ಸುದ್ದಿ ಕಣಜ.ಕಾಂ | DISTRICT | NETWORK PROBLEM
ಶಿವಮೊಗ್ಗ: ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಸುವುದಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರು ಒಂದು ತಿಂಗಳ ಡೆಡ್ ಲೈನ್ ನೀಡಿದರು.
ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾದ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೆಟ್ವರ್ಕ್ ಗಾಗಿ ಶರಾವತಿ ಹಿನ್ನೀರು ಭಾಗದವರು ಪ್ರತಿಭಟನೆ ಸೇರಿದಂತೆ ಹಲವು ಹಂತದ ಹೋರಾಟಗಳನ್ನು ಮಾಡಿದ್ದಾರೆ. ಹೀಗಾಗಿ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದೆ ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಬೇಕು ಎಂದು ಸೂಚನೆ ನೀಡಿದರು
ಸರ್ಕಾರಿ ಶಾಲೆಗಳಿಗೆ ನೆಟ್ವರ್ಕ್ ಸೇವೆಯನ್ನು ಒದಗಿಸಿಕೊಡುವುದರ ಜೊತೆಗೆ ಅಲ್ಲಿನ ಬಳಕೆದಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವ ಬಗ್ಗೆಯೂ ಗಮನಹರಿಸಬೇಕು. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸಂಸದರ ಪ್ರದೇಶಾಭಿವೃದ್ದಿಯಿಂದ ₹20 ಲಕ್ಷ ಹಾಗೂ ಜಿಲ್ಲೆಯ ಇತರೆ ಶಾಸಕರ ನಿಧಿಯಿಂದ ಹಣವನ್ನು ಕ್ರೋಢೀಕರಿಸಿ, ಮುಂದಿನ ಒಂದು ತಿಂಗಳೊಳಗಾಗಿ ಸೌಲಭ್ಯ ಕಲ್ಪಿಸಿಕೊಡಲು ಕ್ರಮಕೈಗೊಳ್ಳಲಾಗುವುದು ಎಂದರು.
READ | ಬ್ರೇಕ್ ಬಿದ್ದಿದ್ದ ಕೆಪಿಟಿಸಿಎಲ್ ನೇಮಕಾತಿ ಪ್ರಕ್ರಿಯೆ ಪುನರಾರಂಭ
ರೈತರಿಗೆ ಬೆಳೆ ವಿಮೆ ಪಾವತಿಸಲು ಸೂಚನೆ
ಬೆಳೆಗಾರರಿಗೆ ಬೆಳೆ ವಿಮೆ ಪಾವತಿಯಾಗದಿರುವ ಬಗ್ಗೆ ರೈತರು ಆರೋಪಿಸುತ್ತಿದ್ದು, ಈ ಬಗ್ಗೆ ಕೃಷಿ, ತೋಟಗಾರಿಕೆ, ಬ್ಯಾಂಕ್ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ, ಸಂತ್ರಸ್ತ ರೈತರಿಗೆ ಪರಿಹಾರಧನ ದೊರಕಿಸುವಂತೆ ಸೂಚಿಸಿದರು.
2018-19 ಹಾಗೂ 2019-20 ಸಾಲಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಾರರಿಗೆ ಬೆಳೆವಿಮೆ ಪಾವತಿಯಾಗದಿರುವ ಬಗ್ಗೆ ರೈತರು ನಮ್ಮ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಶೀಘ್ರದಲ್ಲೇ ಸಭೆ ನಡೆಸಿ ಕಾಲಮಿತಿಯಲ್ಲಿ ರೈತರ ಖಾತೆಗೆ ಪರಿಹಾರ ಧನ ವಿತರಿಸುವಂತೆ ಸೂಚಿಸಿದರು.
ಸ್ವ ಸಹಾಯ ಸಂಘಕ್ಕೆ ₹15,000 ಸುತ್ತು ನಿಧಿ
ಜಿಲ್ಲೆಯ ಸ್ತ್ರೀಶಕ್ತಿ ಗುಂಪುಗಳಿಗೆ ನೀಡಲಾಗುತ್ತಿರುವ ₹15,000 ಗಳ ಸುತ್ತುನಿಧಿ ಉದ್ದೇಶಿತ ಕಾರ್ಯಕ್ಕೆ ಸದ್ಬಳಕೆಯಾಗಬೇಕು. ಹೆಚ್ಚಿನ ಉಳಿತಾಯ ಮಾಡುವ ಹಾಗೂ ಉಳಿತಾಯದ ಹಣವನ್ನು ಸದ್ವಿನಿಯೋಗ ಮಾಡುತ್ತಿರುವ ಗುಂಪುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ದಿಶಾ ಸಮಿತಿಯ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
https://www.suddikanaja.com/2021/09/24/cm-holds-meeting-with-shivamogga-dist-mla/