ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಆರೋಪ, ಪ್ರತ್ಯಾರೋಪ, ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟಿದ್ದ ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಿಂದಿನ ಕಾರಣಗಳನ್ನು ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಬಿಚ್ಚಿಟ್ಟಿದ್ದಾರೆ.
ಬುಧವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಡಿ.ಎಸ್.ಅರುಣ್ ಜಯಗಳಿಸಿದ್ದಾರೆ. ಇದರ ಹಿಂದೆ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿಶೇಷವಾಗಿ ಪಕ್ಷದ ಕಾರ್ಯಕರ್ತರ ಶ್ರಮವಿದೆ. ಒಗ್ಗಟ್ಟಿನಿಂದಾಗಿಯೇ ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ ಎಂದು ಹೇಳಿದರು.
READ | ನಾಳೆ ಶಿವಮೊಗ್ಗದ ಬಟ್ಟೆ ಅಂಗಡಿಗಳು ಬಂದ್, ಕಾರಣವೇನು?
ಬಿಜೆಪಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗಿಂದ ಮತದಾರರ ಬಗ್ಗೆ ನಿಖರ ಅಂಕಿ ಅಂಶ ಹೊಂದಿತ್ತು. ಆದರೆ, ಕಾಂಗ್ರೆಸ್ ನವರು ಸುಳ್ಳು ಅಂಕಿ ಅಂಶ ನೀಡಿ ಗೊಂದಲ ಸೃಷ್ಟಿಗೆ ಯತ್ನಿಸಿದ್ದರು. ಆದರೆ, ಅದ್ಯಾವುದೂ ಕೆಲಸ ಮಾಡಿಲ್ಲ ಎಂದು ಹೇಳಿದರು.
ವಿಪಕ್ಷಗಳ ಹಗಲು ಕನಸು ಈಡೇರಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
ಪಂಚಾಯಿತಿ ಸಮಸ್ಯೆಗಳ ಬಗ್ಗೆ ಅರಿವಿದೆ, ಅವುಗಳಿಗೆ ಸ್ಪಂದಿಸುವೆ
ವಿಧಾನ ಪರಿಷತ್ ನೂತನ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಚುನಾವಣೆ ಪ್ರಚಾರ ವೇಳೆಯೇ ಗ್ರಾಮ ಪಂಚಾಯಿತಿ ಸಮಸ್ಯೆಗಳು ಗಮನಕ್ಕೆ ಬಂದಿವೆ. ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹಾಗೂ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಪಕ್ಷದ ನಾಯಕರೊಂದಿಗೆ ಚರ್ಚಿಸಿ ಕ್ರಮಕ್ಕೆ ಮುಂದಾಗುವುದಾಗಿ ಭರವಸೆ ನೀಡಿದರು.
READ | ಲಕ್ಕಿ ಡ್ರಾ ನಂಬುವ ಮುನ್ನ ಹುಷಾರ್, ಬಹುಮಾನದ ಹೆಸರಿನಲ್ಲಿ ಸಾವಿರಾರು ರೂಪಾಯಿ ಮೋಸ
ಗ್ರಾಪಂ ಸದಸ್ಯರಲ್ಲಿ ಬಹುತೇಕರು ಪಕ್ಷದ ನಾನಾ ಸ್ತರಗಳಲ್ಲಿ ಕೆಲಸ ಮಾಡಿದವರೇ ಆಗಿದ್ದರು. ಹೀಗಾಗಿ, ತಾವೇ ಕಣದಲ್ಲಿದ್ದೇವೆಂದು ಭಾವಿಸಿ ಮತ ನೀಡಿ, ಬೆಂಬಲ ನೀಡಿದ್ದಾರೆ ಎಂದು ಹೇಳಿದರು.
ಚುನಾವಣೆ ಘೋಷಣೆ ಬಳಿಕ ಪಕ್ಷದ ಕಾರ್ಯಕರ್ತರ ಪಡೆ ಕಣವನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಪಕ್ಷದ ಹಿರಿಯ ನಾಯಕರು ಅವಿರತ ಶ್ರಮಿಸಿದ್ದಾರೆ ಎಂದರು.
ಪಕ್ಷದ ಮುಖಂಡರಾದ ಎಸ್.ಎನ್. ಚನ್ನಬಸಪ್ಪ, ಬಿ.ಕೆ. ಶ್ರೀನಾಥ್, ಶಿವರಾಜ್, ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಎಸ್.ರಮೇಶ್, ವಾಗೀಶ್, ಹೃಷಿಕೇಶ್ ಪೈ, ಎನ್.ಡಿ. ಸತೀಶ್, ಗೀತಾ, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.
https://www.suddikanaja.com/2021/12/14/bjp-candidate-ds-arun-won-by-a-margin-of-344-votes-in-the-mlc-election/