ಸುದ್ದಿ ಕಣಜ.ಕಾಂ | TALUK | SIGANDUR LAUNCH
ತುಮರಿ(ಸಾಗರ): ಕರ್ನಾಟಕದ ಅಂಡಮಾನ್ ಎಂದೇ ಖ್ಯಾತಿ ಪಡೆದಿರುವ ತಾಲ್ಲೂಕಿನ ಶರಾವತಿ ಹಿನ್ನೀರಿನ ಹೊಳೆಬಾಗಿಲಿನಲ್ಲಿ ದಸರಾ ಆಯುಧ ಪೂಜೆಯ ಅಂಗವಾಗಿ ಹೊಳೆಬಾಗಿಲಿನ ಲಾಂಚ್ ಮದುವಣಗಿತ್ತಿಯಂತೆ ಸಜ್ಜಾಗಿದೆ.
ರಾತ್ರಿಯಿಡಿ ಲಾಂಚ್ ಸಿಬ್ಬಂದಿ ವಿವಿಧ ಹೂವುಗಳಿಂದ ಹಾಗೂ ತೋರಣಗಳಿಂದ ಸಿಂಗಾರಗೊಳಿಸಿದ್ದು, ಆಯುಧ ಪೂಜೆಗೆ ಸಜ್ಜಾಗಿದೆ.
ಲಾಂಚ್ ಒದಗಿಸಲು ಕಾರಣ
ಶರಾವತಿ ನದಿ 1942-43ರ ಸುಮಾರಿನಲ್ಲಿ ಮೈಸೂರು ಮಹಾರಾಜರು ಶರಾವತಿ ನದಿಗೆ 1943ರಲ್ಲಿ ತಮ್ಮ ರಾಜ ಬೊಕ್ಕಸದ ವೈಯಕ್ತಿಕ ಒಡವೆಯನ್ನು ಅಡವಿಟ್ಟು ಹಿರೇಬಾಸ್ಕರ್ ಈಗಿನ ಮಡೆನೂರು ಡ್ಯಾಂ (ಅಣೆಕಟ್ಟನ್ನು) ನಿರ್ಮಾಣಮಾಡಿದ್ದರು.
ಸುಮಾರು 54 ವರ್ಷಗಳಿಂದ ಈ ಭಾಗದ ಜನರಿಗೆ ನಿರಂತರ ಸೇವೆ ಒದಗಿಸುತ್ತಿರುವ ಲಾಂಚ್ ಮಳೆ, ಗಾಳಿ ಎನ್ನದೆ ಹಗಲಿರುಳು ಸೇವೆ ಸಲ್ಲಿಸುತ್ತಿದೆ. 1968ರಲ್ಲಿ ಈ ಭಾಗದ ಜನರಿಗೆ ಸರ್ಕಾರ ಮೊದಲ ಬಾರಿಗೆ ಮರದ ದಿಮ್ಮಿಗಳನ್ನು ಒಳಗೊಂಡ ಬಹಳ ಚಿಕ್ಕದಾದ ಲಾಂಚ್ ಒದಗಿಸಿತ್ತು.
ದಿನನಿತ್ಯ ಈ ಭಾಗದ ಸಾವಿರಾರು ಜನರು ಈ ಲಾಂಚ್ ನಂಬಿ ಬದುಕುತ್ತಿರುವ ಸನ್ನಿವೇಶ ಸೃಷ್ಟಿಯಾಗಿದ್ದು. ಪ್ರತಿದಿನ ಸಾಗರದ ಆಸ್ಪತ್ರೆಗೆ, ರೈತರು ಸರ್ಕಾರಿ ಕಚೇರಿಗಳಿಗೆ ತೆರಳಲು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಲಾಂಚ್ ಸೇವೆಯನ್ನು ಅವಲಂಬಿಸಿದ್ದಾರೆ.
ಇವರಿಗೆ ಯಾವುದೇ ತಡೆಯಿಲ್ಲದೆ ಸಮಯಕ್ಕೆ ಸರಿಯಾಗಿ ತಲುಪಿಸುವಲ್ಲಿ ಕಳಸವಳ್ಳಿ- ಹೊಳೆಬಾಗಿಲು ತಟದ ಲಾಂಚ್ ಸಾರ್ವಜನಿಕರಿಗೆ ಮುಕ್ತವಾಗಿದೆ.
ಕಳೆದ 54 ವರ್ಷಗಳಿಂದ ಈ ಭಾಗದ ಜನರಿಗೆ ಲಾಂಚ್ ಸೇವೆ ಮಾತ್ರ ಶಾಶ್ವತ ಪರಿಹಾರವಾಗಿ ನಿಂತಿದೆ. ಎಷ್ಟು ಸರ್ಕಾರಗಳು ಬದಲಾದರೂ ಈ ಭಾಗದ ಜನರಿಗೆ ದಿನನಿತ್ಯ ಲಾಂಚ್ ಸೇವೆಯಿಂದ ಮುಕ್ತಿ ಪಡೆಯಲು ಸಾಧ್ಯವಾಗಿಲ್ಲ. ಕಾರಣ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.
ಹೊಳೆಬಾಗಿಲು ಲಾಂಚ್ ಸೇವೆ ಕರೂರು- ಬಾರಂಗಿ ಹೋಬಳಿ ಸುಮಾರು 30 ಸಾವಿರ ಜನರ ಸಂಪರ್ಕ ಸೇತುವೆಯಾಗಿದ್ದು, ಈ ಭಾಗದ ಜನರು ಯಾವುದೇ ತುರ್ತು ಪರಿಸ್ಥಿತಿ ಇದ್ದರೂ ಅಂತಿಮ ಪರಿಹಾರದ ಮಾರ್ಗ ಇದೇ ಲಾಂಚ್.
ಕರೂರು, ಬಾರಂಗಿ ಹೋಬಳಿಯ ತುಮರಿ ಬ್ಯಾಕೋಡು, ನೆಲ್ಲಿಬೀಡು, ಬರುವೆ, ಕರೂರು, ಹೊಸಕೊಪ್ಪ, ಸುಳ್ಳಳ್ಳಿ, ಕಾರಣಿ, ಕಟ್ಟಿನಕಾರು ಇನ್ನಿತರೆ ಗ್ರಾಮದ ಸಾವಿರಾರು ಜನರು ಲಾಂಚ್ ಅನ್ನೇ ಅವಲಂಬಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈಡೀ ರಾಷ್ಟ್ರವೇ ಲಾಕ್ ಡೌನ್ ಆಗಿದ್ದರೂ ಹೊಳೆಬಾಗಿಲು ಲಾಂಚ್ ಸೇವೆ ನಿರಂತರವಾಗಿದ್ದಿದ್ದು ವಿಶೇಷ.
READ | ಕಾರುಗಳನ್ನು ಬಾಡಿಗೆ ನೀಡುವ ಮುನ್ನ ಹುಷಾರ್! ಬಾಡಿಗೆ ಪಡೆದ 3 ಕಾರುಗಳೊಂದಿಗೆ ಪರಾರಿಯಾಗಿದ್ದ ವ್ಯಕ್ತಿ ಅರೆಸ್ಟ್
ಲಾಂಚ್ ನಡೆದುಬಂದ ದಾರಿ
- 1968 ರಲ್ಲಿ ಮೊದಲ ಬಾರಿಗೆ ಲಾಂಚ್ ಸೇವೆ ಆರಂಭ.
- ಮೊದಲು ಒಂದು ಲಾಂಚ್ ಒದಗಿಸಿದ್ದ ಸರ್ಕಾರ ಪ್ರಸ್ತುತ 3 ಲಾಂಚ್ ಸೇವೆ ನೀಡುತ್ತಿವೆ.
- ಸರ್ಕಾರಿ ಹಾಗೂ ಗುತ್ತಿಗೆ ಆಧಾರದ ಮೇಲೆ ಸುಮಾರು 16ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
- ಶರಾವತಿ ಹಿನ್ನೀರಿನ ಸುಮಾರು 30 ಸಾವಿರ ಜನರ ಸಂಪರ್ಕ ಸೇತುವೆ ಇದಾಗಿದೆ.
- 54 ವರ್ಷಗಳಿಂದ ಲಾಂಚ್ ಸೇವೆ ಹೊರತು ಪರ್ಯಾಯ ವ್ಯವಸ್ಥೆಯಿಲ್ಲ.
- ಕಳೆದ 10 ವರ್ಷಗಳಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಏರಿಕೆ.
– ಎಂ.ಸುಕುಮಾರ್
https://www.suddikanaja.com/2021/09/20/worst-condition-due-to-problems/