ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆಯ ಸಭೆಯ ಅಜೆಂಡಾದಲ್ಲಿ ಮೇಯರ್ ಮತ್ತು ಆಯುಕ್ತರ ಗಮನಕ್ಕೆ ಬರದೇ ಶಿವಪ್ಪ ನಾಯಕ ಸಿಟಿ ಸೆಂಟರ್ ಮಾಲ್ ಲೀಸ್ ಅವಧಿ ವಿಸ್ತರಣೆ ಪ್ರಕರಣದ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಎರಡು ತಿಂಗಳಲ್ಲಿ ವರದಿ ನೀಡುವಂತೆ ಮೇಯರ್ ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಲೀಸ್ ಅವಧಿ ವಿಸ್ತರಿಸುವ ಪ್ರಶ್ನೆಯೇ ಇಲ್ಲ. ಅಜೆಂಡಾದೊಳಗೆ ಯಾವುದೆ ವಿಷಯವಾಗಿರಲಿ ಕಾನೂನಿನ ಅನ್ವಯ ಸೇರ್ಪಡೆಯಾಗಬೇಕು. ಆದರೆ, ಇಲ್ಲಿ ಮೇಯರ್ ಅವರನ್ನೇ ಕತ್ತಲಿನಲ್ಲಿಟ್ಟು ವಿಷಯ ಸೇರಿಸಲಾಗಿದೆ. ಈ ಪ್ರಮಾದ ಯಾವ ಹಂತದಲ್ಲಿ ನಡೆದಿದೆ ಎಂಬುವುದನ್ನು ತನಿಖೆಯ ಮೂಲಕ ಪತ್ತೆ ಹಚ್ಚಬೇಕು. ಅದಕ್ಕಾಗಿ, ಪಾಲಿಕೆಯ ಸರ್ವಪಕ್ಷಗಳ ಐದು ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ನಿಷ್ಪಕ್ಷಪಾತವಾಗಿ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಮೇಯರ್ ಹೇಳಿದರು.
ಮೇಯರ್ ರೂಲಿಂಗ್ ಬಳಿಕವೂ ಚರ್ಚೆ | ಮೇಯರ್ ಸುನೀತಾ ಅಣ್ಣಪ್ಪ ಅವರು ಈ ಪ್ರಕರಣ ಸಂಬಂಧ ಕ್ಲರ್ಕ್ ಗೆ ನೋಟಿಸ್ ನೀಡಲಾಗಿದೆ. ಅವರಿಂದ ಸರಿಯಾದ ಉತ್ತರ ಬರದಿದ್ದರೆ, ಸಂಬಂಧಪಟ್ಟವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುವುದು ಎಂದು ರೂಲಿಂಗ್ ನೀಡಿದರು. ಆದರೆ, ಅದಕ್ಕೆ ಪ್ರತಿಪಕ್ಷಗಳು ವಿರೋಧಿಸಿದವು. ಹೀಗಾಗಿ, ಸಭೆಯನ್ನು ಕೆಲ ಕಾಲ ಮುಂದೂಡಲಾಯಿತು. ತದನಂತರ, ಮುಂದುವರಿದ ಸಭೆಯಲ್ಲಿ ಪಾಲಿಕೆ ಸದಸ್ಯರ ಹಕ್ಕೊತ್ತಾಯದ ಮೇರೆಗೆ ತನಿಖೆಗೋಸ್ಕರ ಸಮಿತಿ ರಚಿಸಲಾಯಿತು. ಅಲ್ಲಿಯವರೆಗೆ ಯಾವುದೇ ಅಧಿಕಾರಿಯನ್ನು ಅಮಾನತು ಅಥವಾ ಇನ್ನ್ಯಾವುದೇ ರೀತಿಯ ಶಿಸ್ತುಕ್ರಮಕ್ಕೆ ಒಳಪಡಿಸುವುದಿಲ್ಲ ಎಂದು ಘೋಷಿಸಿದರು.
ಪಾಲಿಕೆ ಸಭೆಯಲ್ಲಿ ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಚಿದಾನಂದ್ ವಟಾರೆ, ಶಾಸಕರಾದ ಆರ್.ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.