ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ನಗರದ ಡಿಎಆರ್ ಮೈದಾನದಲ್ಲಿ ಶನಿವಾರ ನಿಶ್ಚಲ ಕಡತವುಳ್ಳ ರೌಡಿ ಹಾಳೆಯಲ್ಲಿರುವವರನ್ನು ಕರೆದು ಅವರೊಂದಿಗೆ ಸಭೆ ನಡೆಸಲಾಯಿತು.
ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದವರ ವಿರುದ್ಧ ಈ ಹಿಂದೆ ರೌಡಿ ಹಾಳೆಗಳನ್ನು ತೆರೆದು ಅವರುಗಳ ಮೇಲೆ ಪೊಲೀಸ್ ಇಲಾಖೆಯಿಂದ ಸೂಕ್ತ ನಿಗಾವಹಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತಿದೆ.
ಶಿವಮೊಗ್ಗ, ಭದ್ರಾವತಿ, ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ ಉಪ ವಿಭಾಗಗಳಲ್ಲಿ ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರ ನೇತೃತ್ವದಲ್ಲಿ ಹಲವು ವರ್ಷಗಳಿಂದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗದೇ ಸುಧಾರಣೆಗೊಂಡಿರುವ ರೌಡಿಶೀಟರ್ ಗಳನ್ನು ಕರೆದು ಎಸ್.ಪಿ ಲಕ್ಷ್ಮೀಪ್ರಸಾದ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಗುಣನಡೆತೆಯ ಆಧಾರದ ಮೇಲೆ ಅವರುಗಳ ಮೇಲೆ ಈ ಹಿಂದೆ ತೆರೆಯಲಾದ ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದ್ದು, ಈ ಬಗ್ಗೆ ಅವರುಗಳಿಗೆ ತಿಳಿವಳಿಕೆ ನೀಡಲಾಯಿತು. ಇನ್ನು ಮುಂದೆಯೂ ಯಾವುದೇ ರೀತಿಯ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗದೇ ಸಮಾಜದಲ್ಲಿ ಉತ್ತಮ ಗುಣನಡತೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಸೂಚನೆ ನೀಡಲಾಯಿತು.
ಜವಾಬ್ದಾರಿಯುತ ಪ್ರಜೆಯಾಗಿ ಜೀವನ ನಡೆಸಿ ಪೊಲೀಸ್ ಇಲಾಖೆ ಜೊತೆ ಸಹಕರಿಸುವಂತೆ ಲಕ್ಷ್ಮೀಪ್ರಸಾದ್ ಹೇಳಿದರು.
1,423 ರೌಡಿ ಹಾಳೆ ತಾತ್ಕಾಲಿಕ ಮುಕ್ತಾಯ
ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 1,423 ರೌಡಿ ಹಾಳೆಗಳನ್ನು ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾಗಿದ್ದು, ಹಾಲಿ 1,378 ರೌಡಿ ಹಾಳೆಗಳು ಚಾಲ್ತಿಯಲ್ಲಿರುತ್ತವೆ. ಇದರಲ್ಲಿ ಈ ದಿನ 427 ರೌಡಿ ಆಸಾಮಿಗಳಿಗೆ ತಿಳಿವಳಿಕೆ ನೀಡಲಾಯಿತು.
https://www.suddikanaja.com/2020/11/12/rowdy-murder-case-two-person-arrested-in-shivamogga/