ಸುದ್ದಿ ಕಣಜ.ಕಾಂ
ಶಿವಮೊಗ್ಗ: ಉಂಬ್ಳೇಬೈಲು ಅರಣ್ಯ ಪ್ರದೇಶದಲ್ಲಿ ಮತ್ತೆ ಒಂಟಿ ಸಲಗ ದಾಂಧಲೆ ಶುರು ಮಾಡಿದೆ. ಸೋಮವಾರ ರಾತ್ರಿ ಹಾಲ್ ಲಕ್ಕವಳ್ಳಿ ಹಾಗೂ ಮಂಗಳವಾರ ಕೈದೊಟ್ಲು ಗ್ರಾಮದಲ್ಲಿ ಅಡಕೆ, ತೆಂಗಿನ ಮರಗಳಿಗೆ ಹಾನಿ ಮಾಡಿದೆ. ಹೀಗಾಗಿ, ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಆನೆಯೇ ಬೇರೆ | ಫೆಬ್ರವರಿ 3ರಿಂದ 5ರ ವರೆಗೆ ಸಕ್ರೆಬೈಲು ಆನೆಬಿಡಾರ, ಉಂಬ್ಳೇಬೈಲು ಅರಣ್ಯ ವಲಯದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಅವುಗಳ ಸ್ಥಾನವಾದ ಭದ್ರಾ ಅಭಯಾರಣ್ಯಕ್ಕೆ ಅಟ್ಟಿದ್ದರು. ಅದಾದ ಬಳಿಕ, ಈಗ ಮತ್ತೊಂದು ಆನೆ ಈ ಭಾಗದಲ್ಲಿ ಕಾಣಿಸಿಕೊಂಡಿದೆ. ಆದರೆ, ಈ ಒಂಟಿ ಸಲಗ ಈ ಹಿಂದೆ ಕಾರ್ಯಾಚರಣೆ ಮೂಲಕ ಭದ್ರಾ ಅಭಯಾರಣ್ಯಕ್ಕೆ ತಲುಪಿಸಿರುವ ಆನೆಯಲ್ಲ. ಇದು ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಓಡಾಡಿಕೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕೃತ ಮೂಲಗಳು ‘ಸುದ್ದಿ ಕಣಜ.ಕಾಂ‘ಗೆ ತಿಳಿಸಿವೆ.
ಈ ಹಿಂದೆ ಕಾರ್ಯಚರಣೆ ಮೂಲಕ ನರಸಿಂಹರಾಜಪುರ ರಸ್ತೆಯಲ್ಲಿ ಕಾಕನಹಸೂಡಿವರೆಗೆ ಓಡಿಸಲಾಗಿರುವ ಮೂರು (ಗಂಡು, ಹೆಣ್ಣು ಮತ್ತು ಮರಿ)ಆನೆಗಳಿದ್ದವು. ಆದರೆ, ಈಗ ಕಾಣಿಸಿಕೊಂಡಿರುವುದು ಒಂಟಿ ಸಲಗವಿದ್ದು, ವಯಸ್ಸು ಅದಕ್ಕಿಂತ ಕಡಿಮೆ ಇದೆ ಎಂದು ತಿಳಿದುಬಂದಿದೆ.