ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಶಿವಮೊಗ್ಗ ನಿವಾಸಿಗಳಾದ ಅಮ್ಮ ಮತ್ತು ಮಗಳು ಸೇರಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಮೋಸ ಮಾಡಿರುವ ಪ್ರಕರಣ ಠಾಣೆ ಮೆಟ್ಟಿಲೇರಿದೆ.
ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಮತ್ತು ಆಕೆಯ ಅಮ್ಮ ಪರಿಚಯವಾಗಿದ್ದಾರೆ. ರಾಷ್ಟ್ರೀಯ ಬ್ಯಾಂಕ್ ವೊಂದರಲ್ಲಿ ಸಾಲ ನೀಡುವ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಜೊತೆಗೆ, ಶಿವಮೊಗ್ಗದ ವಿನೋಬನಗರದಲ್ಲಿ ಬಂಗಲೆ, ಕಾರು, ಸಾಗರದಲ್ಲಿ ಎರಡು ರೈಸ್ ಮಿಲ್ ಇರುವುದಾಗಿ ಹೇಳಿಕೊಂಡಿದ್ದಾರೆ.
2021ರ ಜನವರಿ 15ರಂದು ಯುವತಿಯು ಬೆಂಗಳೂರಿನ (ಮೋಸ ಹೋದವರು) ವ್ಯಕ್ತಿಗೆ ಕರೆ ಮಾಡಿ ‘ತಾನು ಹುಬ್ಬಳ್ಳಿಯಲ್ಲಿದ್ದು, ಪರ್ಸ್ ಕಳೆದುಹೋಗಿದೆ. ತಂದೆಯ ಚಿಕಿತ್ಸೆಗೆ ಹಣ ಬೇಕಾಗಿದೆ. ಆದರೆ, ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದು ಅದನ್ನು ಚಾಲ್ತಿ ಮಾಡಲು ಹಣದ ಅಗತ್ಯವಿದೆ. ಹೀಗೆ ನಾನಾ ಕಾರಣಗಳನ್ನು ನೀಡಿ ಯುವತಿ ಹಾಗೂ ಆಕೆ ತಾಯಿಯ ಖಾತೆ ಸೇರಿ ಒಟ್ಟು ₹12,40,000 ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
READ | ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿದ್ದು ಭದ್ರಾವತಿಯಲ್ಲಿ, ಶಿವಮೊಗ್ಗದಲ್ಲಿ ಆರೆಂಜ್ ಅಲರ್ಟ್
ಹಣ ವಾಪಸ್ ಕೇಳಿದ್ದಕ್ಕೆ ಮದುವೆಯಾಗು ಎಂದಳು!
ಹಣ ವಾಪಸ್ ನೀಡುವಂತೆ ಕೇಳಿದಾಗ ಯುವತಿಯು ತನಗೆ ಮದುವೆಯಾಗುವಂತೆ ಹೇಳಿದ್ದಾಳೆ. ಇದನ್ನು ನಿರಾಕರಿಸಿದ ವ್ಯಕ್ತಿಯು ಹಣ ವಾಪಸ್ ನೀಡುವ ಬಗ್ಗೆ ಪರಸ್ಪರ ಬರವಣಿಗೆಯಲ್ಲಿ ಒಪ್ಪಂದ ಮಾಡಿಕೊಂಡಿದ್ದಾರೆ. ನಂತರ ₹ 3.10 ಲಕ್ಷ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಇನ್ನುಳಿದ ₹ 9.30 ಲಕ್ಷ ಕೇಳಿದ್ದಕ್ಕೆ ಯುವತಿಯು ತಮ್ಮ ಕಾರನ್ನು ಬೇಕಿದ್ದರೆ ತೆಗೆದುಕೊಳ್ಳಿ ಎಂದು ತಿಳಿಸಿದ್ದಾಳೆ. ಹಣವನ್ನೇ ನೀಡುವಂತೆ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://www.suddikanaja.com/2021/10/24/police-filed-sumoto-case-in-tunga-nagara-police-station-against-rowdysheeter/