ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ಮುಂದಿನ ತಿಂಗಳಿನಿಂದ ಮೂರು ತಿಂಗಳ `ರಂಗ ಶಿಕ್ಷಣ’ ಸರ್ಟಿಫಿಕೇಟ್ ಕೋರ್ಸ್ ಅನ್ನು
ಶಿವಮೊಗ್ಗ ರಂಗಾಯಣದಲ್ಲಿ ಆರಂಭಿಸಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಭೂಮಿಯ ಹೊಸ ಆಯಾಮಗಳನ್ನು ರಂಗಾಸಕ್ತರಿಗೆ ಪರಿಚಯಿಸುವ, ನಾಟಕ ಸಾಹಿತ್ಯವನ್ನು ಅಧ್ಯಯನ ಮಾಡಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಸಹಯೋಗದೊಂದಿಗೆ ಕೋರ್ಸ್ ಪ್ರಾರಂಭಿಸಲಾಗುತ್ತಿದೆ ಎಂದರು.
ಪದ ಕಣಜ 13 | ಕೊರೊನಾ ಟೈಂನಲ್ಲಿ ಕಾಮನ್ ಆದರೂ ‘ಕರ್ಫ್ಯೂ’ಗೆ ಇರುವ ಇತಿಹಾಸವೇನು ಗೊತ್ತಾ?
ಯಾವ ವಿಷಯಗಳ ಬಗ್ಗೆ ತರಬೇತಿ
ಮೂರು ತಿಂಗಳ ಅವಧಿಯಲ್ಲಿ ರಂಗ ಪಠ್ಯಗಳಾದ ಜಾಗತಿಕ ರಂಗಭೂಮಿ, ಭರತನ ನಾಟ್ಯಶಾಸ್ತ್ರ, ಭಾರತೀಯ ರಂಗಭೂಮಿ, ಅಭಿನಯ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ತರಗತಿಗಳಾದ ನಾಟಕ ಪ್ರಕಾರಗಳು ಮತ್ತು ರಚನೆ, ನಿರ್ದೇಶನ ಮತ್ತು ರಂಗ ತರಬೇತಿ ಮತ್ತು ನೇಪಥ್ಯ ವಿಚಾರಗಳ ಕುರಿತು ತರಬೇತಿ ನೀಡಲಾಗುವುದು.
ಮುಂದಿನ ವರ್ಷದಿಂದ ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಒಂದು ವರ್ಷದ ರಂಗಶಿಕ್ಷಣ ಕೋರ್ಸ್ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಪ್ರವೇಶಕ್ಕೆ ಬೇಕಾದ ಅರ್ಹತೆ
ರಂಗಶಿಕ್ಷಣಕ್ಕೆ ಸೇರ ಬಯಸುವ ಅಭ್ಯರ್ಥಿಗಳು ಕನಿಷ್ಠ ಪಿಯುಸಿ/ ತತ್ಸಮಾನ ತೇರ್ಗಡೆಯಾಗಿರಬೇಕು. 18 ರಿಂದ 35 ವರ್ಷ ಒಳಗಿರಬೇಕು. ಕೋರ್ಸಿನ ತರಬೇತಿ ಅವಧಿ ಸಂಜೆ 5.30ರಿಂದ ರಾತ್ರಿ 8ರ ವರೆಗೆ ಇರಲಿದೆ.
ವಾರದಲ್ಲಿ ನಾಲ್ಕು ದಿನ ಕಟೀಲು ಅಶೋಕ ಪೈ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. 30 ಮಂದಿಗೆ ಪ್ರವೇಶಕ್ಕೆ ಅವಕಾಶವಿದ್ದು, ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ನಮೂನೆ ರಂಗಾಯಣ ಮತ್ತು ಕಾಲೇಜಿನಲ್ಲಿ ಲಭ್ಯವಿದೆ. ಅರ್ಜಿಯೊಂದಿಗೆ ಶೈಕ್ಷಣಿಕ ಅಂಕಪಟ್ಟಿಯ ಪ್ರತಿ, ಪಾರ್ಸ್ ಪೋರ್ಟ್ ಅಳತೆಯ 4 ಭಾವಚಿತ್ರ ಮತ್ತು ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು ಎಂದರು.
ಮಾಧ್ಯಮಗೋಷ್ಠಿಯಲ್ಲಿ ಕಟೀಲು ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಕಾವೇರಿ, ಉಪನ್ಯಾಸಕರಾದ ವಿಭಾ ಡೋಂಗ್ರೆ, ಮಂಜುನಾಥ ಸ್ವಾಮಿ, ರಂಗ ಸಮಾಜದ ಸದಸ್ಯ ಹಾಲಸ್ವಾಮಿ, ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಉಪಸ್ಥಿತರಿದ್ದರು.
https://www.suddikanaja.com/2021/03/20/creating-fraud-certificate-accused-arrested/