ಸುದ್ದಿ ಕಣಜ.ಕಾಂ
ಸಾಗರ: ದೇಸಿ ಸೊಗಡನ್ನು ಉಳಿಸಿಕೊಂಡು ಬಂದಿರುವ ಚರಕ ಸಂಸ್ಥೆ ಗ್ರಾಮೋದ್ಯೋಗಕ್ಕೆ ಜೀವ ತುಂಬುತ್ತ ಬಂದಿದೆ. ಕೋವಿಡ್ನಿಂದ ನಲುಗಿದ್ದ ಸಂಸ್ಥೆ ಈಗ ಮತ್ತೆ ಮೈಕೊಡವಿ ನಿಂತಿದೆ.
ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸಲಾಗುತ್ತಿದ್ದ ಚರಕ ಉತ್ಸವವನ್ನು ಕೊರೊನಾದಿಂದಾಗಿ ಫೆಬ್ರವರಿ 6 ಮತ್ತು 7ರಂದು ಏರ್ಪಡಿಸಲಾಗಿದೆ. ಸಾಗರ ತಾಲೂಕಿನ ಹೊನ್ನೇಸರ ಗ್ರಾಮ ಶ್ರಮಜೀವಿ ಆಶ್ರಮದಲ್ಲಿ ನಡೆಯಲಿರುವ ಉತ್ಸವ ಬರೀ ಮಾರಾಟ, ವಹಿವಾಟಿಗಷ್ಟೇ ಸೀಮಿತವಾಗಿಲ್ಲ. ಅದರೊಂದಿಗೆ ಕೈ ಉತ್ಪನ್ನಗಳ ಹಾಗೂ ಕೈ ಉತ್ಪಾದಕರ ಸಂಭ್ರಮಾಚರಣೆಯಾಗಿದೆ. ನಮ್ಮ ಮತ್ತು ನಮ್ಮವರ ಅಸ್ಮಿತೆಯಾಗಿದೆ.
ಸಾಗರ ತಾಲೂಕಿನ ಭೀಮನಕೋಣೆ ಕವಿಕಾವ್ಯ ಟ್ರಸ್ಟ್, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚರಕ ಉತ್ಸವವನ್ನು ಫೆಬ್ರವರಿ 6, 7ರಂದು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮೋದ್ಯೋಗವನ್ನು ಪ್ರೋತ್ಸಾಹಿಸಬೇಕು.
– ಎಂ.ವಿ.ಪ್ರತಿಭಾ, ಚರಕ ಸಂಸ್ಥೆ
ಏನೇನು ಲಭ್ಯ | ಉತ್ಸವದಲ್ಲಿ ಎಲ್ಲ ಬಗೆಯ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆ, ಸೀರೆ, ದುಪಟ್ಟಾ ಮತ್ತು ಸಿದ್ಧ ಉಡುಪು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯ ಇರಲಿವೆ. ಇಲ್ಲಿ ಬಣ್ಣಗಾರಿಕೆಯಿಂದ ಕಸೂತಿಯವರೆಗೆ ಕೈಮಗ್ಗದ ಬಟ್ಟೆ ಉತ್ಪಾದನೆಯ ಎಲ್ಲ ವಿಭಾಗಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುವುದು. ಅಷ್ಟೇ ಅಲ್ಲದೇ ಕುಶಲಕರ್ಮಿಗಳೊಂದಿಗೆ ಸಂವಾದವೂ ನಡೆಸುವ ಅವಕಾಶವಿದೆ.
ಡೌನ್ ಟು ಅರ್ಥ್ | ಕಲಾವಿದ ಕೆ.ಜೆ. ಸಚ್ಚು ಅವರ ‘ಡೌನ್ ಟು ಅರ್ಥ’ ಚಿತ್ರಕಲಾ ಪ್ರದರ್ಶನ ಮತ್ತು ಕೈ ಉತ್ಪನ್ನಗಳ ವಸ್ತು ಪ್ರದರ್ಶನ, ಮಾರಾಟವನ್ನು ಉತ್ಸವದ ಅಂಗವಾಗಿ ಏರ್ಪಡಿಸಲಾಗಿದೆ. ಚರಕದ ಸದಸ್ಯರು ಹಾಗೂ ಸುತ್ತಮುತ್ತಲ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿ ಸಂಜೆ ಏರ್ಪಡಿಸಲಾಗುವುದು.
ಭರತ ನಾಟ್ಯ, ನಾಟಕ, ಯಕ್ಷಗಾನ ಪ್ರದರ್ಶನ | ಫೆಬ್ರವರಿ 6ರಂದು ಸಂಜೆ ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಸುತ್ತಮುತ್ತಲ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಹಾಗೂ ಚರಕದ ಸದಸ್ಯರಿಂದ `ಕೊಂದವರಾರು’ ನಾಟಕ ಪ್ರದರ್ಶನ ಹಾಗೂ ಫೆಬ್ರವರಿ 7 ರಂದು ಸಂಜೆ ಸಮಾರೋಪ ಸಮಾರಂಭ, ಕಾಯಕ ಪ್ರಶಸ್ತಿ ವಿತರಣೆ, ಹೆಗ್ಗೋಡು ಪ್ರಾಂತ್ಯ ಇವರಿಂದ ಕೃಷ್ಣ ಜನನ – ಕಂಸವಧೆ ಎಂಬ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಪ್ರಶಸ್ತಿ ಪ್ರದಾನ
ವೈಯಕ್ತಿಕ ವಿಭಾಗ | ದಾನಮ್ಮ ಮಂಜುನಾಥ್ ರಾಜನಾಳ (ಹೊರ ಊರು ನೇಯ್ಗೆ ವಿಭಾಗ), ಹುಚ್ಚೇಶ್ (ಕೈಮಗ್ಗ ವಿಭಾಗ), ಗಾಯತ್ರಿ ಆಚಾರ್, ಮಂಜುಳಾ (ಹೊಲಿಗೆ ವಿಭಾಗ), ಸುರೇಶ್ (ಎಸ್ಟೇಟ್ ವಿಭಾಗ), ಪದ್ಮಶ್ರೀ (ಬಟ್ಟೆ ಮಾರಾಟ ವಿಭಾಗ), ಕೆ.ಹರೀಶ್ (ತೋಟಗಾರಿಕೆ ವಿಭಾಗ), ನಮಿತಾ (ಲೆಕ್ಕಪತ್ರ ವಿಭಾಗ), ಎಂ.ಕಲ್ಪನಾ, ತೇಜಸ್ವಿನಿ (ದೇಸಿ ಮಾರಾಟ ವಿಭಾಗ ಬೆಂಗಳೂರು).
ಗುಂಪು ವಿಭಾಗ | ಚರಕ ಸಂಸ್ಥೆಯ ಶಾಂತಾ, ಗಿರಿಜಾ, ಸುಜಾತ, ಸವಿತಾ, ಮಾಲತಿ.