ಸುದ್ದಿ ಕಣಜ.ಕಾಂ
ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕಿನ ಕವಲೇದುರ್ಗದ ಭುವನಗಿರಿ ಸಂಸ್ಥಾನ ಮಹಾಮಹತ್ತಿನ ಮಠದ ಡಾ. ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಬಿ.ಶಂಕರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಕವಲೇದುರ್ಗದ ಸ್ವಾಮಿಗಳೆಂದೇ ಹೆಸರಾಗಿದ್ದ ಪೂಜ್ಯ ಡಾ.ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಹತ್ತಿರದ ಸಂಪರ್ಕ ಹೊಂದಿದ್ದರು. ಪೂಜ್ಯರ ದರ್ಶನ ಆದಾಗಲೆಲ್ಲ ಪರಿಷತ್ತಿನ ಚಟುವಟಿಕೆಯ ಬಗ್ಗೆ ಮೆಚ್ಚುಗೆ ಹಾಗೂ ಸಲಹೆ ಕೊಡುತ್ತಿದ್ದರು ಎಂದು ಶಂಕರಪ್ಪ ತಿಳಿಸಿದ್ದಾರೆ.
‘ನಿಮ್ಮ ಸಾಹಿತ್ಯ ಪರಿಷತ್ತು; ಶಿವಮೊಗ್ಗ ಬಿಟ್ಟು ಗ್ರಾಮಾಂತರ ಪ್ರದೇಶಕ್ಕೆ ಬರಲಿ. ಈ ನಮ್ಮ ಮಲೆನಾಡ ಹಳ್ಳಿಗಳ ಒಡಲಲ್ಲಿ ಅಪಾರ ಸಾಹಿತ್ಯ ಸಂಪತ್ತಿದೆ. ಐತಿಹಾಸಿಕ ಅನೇಕ ವಿಚಾರಗಳು ಸೂಕ್ತ ಅಧ್ಯಾಯನವಿಲ್ಲದೆ ಮರೆಮಾಚಿ ನಮ್ಮ ಐತಿಹಾಸಿಕ ಘಟನೆಗಳನ್ನು ತಿರುಚಲಾಗಿದೆ. ಅದರ ಬಗ್ಗೆ ಹೊಸ ಅಧ್ಯಾಯನ ಆಗಬೇಕು. ಅದು ನಮ್ಮ ಮಲೆನಾಡ ಯುವಕರಿಂದ ಆಗಬೇಕು. ನಮ್ಮ ಮಲೆನಾಡಿನ ಯುವಕರಿಗೆ ಪರಿಷತ್ತಿನ ವೇದಿಕೆಯಲ್ಲಿ ಹೆಚ್ಚೆಚ್ಚು ಅವಕಾಶ ಸಿಗುವಂತೆ ಆಗಬೇಕು’ ಎಂದು ಸದಾ ಬಯಸುತ್ತಿದ್ದರು.
ಮಹಾ ಸ್ವಾಮಿಗಳು ನನಗೆ ದರ್ಶನವಾಗಿದ್ದು ಪ್ರಥಮವಾಗಿ ತೀರ್ಥಹಳ್ಳಿಯಲ್ಲಿರುವ ಅಡಕೆ ಮಂಡಿಯಲ್ಲಿ. ಅಲ್ಲಿ ಒಬ್ಬ ಅಪ್ಪಟ ರೈತರಂತೆ ಕಂಡಿದ್ದರು. ಅಲ್ಲಿ ನನ್ನ ಭೇಟಿ ಉದ್ದೇಶ ತಿಳಿಸಿದಾಗ ತುಂಬಾ ಖುಷಿಯಿಂದ ಬೆನ್ನು ತಟ್ಟಿ ಬೆಂಬಲಿಸಿ ಆಶೀರ್ವಾದಿಸಿದ್ದರು.
ಅಪ್ಪಟ ಗ್ರಾಮೀಣ ಬದುಕನ್ನು ಪ್ರೀತಿಸುತ್ತಾ ಗ್ರಾಮೀಣ ಬದುಕಿನ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿದ್ದ ಪೂಜ್ಯರು. ನಮ್ಮನ್ನು ಅಗಲಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಅಪಾರ ಭಕ್ತರಿಗೆ ಕರುಣಿಸಲಿ ಎಂದು ಶಂಕರಪ್ಪ ಪ್ರಾರ್ಥಿಸಿದ್ದಾರೆ.
https://www.suddikanaja.com/2020/11/22/demand-raise-for-historical-authority-in-shikaripura/