ಸುದ್ದಿ ಕಣಜ.ಕಾಂ | KARNATAKA | SHIVAMOGGA AIRPORT
ಶಿವಮೊಗ್ಗ: ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಸಾಲು ಸಾಲು ಹೆಸರುಗಳು ಕೇಳಿಬರುತ್ತಿವೆ. ಕೆಲವರು ನಿಕಟ ಪೂರ್ವ ಬಿ.ಎಸ್.ಯಡಿಯೂರಪ್ಪ ಅವರ ಪರ ಬ್ಯಾಟಿಂಗ್ ಮಾಡಿದರೆ, ಕುವೆಂಪು ಹೆಸರನ್ನು ಹಲವರು ಸೂಚಿಸುತ್ತಿದ್ದಾರೆ. ಈ ಕಾರಣಕ್ಕಾಗಿ ‘ಸುದ್ದಿ ಕಣಜ’ ಪೋಲ್ ಮೂಲಕ ಓದುಗರ ಅಭಿಮತಕ್ಕೆ ವೇದಿಕೆಯನ್ನು ಕಲ್ಪಿಸಿತ್ತು. ಸಾಕಷ್ಟು ಜನರು ತಮ್ಮ ಅಭಿಮತವನ್ನು ತಿಳಿಸಿದ್ದಾರೆ.
ವಿಮಾನ ನಿಲ್ದಾಣಕ್ಕೆ ಯಾರ ಹೆಸರಿಡಬೇಕು ಎನ್ನುವ ವಿಚಾರವಾಗಿ ಸುದ್ದಿ ಕಣಜ ಫೇಸ್ಬುಕ್ ಗ್ರೂಪ್’ನಲ್ಲಿ ಪೋಲ್ ಸೃಷ್ಟಿಸಲಾಗಿತ್ತು. ಭಾರಿ ಪ್ರಮಾಣದಲ್ಲಿ ಕೇಳಿಬರುತ್ತಿರುವ ಒಟ್ಟು 13 ಹೆಸರುಗಳನ್ನು ಆಯ್ಕೆಯಲ್ಲಿ ನೀಡಲಾಗಿತ್ತು. ಕೊನೆಯದಾಗಿ ಇತರೆ ಆಯ್ಕೆಯೂ ನಮೂದಿಸಲಾಗಿತ್ತು.
ಒಟ್ಟು 293 ಓದುಗರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಅದರಲ್ಲಿ ಕುವೆಂಪು ಅವರ ಪರವಾಗಿ 181, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 47, ಕೆಳದಿ ಶಿವಪ್ಪ ನಾಯಕ 30, ಸರ್ ಎಂ.ವಿಶ್ವೇಶ್ವರಯ್ಯ, 8, ಎಸ್.ಬಂಗಾರಪ್ಪ 7, ಜಗಜ್ಯೋತಿ ಬಸವಣ್ಣ 5, ಮಲೆನಾಡು 5, ಶಿವಮೊಗ್ಗ 5, ಸಹ್ಯಾದ್ರಿ 2, ಇತರೆ 2, ಶಾಂತವೇರಿ ಗೋಪಾಲಗೌಡ 1, ಅಕ್ಕಮಹಾದೇವಿ 1, ಸೋಗಾನೆ 1 ಇದರೊಂದಿಗೆ ಹಲವರು ಕಮೆಂಟ್ ಕೂಡ ಮಾಡಿದ್ದು, ಅದರಲ್ಲಿ ಕೊಡಚಾದ್ರಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರು ಇಡುವಂತೆ ಸೂಚಿಸಲಾಗಿದೆ.