ಸುದ್ದಿ ಕಣಜ.ಕಾಂ | CITY | ASHRAYA HOUSE
ಶಿವಮೊಗ್ಗ: ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಬೆಂಗಳೂರು ಇವರ ಆದೇಶದಂತೆ ಹಾಗೂ ಶಿವಮೊಗ್ಗ ನಗರ ಆಶ್ರಯ ಸಮಿತಿ ತೀರ್ಮಾನದಂತೆ ನಗರದ ಗೋಪಿಶೆಟ್ಟಿಕೊಪ್ಪ ಗ್ರಾಮದ ಒಟ್ಟು 19 ಎಕರೆ 23 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಮನೆಗಳನ್ನು ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಹೊಸದಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
shivamoggacitycorp.org ಜಾಲತಾಣದ Ashraya Yojane Application ಮೆನುವಿನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 24 ಪ್ರಾರಂಭದ ದಿನಾಂಕವಾಗಿದ್ದು, ಏಪ್ರಿಲ್ 30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಮೇ 7 ಬ್ಯಾಂಕ್ ಮೂಲಕ ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ.
READ | ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ರೈತರಿಗೆ ಶಿವರಾತ್ರಿ ಗಿಫ್ಟ್ ನೀಡಿದ ಶಿಮೂಲ್, ಒಕ್ಕೂಟ ಕೈಗೊಂಡ ತೀರ್ಮಾನಗಳೇನು?
ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು
- 18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. (ಪುರುಷ ಅಭ್ಯರ್ಥಿಯಾಗಿದ್ದಲ್ಲಿ ಮಾಜಿ ಸೈನಿಕ, ವಿಕಲಚೇತನ, ವಿಧುರ ಹಾಗೂ ಹಿರಿಯ ನಾಗರಿಕ ಅಭ್ಯರ್ಥಿಯಾಗಿರಬೇಕು).
- ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಿರಬೇಕು. ಬಿಪಿಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು.
- ಸ್ವಂತ ನಿವೇಶನ, ಮನೆಯನ್ನು ಹೊಂದಿರಬಾರದು. ಬೇರೆ ಯಾವುದೇ ಯೋಜನೆಯಡಿ ನಿವೇಶನ/ ವಸತಿ ಸೌಲಭ್ಯ ಪಡೆದಿರಬಾರದು. ಯಾವುದಾದರೂ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೆ ವಿವರ ನೀಡುವುದು.
- ಅರ್ಜಿದಾರರ ಹೆಸರಿನಲ್ಲಿ ಇರುವ ಇತ್ತೀಚಿನ ವಾರ್ಷಿಕ ಆದಾಯ ಪ್ರಮಾಣ ಪತ್ರ (₹86,700 ಗಳಿಗಿಂತ ಕಡಿಮೆ ಆದಾಯ) ಹೊಂದಿರಬೇಕು.
- ತೃತೀಯ ಲಿಂಗಿಗಳು (ಟ್ರಾನ್ಸ್ ಜೆಂಡರ್) ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ ಪಾವತಿ ಹೀಗೆ ಮಾಡಿ
ಸಾಮಾನ್ಯ ಪ್ರವರ್ಗ 1, 2(ಎ), 2(ಬಿ), 3(ಎ), 3(ಬಿ) ಗೆ ಸೇರಿದವರಿಗೆ ₹200 ಅರ್ಜಿ ಶುಲ್ಕ, ₹8,000 ಇಎಂಡಿ ಸೇರಿ ಒಟ್ಟು ₹8,200, ಪರಿಶಿಷ್ಟ ಜಾತಿ/ಪ.ಪಂಗಡಕ್ಕೆ ಸೇರಿದವರಿಗೆ ₹100 ಅರ್ಜಿ ಶುಲ್ಕ, ₹5,000 ಇಎಂಡಿ ಸೇರಿ ₹5,100 ಅನ್ನು ಶಿವಮೊಗ್ಗ ಕೆನರಾ ಬ್ಯಾಂಕ್ ಎಲ್ಲ ಶಾಖೆಗಳಲ್ಲಿ/ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ನ ಎಸ್.ಆರ್. ಶಾಖೆಗಳಲ್ಲಿ/ ಇಂಡಿಯನ್ ಬ್ಯಾಂಕ್ನ ಪಾಲಿಕೆ ಶಾಖೆ ಹಾಗೂ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದು ಅಥವಾ ಡೆಬಿಟ್ ಕಾರ್ಡ್ ಮೂಲಕ ಪಾವತಿಸತಕ್ಕದ್ದು.
READ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 2 ವರ್ಷದ ಪುಟಾಣಿ, ಸಾಧನೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಜನರೇಟೆಡ್ ಚಲನ್ ನೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿದ ಬ್ಯಾಂಕ್/ ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ನಗದನ್ನು ಪಾವತಿಸಿ ಸ್ವೀಕೃತಿ/ ರಸೀದಿ ಪಡೆದ ನಂತರವಷ್ಟೇ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದು.
ಮೀಸಲಾತಿ ಮತ್ತು ದಾಖಲೆ ವಿವರ
ಪರಿಶಿಷ್ಟ ಜಾತಿ ಶೇ.30, ಪರಿಶಿಷ್ಟ ಪಂಗಡ ಶೇ.10, ಅಲ್ಪಸಂಖ್ಯಾತರು ಶೇ.10, ಸಾಮಾನ್ಯ ವರ್ಗ ಶೇ.50 ಇದ್ದು ಅರ್ಜಿದಾರರು ಇತ್ತೀಚಿನ 1 ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಆಧಾರ್ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಪ.ಜಾತಿ/ ಪ.ಪಂ/ ವಿಕಲಚೇತನ/ಹಿರಿಯ ನಾಗರಿಕ/ ಮಾಜಿ ಸೈನಿ/ ಸೈನಿಕರ ವಿಧವೆಯರು/ ವಿಧುರರು/ ಸ್ವತಂತ್ರ ಯೋಧರು ಸಕ್ಷಮ ಪ್ರಾಧಿಕಾರದಿಂದ ಪಡೆದಂತಹ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿದಾರರ ಚಾಲ್ತಿಯಲ್ಲಿರುವ ಬ್ಯಾಂಕ್ ಪಾಸ್ ಬುಕ್, ವಾರ್ಷಿಕ ಆದಾಯ ಪ್ರಮಾಣ ಪತ್ರ(ಲಭ್ಯವಿದ್ದಲ್ಲಿ) ಹೊಂದಿರಬೇಕು.
ಈ ಎಲ್ಲ ಮೂಲ ದಾಖಲಾತಿ ಹಾಗೂ ದಾಖಲಾತಿಗಳ ಸಂಖ್ಯೆಯನ್ನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ವೇಳೆ ನೀಡಬೇಕು. ಅಪೂರ್ಣ ಮತ್ತು ತಪ್ಪು ಮಾಹಿತಿ ನೀಡಿದಲ್ಲಿ ಅರ್ಜಿದಾರರಿಗೆ ಯಾವುದೇ ತಿಳಿವಳಿಕೆ ನೀಡದೇ ಅರ್ಜಿ ತಿರಸ್ಕರಿಸಲಾಗುವುದು ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷರು ಹಾಗೂ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
https://www.suddikanaja.com/2021/03/30/dc-warning-to-return-disqualified-card/