ಸುದ್ದಿ ಕಣಜ.ಕಾಂ | KARNATAKA | EDUCATION CORNER
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆ (Computer literacy) ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸರ್ಕಾರ ಕಾಲಾವಕಾಶ ನೀಡಿದೆ. ಇದರಿಂದ ನೌಕರರಿಗೆ ಅನುಕೂಲವಾಗಲಿದೆ.
ಅರ್ಹ ರಾಜ್ಯ ಸರ್ಕಾರಿ ನೌಕರರು ಈ ಅವಧಿಯಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಿಯಮಾನುಸಾರ ಇಲಾಖಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಿಂದಿನ ಆದೇಶದ ಪ್ರಕಾರ ರಾಜ್ಯ ಸರ್ಕಾರಿ ನೌಕರರು ಪ್ರಸಕ್ತ ತಿಂಗಳಲ್ಲಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಬೇಕಾಗಿತ್ತು. ಈ ಅವಧಿಯನ್ನು ಸರ್ಕಾರ ವಿಸ್ತರಿಸಿ 2022ರ ಡಿಸೆಂಬರ್ ಮಾಸಾಂತ್ಯದವರೆಗೂ ವಿಸ್ತರಿಸಿ ಕಾಲಾವಕಾಶ ನೀಡಿದೆ. ಇದರಿಂದ ಇದುವರೆಗೆ ಕಂಪ್ಯೂಟರ್ ಪರೀಕ್ಷೆ ಉತ್ತೀರ್ಣರಾಗದಿರುವ ನೌಕರರಿಗೆ ಮತ್ತೊಂದು ಅವಕಾಶ ದೊರೆತಂತಾಗಿದೆ ಎಂದು ತಿಳಿಸಿದ್ದಾರೆ.
ಮನವಿಯನ್ನು ಪುರಸ್ಕರಿಸಿ ರಾಜ್ಯ ಸರ್ಕಾರ
ರಾಜ್ಯ ಸರ್ಕಾರಿ ನೌಕರರು ವೇತನ ಬಡ್ತಿ, ಪದೋನ್ನತಿ, ಪ್ರೊಬೇಷನರಿ ಅವಧಿ ಘೋಷಣೆ ಸೇರಿದಂತೆ ಅನೇಕ ಸವಲತ್ತುಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣರಾಗಬೇಕಾದ್ದು ಕಡ್ಡಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೊರೊನಾ, ಪ್ರಕೃತಿ ವಿಕೋಪ ಮುಂತಾದ ಕಾರಣಗಳಿಂದಾಗಿ ನೌಕರರು ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಅವಧಿ ವಿಸ್ತರಿಸುವಂತೆ ಕೋರಲಾಗಿತ್ತು. ಇದನ್ನು ಪುರಸ್ಕರಿಸಿ ಅವಧಿಯನ್ನು ವಿಸ್ತಿರಿಸಿದೆ. ಅದಕ್ಕಾಗಿ ಸಂಘವು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.
ಗಣಕೀಕರಣ ಶೀಘ್ರದಲ್ಲೇ ಕಾರ್ಯರೂಪಕ್ಕೆ
ರಾಜ್ಯ ಸರ್ಕಾರಿ ವಿಮಾ ಇಲಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಆನ್ಲೈನ್ ಮೂಲಕ ಸಾಲ ಸೌಲಭ್ಯ, ಬೋನಸ್, ಹೊಸ ಪಾಲಿಸಿ ವಿತರಣೆ, ವಿತರಣೆ ಹಾಗೂ ಅಂತಿಮ ಕ್ಲೈಮುಗಳನ್ನು ಪಾವತಿಸುವ ವಿಧಾನವನ್ನು ಜಾರಿಗೊಳಿಸುವಂತೆ ಖಜಾನೆ ಆಯುಕ್ತ ಹಾಗೂ ಗಣಕೀಕರಣದ ನೋಡಲ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರಿಗೆ ಮನವಿ ಮಾಡಲಾಗಿದ್ದು, ನಿಗದಿತ ಕಾಲಾವಧಿಯಲ್ಲಿ ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ.
ಈ ಸಂಬಂಧ ಈಗಾಗಲೇ ಇ-ಗೌವರ್’ನೆನ್ಸ್ ಇಲಾಖೆಯ ಕಾರ್ಯದರ್ಶಿ ಪೊನ್ನರಾಜ್ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಕೆ.ಜಿ.ಐ.ಡಿ ಇಲಾಖೆಯ ಗಣಕೀಕರಣ ಕಾರ್ಯಕ್ಕೆ ಪೂರಕವಾಗಿ ಸಿ.ಎಸ್.ಜಿ. ಸಂಸ್ಥೆಯವರು ಸಾಫ್ಟ್ ವೇರ್ ಅಭಿವೃದ್ಧಿಪಡಿಸಿ, ಅವಶ್ಯಕ ಸೌಲಭ್ಯಗಳನ್ನು ಕಾಲಮಿತಿಯೊಳಗಾಗಿ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.