ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ 11 ಜನ ತಜ್ಞ ವೈದ್ಯರೊಂದಿಗೆ ಶನಿವಾರ ಚರ್ಚೆ ನಡೆಸಿದರು.
11 ಜನರಲ್ಲಿ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಕಳೆದ 10 ವರ್ಷಗಳಿಂದ ಅರಿವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗಣೇಶ್ ಭಟ್ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್ ನಿರ್ವಹಣೆ ಕುರಿತಾಗಿ ಮಾಹಿತಿಯನ್ನು ಪಡೆದುಕೊಂಡರು.
https://www.suddikanaja.com/2021/04/26/oxygen-plants-in-bhadravathi-and-sagar/
ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆಯ್ದ 11 ಮಂದಿ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಫೀಡ್ಬ್ಯಾಕ್ ಪಡೆದುಕೊಂಡರು. ತಜ್ಞ ವೈದ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಮುಖ್ಯಮಂತ್ರಿ ಅವರೊಂದಿಗೆ ಹಂಚಿಕೊಂಡು ಸಲಹೆ ಸೂಚನೆಗಳನ್ನು ಸಹ ನೀಡಿದರು.
ಸಿಎಂ ಕೇಳಿದ್ದೇನು | ತೀರ್ಥಹಳ್ಳಿ ತಾಲೂಕು ಪೂರ್ಣ ಮಲೆನಾಡು ಪ್ರದೇಶವಾಗಿದ್ದು, ಅಲ್ಲಿನ ಗ್ರಾಮೀಣ ಭಾಗದ ಪರಿಸ್ಥಿತಿ ಹೇಗಿದೆ? ತಾಲೂಕು ಕೇಂದ್ರದಿಂದ ಜಿಲ್ಲಾಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಲು ಯಾವ ರೀತಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಂಡಿದ್ದೀರಿ? ತಾಲೂಕಿನಲ್ಲಿ ಪ್ರಸ್ತುತ ಎಷ್ಟು ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ? ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ವ್ಯವಸ್ಥೆ ಹೇಗಿದೆ? ಗ್ರಾಮೀಣ ಪ್ರದೇಶದ ಜನರ ಚಿಕಿತ್ಸೆ ಹಾಗೂ ಮುಂಜಾಗರೂಕತಾ ಕ್ರಮಗಳ ಕುರಿತು ನಿಮ್ಮ ಸಲಹೆಗಳೇನಾದರೂ ಇದ್ದರೆ ತಿಳಿಸಿ. ಇವು ಮುಖ್ಯಮಂತ್ರಿ ಅವರು ಡಾ.ಗಣೇಶ್ ಭಟ್ ಅವರಿಗೆ ಕೇಳಿದ ಪ್ರಶ್ನೆಗಳು.
ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಕರೆದುಕೊಂಡು ಹೋಗಲು ತಾಲೂಕು ಆಸ್ಪತ್ರೆಯಲ್ಲಿ 2 ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ಆಂಬ್ಯುಲೆನ್ಸ್ ಗ್ರಾಮೀಣ ಪ್ರದೇಶದಿಂದ ಕೋವಿಡ್ ಪಾಸಿಟಿವ್ ವ್ಯಕ್ತಿಗಳನ್ನು ತಾಲೂಕು ಆಸ್ಪತ್ರೆಗೆ ಟ್ರಯಾಜ್ ಗೆ ಕರೆದುಕೊಂಡು ಹೋಗಲು ಬಳಸುತ್ತಿದ್ದೇವೆ. ಇದೇ ರೀತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಮೂಲಕ ರೋಗಿಗಳನ್ನು ಕರೆ ತರಲು, ಹೋಮ್ ಐಸೋಲೇಷನ್ ನಲ್ಲಿರುವವರ ಚಿಕಿತ್ಸೆಗಾಗಿ ನಾಲ್ಕು ವಾಹನ ಬಳಸಲಾಗುತ್ತಿದೆ. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ನಿರಂತರ ಸಂಪರ್ಕ ಸಾಧಿಸಿ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ನಮ್ಮಲ್ಲಿ ಆಕ್ಸಿಜನ್ ಪ್ಲಾಂಟ್ ಇರುವುದಿಲ್ಲ. ಇಲ್ಲಿಯೇ ಆಕ್ಸಿಜನ್ ಪ್ಲಾಂಟ್ ಇದ್ದರೆ ನಾವು ಇನ್ನಷ್ಟು ಸೇವೆ ನೀಡಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಟೆಲಿಮೆಡಿಸಿನ್ ಸೌಲಭ್ಯ | ತಾಲೂಕಿನಲ್ಲಿ ಟೆಲಿಮೆಡಿಸಿನ್ ಸೌಲಭ್ಯ ಆರಂಭಿಸಲಾಗಿದ್ದು, ಮೂರು ಮಂದಿ ವೈದ್ಯರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋಮ್ ಐಸೋಲೇಷನ್ ನಲ್ಲಿರುವವರು ಇದರ ಸೌಲಭ್ಯವನ್ನು ಗರಿಷ್ಠವಾಗಿ ಬಳಸುತ್ತಿದ್ದು, ರೋಗ ಲಕ್ಷಣಗಳಿಗೆ ಫೋನ್ ಮೂಲಕ ವೈದ್ಯರ ನೆರವು ಪಡೆಯಲು ಇದರಿಂದ ಸಾಧ್ಯವಾಗಿದೆ. ಇದೀಗ 45ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡುತ್ತಿದ್ದು, ಇದೀಗ ಎರಡನೇ ಲಸಿಕೆಯನ್ನು ಮಾತ್ರ ನೀಡುತ್ತಿದ್ದೇವೆ. 18-45 ವರ್ಷದವರಿಗೆ ಪ್ರಸ್ತುತ ಲಸಿಕೆಯನ್ನು ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಡಾ.ಗಣೇಶ್ ಭಟ್ ಅವರು ಹೇಳಿದರು.
ವೈದ್ಯರ ಕಾರ್ಯನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಎರಡನೇ ಅಲೆ ನಿರೀಕ್ಷೆಗೂ ಮೀರಿ ತೀವ್ರಗೊಂಡಿದೆ. ಇದರಿಂದಾಗಿ ಆಸ್ಪತ್ರೆ ಮತ್ತು ವೈದ್ಯರ ಮೇಲೆ ಕಾರ್ಯದ ಒತ್ತಡ ಹೆಚ್ಚಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಮಾನವೀಯತೆಯ ನೆಲೆಯಲ್ಲಿ ಸಮರ್ಥವಾಗಿ ಎದುರಿಸುತ್ತಿದ್ದೀರಿ ಎಂದು ಶ್ಲಾಘಿಸಿದರು. ಸರ್ಕಾರ ಸದಾ ನಿಮ್ಮೊಂದಿಗೆ, ನಿಮ್ಮ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
https://www.suddikanaja.com/2020/11/04/ranibennur-smg-railwa/