ಸುದ್ದಿ ಕಣಜ.ಕಾಂ | DISTRICT | FORTIFIED RICE
ಶಿವಮೊಗ್ಗ: ಜಿಲ್ಲೆಯ 571 ನ್ಯಾಯಬೆಲೆ ಅಂಗಡಿಗಳ ಮೂಲಕ ಎಲ್ಲ ಪಡಿತರದಾರರಿಗೆ ಪ್ರಸಕ್ತ ತಿಂಗಳಂದಲೇ ಸಾರವರ್ಧಿತ ಅಕ್ಕಿ (fortified rice) ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.
ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ನರೇಂದ್ರ ಮೋದಿಯವರು 75ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ತಮ್ಮ ಭಾಷಣದಲ್ಲಿ ಘೋಷಿಸಿದಂತೆ ಈ ಬಲವರ್ಧಿತ ಅಕ್ಕಿಯನ್ನು ಶಿವಮೊಗ್ಗ ಸೇರಿದಂತೆ ರಾಜ್ಯದ ಆಯ್ದ 14 ಜಿಲ್ಲೆಗಳಲ್ಲಿ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಟಿಕಾಂಶವನ್ನು ಒದಗಿಸುವ ಹಾಗೂ ಮಹಿಳೆಯರು, ಮಕ್ಕಳು ಹಾಗೂ ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆ ಮತ್ತು ಅವರ ಬೆಳವಣಿಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಈ ಬಲವರ್ಧಿತ ಅಕ್ಕಿ ಸಹಕಾರಿಯಾಗಲಿದೆ. ಈಗಾಗಲೇ ಸರ್ಕಾರದ ಎಲ್ಲ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಅಂಗನವಾಡಿ ಮಕ್ಕಳಿಗಾಗಿ ಇರುವ ಯೋಜನೆಗಳಲ್ಲಿ ಈ ಅಕ್ಕಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
READ | ಬಿಜೆಪಿ ಮುಖಂಡ ಭಾನುಪ್ರಕಾಶ್ ಪುತ್ರನಿದ್ದ ಕಾರಿನ ಮೇಲೆ ಅಟ್ಯಾಕ್, ಕೆಲಹೊತ್ತು ಉದ್ವಿಗ್ನ ಸ್ಥಿತಿ
ಎಷ್ಟು ಕೆಜಿಗೆ ಎಷ್ಟು ಬಲವರ್ಧಿತ ಅಕ್ಕಿ ಮಿಶ್ರಣ?
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಅಕ್ಕಿಯಲ್ಲಿ ಬಲವರ್ಧಿತ ಅಕ್ಕಿಯನ್ನು ಬೆರೆಸಿ ವಿತರಿಸಲಾಗುತ್ತದೆ. ಒಂದು ಕ್ವಿಂಟಾಲ್ ಅಕ್ಕಿಯಲ್ಲಿ ಒಂದು ಕೆ.ಜಿ. ಸಾರವರ್ಧಿತ ಅಕ್ಕಿಯನ್ನು ಬೆರೆಸಲಾಗಿರುತ್ತದೆ. ವೈಜ್ಞಾನಿಕ ವಿಧಾನಗಳಿಂದ ಬೆರೆಸಿ ವಿತರಿಸಲಾಗುವ ಈ ಅಕ್ಕಿಯನ್ನು ಗ್ರಾಹಕರು ಅನುಮಾನ, ಸಂಶಯದಿಂದ ನೋಡುವ ಅಗತ್ಯವಿಲ್ಲ. ಇದನ್ನು ಆಹಾರ ಗುಣಮಟ್ಟ ನಿಯಂತ್ರಣ ಇಲಾಖೆಯಿಂದ ದೃಢೀಕರಿಸಲಾಗಿದೆ ಎಂದು ತಿಳಿಸಿದರು.
ಈ ಅಕ್ಕಿಯ ವಿಶೇಷತೆಗಳೇನು?
ಈ ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣಾಂಶ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ-12, ಜಿಂಕ್, ವಿಟಮಿನ್-ಎ, ವಿಟಮಿನ್ ಬಿ-2, ವಿಟಮಿನ್ಬಿ-3, ವಿಟಮಿನ್ ಬಿ-6 ಮತ್ತಿತರ ಪೋಷಕಾಂಶಗಳನ್ನು ಸೇರ್ಪಡೆಗೊಳಿಸಲಾಗಿದೆ. ಈ ಬಲವರ್ಧಿತ ಅಕ್ಕಿಯು ಸಾಮಾನ್ಯ ಅಕ್ಕಿಯಂತೆಯೇ ಕಾಣಲಿದೆ. ಬೇಯಿಸುವ ಅಕ್ಕಿಯೊಂದಿಗೆ ಇದು ಬೆರೆತು ಹೋಗಲಿದೆ. ಬೆರೆತ ಅಕ್ಕಿಯಲ್ಲಿ ಯಾವುದೇ ಅಂತರ ಕಂಡುಬರಲಾರದು. ಈ ಅಕ್ಕಿಯಲ್ಲಿ ಯಾವುದೇ ಅಡ್ಡವಾಸನೆ, ಬಣ್ಣ ಮತ್ತು ರುಚಿಯಲ್ಲಿ ವ್ಯತ್ಯಾಸ ಕಂಡುಬರುವುದಿಲ್ಲ ಎಂದರು.
4,91,949 ಪಡಿತರ ಚೀಟಿದಾರರಿಗೆ ಬಲವರ್ಧಿತ ಅಕ್ಕಿ
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 571 ನ್ಯಾಯಬೆಲೆ ಅಂಗಡಿಗಳಿದ್ದು, ಅವುಗಳಲ್ಲಿ 3,88,907 ಬಿ.ಪಿ.ಎಲ್. ಪಡಿತರದಾರರು, 1,02,142 ಎ.ಪಿ.ಎಲ್. ಪಡಿತರದಾರರು ಸೇರಿದಂತೆ ಒಟ್ಟು 4,91,949ಪಡಿತರ ಚೀಟಿದಾರರು ಬಲವರ್ಧಿತ ಅಕ್ಕಿಯನ್ನು ಪಡೆಯಲಿದ್ದಾರೆ.
READ | ಶಿವಮೊಗ್ಗದ ಹಲವು ಗ್ರಾಪಂಗಳಿಗೆ ಚುನಾವಣೆ ಡೇಟ್ ಫಿಕ್ಸ್, ಪಂಚಾಯಿತಿ ಮಾಹಿತಿಗಾಗಿ ಓದಿ
ಕಳೆದ ಸಾಲಿನಲ್ಲಿ ಅಕ್ರಮವಾಗಿ ಪಡಿತರ ಚೀಟಿಯನ್ನು ಹೊಂದಿದ್ದ 3,729 ಜನರನ್ನು ಗುರುತಿಸಿ, ಅವರಿಂದ ಸುಮಾರು ₹25 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 8,272 ಗ್ರಾಹಕರನ್ನು ಗುರುತಿಸಿ, ₹16 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆ, ಸರ್ಕಾರಿ ನೌಕರರ ಎಚ್.ಆರ್.ಎಂ.ಎಸ್. ತಂತ್ರಾಂಶ ಮತ್ತು ಕಂದಾಯ ಇಲಾಖೆಗಳು ಹೊಂದಿರುವ ತಂತ್ರಾಂಶದ ಆಧಾರದ ಮೇಲೆ ಅಕ್ರಮ ಪಡಿತರ ಚೀಟಿದಾರರನ್ನು ಗುರುತಿಸಿ, ಅಂತಹವರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗುತ್ತಿದೆ. ಅಲ್ಲದೆ ದಂಡ ವಸೂಲಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯಲಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಂಜುನಾಥ್, ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾದ ವಿಭಾಗೀಯ ವ್ಯವಸ್ಥಾಪಕ ಭಗವಾನ್ ಸಿಂಗ್, ಗುಣಮಟ್ಟ ನಿಯಂತ್ರಣಾಧಿಕಾರಿ ಶಿವಕುಮಾರ್ ಸೇರಿದಂತೆ ಆಹಾರ ಇಲಾಖೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.