ಸುದ್ದಿ ಕಣಜ.ಕಾಂ | DISTRICT | WATER SUPPLY
ಶಿವಮೊಗ್ಗ: ನಗರದ ಹೊರವಲಯಗಳಿಗೆ ನಿರಂತರ ಒತ್ತಡಯುಕ್ತ ಕುಡಿಯುವ ನೀರು ಯೋಜನೆ ಮತ್ತು ನಗರದ 24/7 ಕುಡಿಯುವ ನೀರು ಯೋಜನೆಗಳಿಂದಾಗಿ ಮುಂದಿನ ವರ್ಷದೊಳಗೆ ಈ ಪ್ರದೇಶಗಳಲ್ಲಿ ಪ್ರತಿ ಮನೆ ಮನೆಗೆ ನಿರಂತರವಾಗಿ ಕುಡಿಯುವ ನೀರು ಸಿಗಲಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಾಲಿಕೆ ವ್ಯಾಪ್ತಿಯ ಹೊರವಲಯದ ವಾರ್ಡ್ ಪ್ರದೇಶಗಳು ಅಭಿವೃದ್ದಿ ಹೊಂದುತ್ತಿವೆ. ಈ ಭಾಗದ ವಸತಿ ಪ್ರದೇಶಗಳಿಗೆ ನೀರು ಪೂರೈಕೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವರು, ನಗರಾಭಿವೃದ್ದಿ ಸಚಿವರಿಗೆ ಈ ಭಾಗದಲ್ಲಿ 24/7 ಒತ್ತಡಯುಕ್ತ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಲು ಕೋರಿದ್ದರು. ನಗರಾಭಿವೃದ್ದಿ ಸಚಿವರ ಸೂಚನೆಯಂತೆ ಈ ಪ್ರದೇಶದಲ್ಲಿ ಬರುವ 11 ಟ್ಯಾಂಕ್ ಜೋನ್ ನಲ್ಲಿ ಅವಶ್ಯವಿರುವ 325 ಕಿ.ಮೀ ವಿತರಣಾ ಕೊಳವೆ ಮಾರ್ಗ ಮತ್ತು 11 ಸಾವಿರ ಮೀಟರ್ ಸಹಿತ ಗೃಹಸಂಪರ್ಕಕ್ಕಾಗಿ 96.50 ಕೋಟಿ ರೂ.ಯೋಜನೆ ಅನುಮೋದನೆಗೊಂಡಿರುತ್ತದೆ.
– ಚಿದಾನಂದ್ ವಟಾರೆ, ಮಹಾನಗರ ಪಾಲಿಕೆ ಆಯುಕ್ತ
ಮಾರ್ಚ್ ಒಳಗೆ 27/7 ನೀರು
ಮುಂಬರುವ ಮಾರ್ಚ್ ಒಳಗೆ ನಗರದಲ್ಲಿ ಪ್ರಗತಿಯಲ್ಲಿರುವ 24/7 ಕುಡಿಯುವ ನೀರು ಸರಬರಾಜು ಯೋಜನೆ ಕೂಡ ಪೂರ್ಣಗೊಳ್ಳಲಿದೆ. ಇನ್ನು ಒಂದು ವರ್ಷದಲ್ಲಿ ಈ ಕಾಮಗಾರಿಯನ್ನೂ ಸಹ ಮುಗಿಸಬೇಕು. ಇದಕ್ಕಾಗಿ ಕಂಟ್ರಾಕ್ಟರ್ ಗಳಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಇನ್ನೊಂದು ವರ್ಷದಲ್ಲಿ ಎರಡೂ ಕಾಮಗಾರಿಗಳು ಪೂರ್ಣಗೊಂಡು ನಗರದ ಎಲ್ಲ ಮನೆಗಳಿಗೆ ಕುಡಿಯುವ ನೀರು ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಅವರ ಟಾಪ್ 4 ಪಾಯಿಂಟ್
- ನಗರದ ಹೊರವಲಯದಲ್ಲಿರುವ ವಿರುಪಿನಕೊಪ್ಪ ಮಂಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಅಧ್ಯಕ್ಷರ ಗಮನಕ್ಕೆ ತರಲಾಗಿ, ನೀರು ಸರಬರಾಜು ಕಾಮಗಾರಿಗೆ ಅವರು ರೂ.4 ಕೋಟಿಯನ್ನು ಘೋಷಿಸಿದ್ದಾರೆ.
- ಗೋವಿಂದಪುರದಲ್ಲಿ ಆಶ್ರಯ ಮನೆ ಕಾಮಗಾರಿ ಪ್ರಗತಿಯಲ್ಲಿದ್ದು ಆಗಸ್ಟ್ ವೇಳೆಗೆ 1,600 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗುವುದು. ಇದು ಗ್ರಾಮೀಣ ಭಾಗಕ್ಕೆ ಸೇರಿದ್ದು ಗ್ರಾಭೀಣಾಭಿವೃದ್ದಿ ಇಲಾಖೆಯಿಂದ ನೀರಿನ ವ್ಯವಸ್ಥೆ ಕಲ್ಪಿಸಲು 16 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ.
- ಗೋಪಿಶೆಟ್ಟಿಕೊಪ್ಪ ನಗರ ವ್ಯಾಪ್ತಿಗೆ ಸೇರಿದ್ದು ಇಲ್ಲಿ ಸಹ ಫಲಾನುಭವಿಗಳಿಗೆ ಆಶ್ರಯ ಮನೆ ಮಂಜೂರಾತಿ ಪತ್ರ ನೀಡಿದ್ದೇವೆ. ಮನೆ ಕಟ್ಟಲು ಆರಂಭಿಸಿದರೆ ನೀರು ಬೇಕಾಗುತ್ತದೆ. ಈ ಹಿನ್ನಲೆಯಲ್ಲಿ ಸುಮಾರು 10 ಕೋಟಿ ರೂ. ಅನ್ನು ಅಧ್ಯಕ್ಷರು ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
- ಶಿವಮೊಗ್ಗ ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಸಂಸದರು, ಶಾಸಕರ ನೇತೃತ್ವದಲ್ಲಿ ನಗರದಲ್ಲಿ ಅನೇಕ ಅಭಿವೃದ್ದಿ ಕೆಲಸಗಳಾಗುತ್ತಿವೆ. ಪ್ರಸ್ತುತ ಈ ಯೋಜನೆಯಿಂದ ನಗರ ಹೊರವಲಯದ ಪ್ರದೇಶಗಳಿಗೆ 2035 ನೇ ಸಾಲಿನವರೆಗೆ ನಿರಂತರವಾಗಿ ಕುಡಿಯುವ ನೀರು ದೊರಕಲಿದೆ. ವಿರುಪಿನಕೊಪ್ಪದ ಕುಡಿಯುವ ನೀರಿನ ಯೋಜನೆಗೆ ಕೂಡ ಈ ಯೋಜನೆಯಡಿಯೇ ವ್ಯವಸ್ಥೆ ಮಾಡಲಾಗುವುದು. ಗುಣಮಟ್ಟದ ಕೆಲಸ ಆಗಬೇಕು. ಹಾಗೂ ಪ್ರತಿ ಮನೆಗೆ ಒಂದು ವರ್ಷದಲ್ಲಿ ನೀರು ಸರಬರಾಜಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಎಂಎಲ್.ಸಿ ಡಿ.ಎಸ್.ಅರುಣ್, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ, ಪಾಲಿಕೆ ಸದಸ್ಯರಾದ ಸುವರ್ಣ ಶಂಕರ್, ಯಮುನಾ ರಂಗೇಗೌಡ, ಎಚ್.ಸಿ.ಯೋಗೇಶ್ ಉಪಸ್ಥಿತರಿದ್ದರು.
https://www.suddikanaja.com/2020/11/14/short-circuit-in-mandli-feeder-kptcl/