ಸುದ್ದಿ ಕಣಜ.ಕಾಂ | DISTRICT | FLOOD
ಶಿವಮೊಗ್ಗ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಈ ಬಾರಿ 6 ಜೀವ ಹಾನಿ ಸಂಭವಿಸಿದ್ದು, 5 ಪ್ರಕರಣಗಳಲ್ಲಿ ಪರಿಹಾರ ಧನ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಹೇಳಿದರು.
https://www.suddikanaja.com/2021/08/06/heavy-rain-fall-in-shivamogga/
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಅಭಿವೃದ್ಧಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
126 ಮನೆಗಳು ಪೂರ್ಣ ಹಾನಿ, 478 ತೀವ್ರ ಹಾನಿ ಹಾಗೂ 532 ಭಾಗಶಃ ಹಾನಿ ಉಂಟಾಗಿದೆ. ಮರಳು ಜಮೆಗೊಂಡು 1,174 ಹೆಕ್ಟೆರ್ ಕೃಷಿ ಭೂಮಿ ಹಾನಿಗೀಡಾಗಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ₹1.43 ಕೋಟಿ ಪರಿಹಾರ ಒದಗಿಸಬೇಕಾಗಿದೆ. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹಾನಿಯುಂಟಾಗಿದ್ದು 4086 ಹೆಕ್ಟೆರ್ ಭತ್ತ, 773 ಹೆಕ್ಟೆರ್ ಮುಸುಕಿನ ಜೋಳ, 233 ಹೆಕ್ಟೆರ್ ಅಡಿಕೆ ಸೇರಿದಂತೆ 6,285 ಹೆಕ್ಟೆರ್ ಪ್ರದೇಶದಲ್ಲಿ ಬೆಳೆಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿಸಿದರು.
ಒಂದು ವಾರದಲ್ಲಿ ಡಾಟಾ ಎಂಟ್ರಿ ಕೆಲಸ ಪೂರ್ಣಗೊಳಿಸಿ
ಬೆಳೆ ಹಾನಿಗೆ ಇನ್ಪುಟ್ ಸಬ್ಸಿಡಿ ಒದಗಿಸಲು ಡಾಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದ್ದು 7,352 ಅರ್ಜಿಗಳ ಪೈಕಿ 1,044 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಡಾಟಾ ಎಂಟ್ರಿ ಕಾರ್ಯವನ್ನು ವಾರದ ಒಳಗಾಗಿ ಪೂರ್ಣಗೊಳಿಸುವಂತೆ ಸೆಲ್ವಕುಮಾರ್ ಅವರು ಸೂಚನೆ ನೀಡಿದರು.
READ | ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಜಾಗ ಒತ್ತುವರಿ ತಡೆಗೆ ಹೈಕೋರ್ಟ್ ಖಡಕ್ ವಾರ್ನಿಂಗ್, ಕಾರಣವೇನು ಗೊತ್ತಾ?
ನೆರೆ ಸಂತ್ರಸ್ತರ ಪುನರ್ವಸತಿ ಕಾರ್ಯಗಳಿಗೆ ಪ್ರಸ್ತುತ ಸಾಲಿನಲ್ಲಿ ₹7.93 ಕೋಟಿ ಬಿಡುಗಡೆಯಾಗಿದ್ದು, 303 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಿದೆ ಎಂದು ಎಡಿಸಿ ಡಾ.ನಾಗೇಂದ್ರ ಹೊನ್ನಳ್ಳಿ ಹೇಳಿದರು.
₹10 ಕೋಟಿ ತೆರಿಗೆ ಸಂಗ್ರಹ ಬಾಕಿ
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈ ಹಣಕಾಸು ಸಾಲಿನಲ್ಲಿ ಇದುವರೆಗೆ ₹26 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಇನ್ನೂ ₹10 ಕೋಟಿ ಸಂಗ್ರಹಿಸುವುದು ಬಾಕಿ ಇದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1,03,249 ನೀರು ಸಂಪರ್ಕವಿದ್ದು, ಈ ವರ್ಷ ₹3 ಕೋಟಿ ಶುಲ್ಕ ಸಂಗ್ರಹಿಸಲಾಗಿದೆ. ಇನ್ನೂ ₹38 ಕೋಟಿ ಬಾಕಿಯಿದೆ ಸೆಲ್ವಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
https://www.suddikanaja.com/2021/08/09/meeting-on-flood-releaf/