ದೇನು?
- ರಾಜ್ಯದ ಸರ್ಕಾರಿ ನೌಕರರು ಅಕೌಂಟ್ಸ್ ಹೈಯರ್, ಲೋಯರ್ ಹಾಗೂ ಜನರಲ್ ಲಾ ಭಾಗ 1 ಮತ್ತು 2 ಇಲಾಖಾ ಪರೀಕ್ಷೆ ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗುವಂತೆ ಆನ್ ಲೈನ್ ಮೂಲಕ ತರಗತಿಗಳನ್ನು ಆಯೋಜಿಸಲಾಗುತ್ತಿದ್ದು, ರಾಜ್ಯದ ಸರ್ಕಾರಿ ನೌಕರರು ಇದರ ಸದುಪಯೋಗ ಪಡಿಸಿಕೊಳ್ಳಲಿ.
- ಕೋವಿಡ್ ಹಿನ್ನೆಲೆ ತಡೆಹಿಡಿಯಲಾಗಿದ್ದ ಅನುಕಂಪ ಆಧಾರದ ನೇಮಕಾತಿ ಪ್ರಕ್ರಿಯೆಯನ್ನು ಸಂಘದ ಮನವಿಯಂತೆ ಸರ್ಕಾರವು ಪುನರಾರಂಭಿಸಿದೆ.
- ಸರ್ಕಾರವು ಸರ್ಕಾರಿ ನೌಕರರಿಗೆ ಮಾರಕವಾಗುವಂತಹ ಅಂಶಗಳನ್ನು ಸೇರ್ಪಡೆಗೊಳಿಸಲು ಕೆ.ಸಿ.ಎಸ್(ಸಿಸಿಎ) ನಿಯಮಾವಳಿಗೆ ತಿದ್ದುಪಡಿ ಮಾಡುವ ಸಲುವಾಗಿ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ.
- ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ಮಾರಕವಾಗಿರುವ ನಿಯಮಾವಳಿಗಳನ್ನು ಜಾರಿ ಮಾಡದಂತೆ ಸೂಕ್ತ ಆಕ್ಷೇಪಣೆ ಸಲ್ಲಿಸುವ ಮೂಲಕ ಸರ್ಕಾರವು ಉದ್ದೇಶಿಸಿರುವ ತಿದ್ದುಪಡಿ ನಿಯಮಗಳಿಗೆ ತಾತ್ಕಾಲಿಕ ತಡೆ ಹಾಕಲಾಗಿದೆ.
- ಎಚ್.ಆರ್.ಎಂ.ಎಸ್ ತಂತ್ರಾಶದ ಮೂಲಕ ವೇತನ ಮತ್ತು ಇನ್ನಿತರೆ ಸೇವಾ ಸವಲತ್ತುಗಳನ್ನು ಪಡೆಯುವಲ್ಲಿ ಸರ್ಕಾರಿ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಇ ಆಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚಿಸಿ, ನೌಕರರ ಸೇವಾ ವಿವರಗಳನ್ನು ತಿದ್ದುಪಡಿ ಮಾಡಲು, ಜಿಲ್ಲಾ ಮಟ್ಟದಲ್ಲಿ ಮಂಜೂರಾಗುವ ಎಲ್ಲ ಸೇವಾ ಸವಲತ್ತುಗಳನ್ನು ಆದೇಶ, ಮಾಹಿತಿಗಳನ್ನು ತಂತ್ರಾಶದಲ್ಲಿ ಇಂದೀಕರಿಸಲು ಹಾಗೂ ದೂರು ದಾಖಲಿಸಲು, ವೀಕ್ಷಿಸಲು ಆಯಾ ಡಿಡಿಒಗಳಿಗೆ ಅಧಿಕಾರ ನೀಡಲು ಸಾಫ್ಟ್ ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ಅತೀ ಶೀಘ್ರದಲ್ಲಿ ಆದೇಶ ಹೊರಬೀಳಲಿದೆ.
- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಸಭೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವರು ಒಪ್ಪಿಗೆ ಸೂಚಿಸಿದ್ದು, ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕಾಡುತ್ತಿರುವ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಲಿದೆ.
ಏಪ್ರಿಲ್ 21ರಂದು ರಾಜ್ಯ ಸರ್ಕಾರಿ ನೌಕರರ ದಿನಾಚರಣೆ | ಕೇಂದ್ರ ಸರ್ಕಾರದ ಮಾದರಿಯಲ್ಲಿ ಇಡೀ ದೇಶದಲ್ಲಿ ಪ್ರಪ್ರಥಮವಾಗಿ ರಾಜ್ಯದಲ್ಲಿ ಪ್ರತಿ ವರ್ಷ ಏಪ್ರಿಲ್ 21 ರಂದು `ರಾಜ್ಯ ಸರ್ಕಾರಿ ನೌಕರರ ದಿನಾಚರಣೆ’ಯನ್ನು ವಿವಿಧ ಕಾರ್ಯಕ್ರಮಗಳ ಮೂಲಕ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಚರಿಸುವುದು ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ನೌಕರರಿಗೆ ಈಗಾಗಲೇ ಪ್ರತಿ ವರ್ಷ ಜನವರಿ 26 ರ “ಗಣರಾಜ್ಯೋತ್ಸವ ದಿನ”ದಂದು ನೀಡುತ್ತಿರುವ ಸವೋತ್ತಮ ಸೇವಾ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರರ ದಿನದಂದು ನೀಡುವಂತೆ ಆದೇಶ ಸರ್ಕಾರವು ಆದೇಶ ಹೊರಡಿಸಿರುತ್ತದೆ ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ರಮೇಶ್, ಬೆಂಗಳೂರು ವಿಭಾಗೀಯ ಉಪಾಧ್ಯಕ್ಷ ಆರ್.ಮೋಹನ್ ಕುಮಾರ್, ಕಾರ್ಯದರ್ಶಿ ಐ.ಪಿ.ಶಾಂತರಾಜ್, ಉಪಾಧ್ಯಕ್ಷ ಪಾಪಣ್ಣ, ಆರ್.ಮಾರುತಿ, ದಿನೇಶ್, ಸತೀಶ್, ಸಿಂಗ್ ಉಪಸ್ಥಿತರಿದ್ದರು.