ಸುದ್ದಿ ಕಣಜ.ಕಾಂ | DISTRICT | SCIENCE CENTER
ಶಿವಮೊಗ್ಗ: ಶಿವಮೊಗ್ಗ: ನಗರದ ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಮೀಪದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಪ್ರವಾಸಿ ಮಂದಿರ ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿಮಾತನಾಡಿದ ಸಂಸದರು, ಕ್ಯಾಟಗೆರಿ 2ರ ಕೇಂದ್ರ ಇದಾಗಲಿದ್ದು, ಈ ಭಾಗದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಕೇಂದ್ರ ಸಹಕಾರಿಯಾಗಲಿದೆ ಎಂದು ಹೇಳಿದರು.
READ | ಕಾರಣಗಿರಿ ಸೇತುವೆ ಕಾಮಗಾರಿಗೆ ರಾಜ್ಯ ಬಜೆಟ್ನಲ್ಲಿ 18 ಕೋಟಿ ರೂ. ಅನುದಾನಕ್ಕೆ ಗ್ರೀನ್ ಸಿಗ್ನಲ್
ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ
ಮಾಧ್ಯಮಗೋಷ್ಠಿ ನಂತರ ಉದ್ದೇಶಿತ ವಿಜ್ಞಾನ ಕೇಂದ್ರದ ಜಾಗಕ್ಕೆ ತಂಡದೊಂದಿಗೆ ಭೇಟಿ ನೀಡಿದ ರಾಘವೇಂದ್ರ ಅವರು ಮಾತನಾಡಿದರು.
ಸಮುದಾಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಗರಕ್ಕೆ ಹತ್ತಿರದಲ್ಲಿ ಸ್ಥಳವನ್ನು ಗುರುತಿಸಿ, ದ್ವಿತೀಯ ಹಂತದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಆರಂಭಿಸಲು ಉದ್ಧೇಶಿಸಲಾಗಿದೆ ಎಂದು ಎಂದರು.
ಉದ್ಯಮ ಮತ್ತು ಮಾನವ ಅಭಿವೃದ್ಧಿಗಾಗಿ ಕೈಗೊಳ್ಳುವ ಎಲ್ಲ ಚಟುವಟಿಕೆಗಳಲ್ಲಿ ವಿಜ್ಞಾನವನ್ನು ಅನ್ವಯಗೊಳಿಸಲು, ವೈಜ್ಞಾನಿಕ ವiನೋಭಾವವನ್ನು ಬೆಳೆಸುವ ಹಿನ್ನೆಲೆಯಲ್ಲಿ ಹಾಗೂ ಜನಸಾಮಾನ್ಯರಲ್ಲಿ ಅದರ ಅರಿವನ್ನು ಉಳಿಸಿ ಬೆಳೆಸಲು ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಪ್ರದರ್ಶನಗಳು, ವಿಚಾರ ಸಂಕಿರಣಗಳು, ಉಪನ್ಯಾಸಗಳು, ವಿಜ್ಞಾನ ಶಿಬಿರಗಳು ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಜನರಲ್ಲಿ ವಿಜ್ಞಾನ ವಿಷಯಗಳಲ್ಲಿ ಅಭಿರುಚಿ ಉಂಟು ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ವಿಜ್ಞಾನ ಕೇಂದ್ರದಲ್ಲಿ ಏನೇನು ಇರಲಿದೆ?
ಉದ್ದೇಶಿತ ವಿಜ್ಞಾನ ಕೇಂದ್ರದಲ್ಲಿ ಶಾಲಾ-ಕಾಲೇಜುಗಳಲ್ಲಿ ನೀಡುವ ವಿಜ್ಞಾನ ಶಿಕ್ಷಣಕ್ಕೆ ಪೂರಕವಾಗಿ ವೈಜ್ಞಾನಿಕ ಮತ್ತು ಸೃಜನಶೀಲ ಚಿಂತನೆಯನ್ನು ಬೆಳೆಸಲು ಶಾಲೆಯಿಂದ ಹೊರಗೆ ಹಲವು ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುವಲ್ಲಿ ಈ ಕೇಂದ್ರ ಸಕ್ರಿಯವಾಗಿರಲಿದೆ. ಅಲ್ಲದೇ, ವಿಜ್ಞಾನ ಶಿಕ್ಷಣ ಮತ್ತು ಅದರ ಜನಪ್ರಿಯತೆಗಾಗಿ ವಿಜ್ಞಾನ ಸಂಗ್ರಹಾಲಯ, ಪ್ರದರ್ಶನ ಉಪಕರಣಗಳು ಮತ್ತು ವೈಜ್ಞಾನಿಕ ಬೋಧನಾ ಸಾಧನಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸುವಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.
ವಿಶೇಷವಾಗಿ ವಿಜ್ಞಾನ ಶಿಕ್ಷಕರು, ವಿದ್ಯಾರ್ಥಿಗಳು, ಯುವ ಉದ್ಯಮಿಗಳು, ತಂತ್ರಜ್ಞರು, ದೈಹಿಕ ವಿಕಲಚೇತನರು, ಗೃಹಣಿಯರು ಮತ್ತು ಆಸಕ್ತರಿಗಾಗಿ ಕೆಲವು ನಿರ್ದಿಷ್ಟ ವಿಷಯಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
READ | ಹಿಜಾಬ್ ವಿವಾದ, ಇಬ್ಬರು ಪುರಸಭೆ ಸದಸ್ಯ ಸೇರಿ 9 ಜನರ ವಿರುದ್ಧ ಎಫ್ಐಆರ್
15-20 ಕೋಟಿ ರೂ. ಬಿಡುಗಡೆ, ನಾಲ್ಕನೇ ಕೇಂದ್ರ
ಕೇಂದ್ರದ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಮೂಲಕ 15-20 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಿದೆ. ಮಂಗಳೂರು, ಧಾರವಾಡ, ಬೆಂಗಳೂರು ನಂತರ ಶಿವಮೊಗ್ಗ ರಾಜ್ಯದ ನಾಲ್ಕನೇ ವಿಜ್ಞಾನ ಕೇಂದ್ರವಾಗಿರಲಿದೆ. ಶಿವಮೊಗ್ಗ ಮತ್ತು ನೆರೆಯ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತ ನಾಗರಿಕರಿಗೆ ವಿಜ್ಞಾನದ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದು ರಾಘವೇಂದ್ರ ತಿಳಿಸಿದರು.
ತಜ್ಞರ ತಂಡ ಭೇಟಿ, ಪರಿಶೀಲನೆ
ಸ್ಥಳ ಪರಿಶೀಲನಾಗಿ ಆಗಮಿಸಿದ್ದ ತಜ್ಞರ ತಂಡದವರು ನವುಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿ.ಎಸ್.ಐ. ಆಸ್ಪತ್ರೆಗೆ ಹೊಂದಿಕೊಂಡಂತೆ ಗುರುತಿಸಲಾಗಿದ್ದ ನಿವೇಶನ ಮತ್ತು ಸಹ್ಯಾದ್ರಿ ಕಾಲೇಜಿನ ಆವರಣದ ಪ್ರದೇಶಗಳನ್ನು ವೀಕ್ಷಿಸಿ, ಭೂಮಿಗೆ ಸಂಬಂಧಿಸಿದಂತ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ತಂಡದಲ್ಲಿ ತಜ್ಞ ಎಸ್.ಕುಮಾರ್, ಕೊಲ್ಕತ್ತಾ, ಕೆ.ಎ.ಸಾಧನ ಬೆಂಗಳೂರು, ಎಸ್.ಸಿಕಾದಾರ್ ಕೊಲ್ಕತ್ತಾ, ಡಾ. ಎಂ.ಎಸ್.ರವಿಕುಮಾರ್, ವಿಶ್ವಕೀರ್ತಿ, ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ರಾಜ್ಯ ಉಪಾಧ್ಯಕ್ಷ ಎಸ್.ದತ್ತಾತ್ರಿ, ಸೂಡಾ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜ್ಯೋತಿಪ್ರಕಾಶ್, ಜಗದೀಶ್, ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧ, ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ, ಡಿಡಿಪಿಐ ಎನ್.ರಮೇಶ್, ಉಮಾಮಹೇಶ್ ಇಪಸ್ಥಿತರಿದ್ದರು.
https://www.suddikanaja.com/2022/02/10/indian-institute-of-science-bangalore-job-vacancies-2022-apply-for-technical-assistant-post/