ಸುದ್ದಿ ಕಣಜ.ಕಾಂ | HOSANAGARA | CITIZEN VOICE
ಹೊಸನಗರ: ಮಲೆನಾಡಿನ ತಾಲೂಕುಗಳಲ್ಲಿ ನೆಟ್ವರ್ಕ್ ಗೋಸ್ಕರ ನಡೆದ ಅಭಿಯಾನದ ಬೆನ್ನಲ್ಲೇ ಈಗ ಮೂಲಸೌಕರ್ಯಕ್ಕಾಗಿ ಕುಗ್ರಾಮವೊಂದರಲ್ಲಿ ಹೋರಾಟದ ಎಚ್ಚರಿಕೆ ನೀಡಲಾಗಿದೆ. ತಮ್ಮ ಹಕ್ಕುಗಳನ್ನು ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗುತ್ತಿದೆ.
ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದಗದ್ದೆ, ನೀರೇರಿ ಎಂಬಲ್ಲಿ ಗ್ರಾಮಸ್ಥರು ಹೋರಾಟದ ಎಚ್ಚರಿಕೆ ನೀಡಿದ್ದರು, ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಅವಳಿ ಹಳ್ಳಿಗಳಲ್ಲಿ ಹೋರಾಟದ ಕಿಚ್ಚು
ಒಂದಗದ್ದೆ ಹಾಗೂ ನೀರೇರಿ ಗ್ರಾಮಗಳು ಅವಳಿ ಗ್ರಾಮಗಳಾಗಿವೆ. ಈ ಗ್ರಾಮಗಳಲ್ಲಿ ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪ ಹಾಗೂ ಕುಡಿಯುವ ನೀರಿನ ಸೌಲಭ್ಯಗಳಿಲ್ಲ. ಈ ಮೂಲಸೌಕರ್ಯಗಳ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಗದ್ದೆಯಂತಾದ ರಸ್ತೆಯಲ್ಲಿ ನಾಟಿ ಮಾಡುವ ಮೂಲಕ ಗ್ರಾಮಸ್ಥರು ವಿಭಿನ್ನ ಪ್ರತಿಭಟನೆಯನ್ನು ನಡೆಸಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಸ್ತೆ ಗದ್ದೆಯಂತಾಗಿದ್ದು, ರೋಗಿಗಳು, ವೃದ್ಧರು ಮತ್ತು ಅಶಕ್ತರು ದಾರಿ ಕಾಣದೆ ಕಂಗಾಲಾಗಿದ್ದಾರೆ. ಬೇರೆಯ ಊರುಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸೇರಿಸಲು ಎರಡು ಮೂರು ಕಿ.ಮೀ. ದೂರ ಹೆಗಲ ಮೇಲೆ ಹೊತ್ತುಕೊಂಡು ಸಾಗಬೇಕಿದೆ. ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಇದೇ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಶಾಸಕರ ಕಚೇರಿ ಮುಂದೆ ಗ್ರಾಮಸ್ಥರು ಸಾಮೂಹಿಕವಾಗಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.
ವರದಿ | ದೇವರಾಜ್ ಆರಗ
(ನಿಮ್ಮೂರ ಸಮಸ್ಯೆಗಳಿಗೆ ನಮ್ಮ ದನಿ)
ಗಮನಕ್ಕೆ | ನಿಮ್ಮ ಗ್ರಾಮದಲ್ಲೂ ಇಂತಹ ಸಮಸ್ಯೆಗಳಿದ್ದರೆ ಅದನ್ನು ಬರೆದು ನಮಗೆ ವಾಟ್ಸಾಪ್ ಮಾಡಿ. ಅದನ್ನು ಅಧಿಕಾರಿ ವರ್ಗಕ್ಕೆ ತಲುಪಿಸುವುದು ನಮ್ಮ ಜವಾಬ್ದಾರಿ.
https://www.suddikanaja.com/2021/07/13/no-network-no-voting-campaign-in-malenadu/